ಪಿಎಂ ಕೇ​ರ್‍ಸ್ ನಿಧಿ ವಿವಾದ: ಕೇಂದ್ರ ಸರ್ಕಾರಕ್ಕೆ ಗೆಲುವು| ಎನ್‌ಡಿಆರ್‌ಎಫ್‌ಗೆ ಹಣ ವರ್ಗಕ್ಕೆ ಸುಪ್ರೀಂ ನಕಾರ| ನಿಧಿ ಬಳಕೆ ಪ್ರಶ್ನಿಸಿದ್ದ ಪ್ರತಿಪಕ್ಷಗಳಿಗೆ ಮುಖಭಂಗ

ನವದೆಹಲಿ(ಆ.19): ಕೊರೋನಾ ಸೋಂಕು ವಿರುದ್ಧ ಹೋರಾಡಲು ಸೃಷ್ಟಿಸಲಾಗಿರುವ ‘ಪಿಎಂ ಕೇ​ರ್‍ಸ್’ ನಿಧಿಯಲ್ಲಿ ಸಂಗ್ರಹವಾದ ನಿಧಿಯನ್ನು ರಾಷ್ಟ್ರೀಯ ವಿಪತ್ತು ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸುವಂತೆ ಆದೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಎರಡೂ ನಿಧಿಗಳು ಪ್ರತ್ಯೇಕ ಉದ್ದೇಶ ಇಟ್ಟುಕೊಂಡೇ ಆರಂಭಿಸಿದ್ದು. ಹೀಗಾಗಿ ಎನ್‌ಡಿಆರ್‌ಎಫ್‌ಗೆ ಸ್ವಯಂಪ್ರೇರಿತರಾಗಿ ಹಣ ವರ್ಗಾವಣೆ ಮಾಡಬಹುದೇ ಹೊರತೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ವರ್ಗಾವಣೆ ಮಾಡಲೇಬೇಕು ಎಂಬ ನಿಯಮವೇನಿಲ್ಲ ಎಂದು ಸ್ಪಷ್ಟಪಡಿಸಿದೆ.

Add Asianetnews Kannada as a Preferred SourcegooglePreferred

ಇದರೊಂದಿಗೆ ನಿಧಿಯಲ್ಲಿನ ಹಣದ ವಿನಿಯೋಗ ಮತ್ತು ಅದರ ಪಾರದರ್ಶಕತೆಯನ್ನು ಪ್ರಶ್ನಿಸಿದ್ದ ವಿಪಕ್ಷಗಳು ಮತ್ತು ಕೆಲ ಸಂಘಟನೆಗಳಿಗೆ ಮುಖಭಂಗವಾಗಿದ್ದರೆ, ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ಕೇಂದ್ರ ಸರ್ಕಾರಕ್ಕೆ ಗೆಲುವು ಸಿಕ್ಕಿದಂತಾಗಿದೆ.

PM ಕೇರ್ಸ್ ಫಂಡ್‌ನಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಹಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ!

ಪಿಎಂ ಕೇ​ರ್‍ಸ್ ನಿಧಿಯಲ್ಲಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿಧಿಗೆ ವರ್ಗಾಯಿಸುವಂತೆ ಆದೇಶಿಸಬೇಕು ಎಂದು ಕೋರಿ ‘ಸೆಂಟರ್‌ ಫಾರ್‌ ಪಬ್ಲಿಕ್‌ ಲಿಟಿಗೇಶನ್‌’ ಎಂಬ ಸ್ವಯಂಸೇವಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ| ಅಶೋಕ್‌ ಭೂಷಣ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ, ‘ವಿಪತ್ತು ನಿರ್ವಹಣಾ ಕಾಯ್ದೆ ಅಡಿಯೇ ಕೇಂದ್ರ ಸರ್ಕಾರವು ಕೊರೋನಾ ವಿರುದ್ಧ ಹೋರಾಡಲು ಪಿಎಂ ಕೇರ್ಸ್‌ ನಿಧಿ ರೂಪಿಸಿದೆ. ಹೀಗಾಗಿ ಪಿಎಂ ಕೇರ್ಸ್‌ ನಿಧಿಯನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತೆ ಆದೇಶಿಸಲು ಆಗದು. ಸ್ವಯಂಪ್ರೇರಿತವಾಗಿ ಎನ್‌ಡಿಆರ್‌ಎಫ್‌ಗೆ ಹಣ ವರ್ಗಾಯಿಸಬಹುದು’ ಎಂದಿತು.

ಕೊರೋನಾ ವಿರುದ್ಧ ಹೋರಾಡಲು ಸ್ಥಾಪಿಸಲಾಗಿರುವ ಪಿಎಂ ಕೇರ್ಸ್‌ ನಿಧಿ ಒಂದು ಸಾರ್ವಜನಿಕ ದತ್ತಿ ಪ್ರತಿಷ್ಠಾನ. ಇದಕ್ಕೆ ಜನರು ಸ್ವಯಂಪ್ರೇರಿತರಾಗಿ ಹಣ ನೀಡಬಹುದು. ಆದರೆ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ಗೆ ಸರ್ಕಾರವೇ ಬಜೆಟ್‌ ಅನುದಾನ ನೀಡುತ್ತದೆ ಎಂದು ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

ಇಸ್ರೇಲ್ ಬೆನ್ನಲ್ಲೇ, ಫ್ರಾನ್ಸ್‌ನಿಂದ ಭಾರತಕ್ಕೆ ವೆಂಟಿಲೇಟರ್‌, ವೈದ್ಯಕೀಯ ಉಪಕರಣ!

ಆದರೆ ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ, ‘ಪಿಎಂ ಕೇರ್ಸ್‌ ನಿಧಿಯು ಎನ್‌ಡಿಆರ್‌ಎಫ್‌ ನಿಯಮಗಳಿಗೆ ವಿರುದ್ಧವಾಗಿದೆ. ಎನ್‌ಡಿಆರ್‌ಎಫ್‌ ಅನ್ನು ಮಹಾಲೇಖಪಾಲರು ಲೆಕ್ಕಪರಿಶೋಧನೆ ಮಾಡುತ್ತಾರೆ. ಆದರೆ ಪಿಎಂ ಕೇರ್ಸ್‌ ನಿಧಿಯನ್ನು ಖಾಸಗಿ ಲೆಕ್ಕಪರಿಶೋಧಕರಿಂದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಿಧಿಯಲ್ಲಿ ಹಣ ಎಷ್ಟುಸಂಗ್ರಹವಾಗಿದೆ ಎಂಬ ಮಾಹಿತಿಯನ್ನೂ ಸರ್ಕಾರ ನೀಡುತ್ತಿಲ್ಲ’ ಎಂದು ಆರೋಪಿಸಿದ್ದರು.

ಬಿಜೆಪಿ ಸ್ವಾಗತ, ಕಾಂಗ್ರೆಸ್‌ ಟೀಕೆ:

ಸುಪ್ರೀಂ ಕೋರ್ಟ್‌ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ‘ರಾಹುಲ್‌ ಗಾಂಧಿ ಹಾಗೂ ಅವರು ಬಾಡಿಗೆ ಪಡೆದಿರುವ ಕಾರ್ಯಕರ್ತರ ದುರುದ್ದೇಶಪೂರಿತ ಅಪಪ್ರಚಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಆದರೆ ತೀರ್ಪಿಗೆ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ಪಾರದರ್ಶಕತೆಗೆ ಬಿದ್ದ ದೊಡ್ಡ ಹೊಡೆತ’ ಎಂದು ಬೇಸರಿಸಿದ್ದಾರೆ.

TikTokನಿಂದ ಪಿಎಂ ಕೇರ್ ಪಡೆದ 30 ಕೋಟಿ ವಾಪಾಸ್ ಕೊಡ್ಲಿ: ಖಾದರ್

ಏನಿದು ವಿವಾದ?

ಕೊರೋನಾ ಸೇರಿ ಸಾಂಕ್ರಾಮಿಕ ಪಿಡುಗು ನಿರ್ವಹಣೆಗೆ ದೇಣಿಗೆ ಸಂಗ್ರಹಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಪಿಎಂ ಕೇ​ರ್‍ಸ್ಗೆ ವಿಪಕ್ಷ, ಕೆಲ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ರಾಷ್ಟ್ರೀಯ ವಿಪತ್ತು ನಿಧಿ (ಎನ್‌ಡಿಆರ್‌ಎಫ್‌) ಸರ್ಕಾರಿ ಆಡಿಟಿಂಗ್‌ಗೆ ಒಳಪಡುತ್ತದೆ. ಪಿಎಂ ಕೇ​ರ್‍ಸ್ ನಿಧಿ ವಿವರ ಸರ್ಕಾರ ನೀಡುತ್ತಿಲ್ಲ. ಅದನ್ನು ಖಾಸಗಿ ಆಡಿಟ​ರ್‍ಸ್ ಪರಿಶೀಲಿಸುತ್ತಾರೆ ಎಂದು ಆರೋಪಿಸಿದ್ದವು. ಆದರೆ, ಪಿಎಂ ಕೇ​ರ್‍ಸ್ ಸಾರ್ವಜನಿಕ ಪ್ರತಿಷ್ಠಾನ, ಇದಕ್ಕೆ ಜನ ಸ್ವಪ್ರೇರಿತವಾಗಿ ದೇಣಿಗೆ ನೀಡುತ್ತಾರೆ. ಎನ್‌ಡಿಆರ್‌ಎಫ್‌ಗೆ ಸರ್ಕಾರ ನೀಡುತ್ತದೆ ಎಂದು ಕೇಂದ್ರ ಹೇಳಿತ್ತು.