2021ರ ಜನವರಿಯಲ್ಲೇ ಪೌರತ್ವ ಕಾಯ್ದೆ ಜಾರಿ: ವಿಜಯ್ ವರ್ಗೀಯ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭ| ಮುಸ್ಲಿಂ ಬಾಹುಳ್ಯದ ಪಾಕಿಸ್ತಾನ, ಆಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನಾಗರಿಕತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯ್ದೆ 2021ರ ಜನವರಿಯಲ್ಲೇ ಪೌರತ್ವ ಕಾಯ್ದೆ ಜಾರಿ
ಬರಸಾತ್(ಡಿ.07): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮುಸ್ಲಿಂ ಬಾಹುಳ್ಯದ ಪಾಕಿಸ್ತಾನ, ಆಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನಾಗರಿಕತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಮುಂದಿನ ವರ್ಷದ ಜನವರಿಯಲ್ಲಿ ಜಾರಿ ಮಾಡುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗೀಯ ತಿಳಿಸಿದ್ದಾರೆ.
ಬಿಜೆಪಿಯ ಈ ನಿರ್ಧಾರವು ಪಶ್ಚಿಮ ಬಂಗಾಳ ಮತಬೇಟೆಯ ಯತ್ನ ಎಂದೇ ವಿಶ್ಲೇಷಿಸಲಾಗುತ್ತಿದೆ. ಉತ್ತರ ಪರಗಣ ಜಿಲ್ಲೆಯಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಇನ್ನು ಅನ್ಯಾಯ ಸಹಿಸಲ್ಲ’ ಎಂಬ ಆಂದೋಲನವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಜಯವರ್ಗೀಯ ಅವರು, ‘ನೆರೆ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕನಿಕರವೇ ಇಲ್ಲ’ ಎಂದು ದೂರಿದರು.
ಆದರೆ, ಈ ರೀತಿ ಆಶ್ರಯ ಅರಸಿ ಬಂದ ನೆರೆ ರಾಷ್ಟ್ರದ ನಿರಾಶ್ರಿತರಿಗೆ ಭಾರತದ ಪೌರತ್ವ ಕಲ್ಪಿಸುವ ಪ್ರಕ್ರಿಯೆ ಮುಂದಿನ ವರ್ಷದ ಜನವರಿಯಿಂದಲೇ ಆರಂಭವಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಆದರೆ ಇದು ಪಶ್ಚಿಮ ಬಂಗಾಳ ಜನತೆಯನ್ನು ಮೂರ್ಖರನ್ನಾಗಿಸುವ ಬಿಜೆಪಿಯ ಹುನ್ನಾರ ಎಂದು ಟಿಎಂಸಿ ಮುಖಂಡ ಫಿರ್ಹಾದ್ ಹಕೀಂ ಕಿಡಿಕಾರಿದ್ದಾರೆ.