ಹೋಟೆಲ್‌ಗೆ ನುಗ್ಗಿದ ಕಳ್ಳರು ಮಸಾಲೆ ಪದಾರ್ಥಗಳನ್ನು ಕದ್ದಿದ್ದಾರೆ. ಕಳ್ಳರು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೂ ದೋಚಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದ್: ತೆಲಂಗಾಣದ ಕೋಟುಗುಡಮ್ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಹೋಟೆಲ್‌ಗೆ ನುಗ್ಗಿದ ಕಳ್ಳರು ಶುಂಠಿ, ಬೆಳ್ಳುಳ್ಳಿ ಸೇರಿದಂತೆ ಕಿಚನ್‌ನಲ್ಲಿದ್ದ ಎಲ್ಲಾ ಮಸಾಲೆ ಪದಾರ್ಥಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ವಿಷಯ ಕೇಳಿದ ಜನರು, ಪಾಪ... ಕಳ್ಳರು ತುಂಬಾ ಬಡವರಾಗಿರಬೇಕು ಎಂದು ಕನಿಕರ ವ್ಯಕ್ತಪಡಿಸಿದ್ದಾರೆ. ಹಾಗೆ ಹೋಟೆಲ್ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಸಹ ಕದ್ದೊಯ್ದಿದ್ದಾರೆ. ಈ ಸಂಬಂಧ ಹೋಟೆಲ್ ಮಾಲೀಕ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಟುಗುಡಮ್ ಜಿಲ್ಲೆಯ ಆಶ್ವಪುರಂ ಎಂಬಲ್ಲಿ ನರೇಶ್ ಎಂಬವರು ಸಿತಾರಾ ಹೆಸರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಎಂದಿನಂತೆ ನರೇಶ್, ಭಾನುವಾರ ರಾತ್ರಿ ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ರೆಸ್ಟೊರೆಂಟ್ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು. ಇಂದು ಬೆಳಗ್ಗೆ ರೆಸ್ಟೋರೆಂಟ್‌ಗೆ ಬಂದಾಗ ಬಾಗಿಲು ಮುರಿದು ಕಳ್ಳತನ ಮಾಡಿರೋದು ಕಂಡು ಬಂದಿದೆ. ಒಳಗಡೆ ಬಂದು ಗಲ್ಲಾಪೆಟ್ಟಿಗೆ ತೆಗೆದು ನೋಡಿದಾಗ ಅಲ್ಲಿದ್ದ ಹಣವೆಲ್ಲಾ ಕಳ್ಳತನವಾಗಿರೋದು ಗಮನಿಸಿದ್ದಾರೆ. ನಂತರ ಕಿಚನ್‌ ನಲ್ಲಿದ್ದ ಎಲ್ಲಾ ಮಸಾಲೆ ಪದಾರ್ಥ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ನರೇಶ್, ಠಾಣೆಗೆ ತೆರಳಿ ಕಳ್ಳತನ ಸಂಬಂಧ ದೂರು ದಾಖಲಿಸಿದ್ದಾರೆ.

ಕಿಚನ್‌ನಲ್ಲಿದ್ದ ಬೆಳ್ಳುಳ್ಳಿ-ಶುಂಠಿ ಸೇರಿದಂತೆ ಎಲ್ಲಾ ಮಸಾಲೆಗಳನ್ನು ಕಳ್ಳತನ ಮಾಡಲಾಗಿದೆ. ಇವುಗಳ ಮೌಲ್ಯ ಅಂದಾಜು 1 ಲಕ್ಷ ರೂಪಾಯಿ ಆಗಿದೆ. ಕೌಂಟರ್ ಗಲ್ಲಾಪೆಟ್ಟಿಗೆಯಲ್ಲಿದ್ದ 40 ಸಾವಿರ ರೂಪಾಯಿ ನಗದು ಸಹ ಕಳ್ಳತನವಾಗಿದೆ. ರೆಸ್ಟೋರೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ವೈರ್ ಸಹ ಕಟ್ ಮಾಡಲಾಗಿದೆ. ಹಾಗಾಗಿ ಕಳ್ಳತನದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ ಎಂದು ಸಿತಾರಾ ರೆಸ್ಟೋರೆಂಟ್ ಮಾಲೀಕ ನರೇಶ್ ಹೇಳುತ್ತಾರೆ. 

ಕಳ್ಳರು ಮೊದಲು ಸಿಸಿಟಿವಿ ಕ್ಯಾಮೆರಾದ ವೈರ್ ಕತ್ತರಿಸಿ ತಮ್ಮ ಕೆಲಸ ಮಾಡಿದ್ದಾರೆ. ಕಳ್ಳರು ಮೊದಲು ಹಣ ಕಳ್ಳತನ ಮಾಡುತ್ತಿದ್ದರು. ಇದೀಗ ಮಸಾಲೆ ಪದಾರ್ಥಗಳನ್ನು ತೆಗೆದುಕೊಂಡು ಹೋಗಿರೋದು ಅಚ್ಚರಿಗೆ ಕಾರಣವಾಗಿದೆ. ನರೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

24 ಗಂಟೆಯೊಳಗೆ 29 ಲಕ್ಷ ಕಳ್ಳತನದ ಪ್ರಕರಣ ಪತ್ತೆ
ಮಸೀದಿಗೆ ನಮಾಜ್ ಮಾಡಲು ಹೋಗಿದ್ದ ವೇಳೆ ಗೂಡ್ಸ್ ವಾಹನದಲ್ಲಿದ್ದ 29 ಲಕ್ಷ ರೂ. ನಗದು ಕಳ್ಳತನ ಮಾಡಿದ್ದ ಮೂವರನ್ನು 24 ಗಂಟೆಯೊಳಗೆ ತೀರ್ಥಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರಿಂದ 29 ಲಕ್ಷ ರೂ. ನಗದು, 10 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ ಮತ್ತು 6 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸೈಯದ್ ಅಬ್ದುಲ್ಲಾ(45), ನವೀದ್ ಅಹಮ್ಮದ್ (40) ಮತ್ತು ಜಾವಿದ್(42) ಬಂಧಿತರು. ಇದರಲ್ಲಿ ಗೂಡ್ಸ್ ವಾಹನದ ಚಾಲಕ ಜಾವೀದ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. 

ಹೊನ್ನಾಳಿ ಬೊಂಬು ಬಜಾರ್‌ನ ಮಹಮದ್‌ ಇರ್ಷಾದ್ ಅವರು ಗೂಡ್ಸ್ ವಾಹನದಲ್ಲಿ ಸ್ಕಾಪ್ ವ್ಯವಹಾರದ ಸಂಬಂಧ 29 ಲಕ್ಷ ರೂ. ನಗದುಸಹಿತ ಮಂಗಳೂರಿಗೆ ಹೊರಟಿದ್ದರು. ಮಾರ್ಗಮಧ್ಯೆ ರಂಜದಕಟ್ಟೆಯಲ್ಲಿ ಗೂಡ್ಸ್‌ ವಾಹನವನ್ನು ನಿಲ್ಲಿಸಿ ನಮಾಜ್‌ಗೆ ತೆರಳಿದ್ದರು. ಅವರೊಂದಿಗೆ ಚಾಲಕ ಜಾವಿದ್ ಕೂಡ ನಮಾಜ್‌ಗೆ ತೆರಳಿದ್ದ. ಹಣವನ್ನು ವಾಹನದಲ್ಲೇ ಬಿಟ್ಟುಹೋಗಿದ್ದು ವಾಪಸ್ ಬಂದು ನೋಡಿದಾಗ ಗೂಡ್ಸ್ ವಾಹನ ಸ್ಥಳದಲ್ಲಿ ಇರಲಿಲ್ಲ. 

ಇದನ್ನೂ ಓದಿ: ಬೆಲೆ ಕುಸಿತದಿಂದ ನಲುಗಿದ್ದ ಕೆಂಪು ಮೆಣಸು ಬೆಳೆಗಾರರ ಕೈ ಹಿಡಿದ ಕೇಂದ್ರ, ಆಂಧ್ರ ಸರ್ಕಾರ

ಈ ಬಗ್ಗೆ ಇರ್ಷಾದ್ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ , ಸಿಪಿಐ ಇಮ್ರಾನ್ ಬೇಗ್ ನೇತೃತ್ವದಲ್ಲಿ ತಕ್ಷಣವೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ದೂರು ದಾಖಲಿಸಿಕೊಂಡ ತೀರ್ಥಹಳ್ಳಿ ಪೊಲೀಸರಿಗೆ ಮೊದಲಿಗೆ ಅನುಮಾನ ಮಾಡಿದೆ ಚಾಲಕ ಜಾವಿದ್ ಮೇಲೆ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸಂಚು ಬಯಲಿಗೆ ಬಂದಿತ್ತು ಚಾಲಕ ಜಬೀದ್ ಪ್ರಯಾಣದ ಇಂಚಿಂಚು ಮಾಹಿತಿಯನ್ನು ಮೊಬೈಲ್ ಮೂಲಕ ಸೈಯದ್ ಅಬ್ದುಲ್ಲಾ ಮತ್ತು ನವೀದ್ ಅಹ್ಮದ್ ಗೆ ತಿಳಿಸುತ್ತಿದ್ದನು. 

ಕಳ್ಳತನ ಮಾಡಲೆಂದೆ ಮೊದಲೇ ಜಾವಿದ್ ಗೂಡ್ಸ್ ವಾಹನದ ಕೀಯನ್ನು ನಕಲಿ ಮಾಡಿಸಿದ್ದ . ನಕಲಿ ಕೀ ಅನ್ನು ಸಯ್ಯದ್ ಮತ್ತು ನವೀದ್ ಗೆ ಕೊಟ್ಟಿದ್ದ . ಹೊನ್ನಾಳಿಯಿಂದ ಹಿಂಬಾಲಿಸಿಕೊಂಡು ಬಂದಿದ್ದ ಇಬ್ಬರು ರಂಚದ ಕಟ್ಟೆ ಬಳಿ ನಿಂತಿದ್ದ ಗೂಡ್ಸ್ ವಾಹನವನ್ನು ಕೊಂಡೊಯ್ದಿದ್ದರು. ಒಂದೆರಡು ಕಿ.ಮಿ. ವರೆಗೆ ಹೋಗಿ ರಸ್ತೆ ಬದಿ ಗೂಡ್ಸ್ ವಾಹನ ನಿಲ್ಲಿಸಿ, ಕಾರಿನ ಮೂಲಕ ಹೊನ್ನಾಳಿಗೆ ವಾಪಸ್ ಆಗಿದ್ದರು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಐಐಟಿ ಮದ್ರಾಸ್‌ನ ಹೈಪರ್‌ ಲೂಪ್‌ಗೆ ಶೀಘ್ರವೇ ವಿಶ್ವದ ಅತಿ ಉದ್ದದ ಹೈಪರ್‌ ಲೂಪ್ ಹಿರಿಮೆ