ಉಚಿತ ಲಸಿಕೆ ಘೋಷಣೆ ಸರಿಯಾಗಿದೆ: ನಿರ್ಮಲಾ| ಪ್ರಣಾಳಿಕೆಯಲ್ಲಿ ಭರವಸೆ ನೀಡಲು ಅವಕಾಶವಿದೆ

ನವದೆಹಲಿ(ಅ.25): ‘ಬಿಹಾರದಲ್ಲಿ ಬಿಜೆಪಿ ಗೆದ್ದರೆ ಉಚಿತ ಕೊರೋನಾ ಲಸಿಕೆ ನೀಡಲಾಗುವುದು’ ಎಂಬ ಪ್ರಣಾಳಿಕೆಯಲ್ಲಿನ ಅಂಶವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ. ‘ನಮ್ಮ ಘೋಷಣೆ ನಿಯಮಬದ್ಧವಾಗಿಯೇ ಇದೆ. ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ಹೇಳುವ ಅವಕಾಶ ನಮಗೆ ಇದೆ’ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ನಿರ್ಮಲಾ ಅವರೇ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಆದರೆ ಉಚಿತ ಕೊರೋನಾ ಲಸಿಕೆ ಘೋಷಣೆಯನ್ನು ಪ್ರಶ್ನಿಸಿದ್ದ ಪ್ರತಿಪಕ್ಷಗಳು, ‘ಕೊರೋನಾ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇತರ ರಾಜ್ಯಗಳಿಗೆ ಏಕೆ ಕೊರೋನಾ ಲಸಿಕೆ ಉಚಿತವಿಲ್ಲ? ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಲಾ, ‘ಅದು ಪ್ರಣಾಳಿಕೆ ಘೋಷಣೆ. ಅಧಿಕಾರಕ್ಕೆ ಬಂದಾಗ ಏನು ಮಾಡುತ್ತೇವೆ ಎಂದು ನಾವು ಹೇಳಬಹುದು. ಎಲ್ಲ ಪಕ್ಷಗಳೂ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುತ್ತವೆ. ಅದನ್ನೇ ನಾವು ಮಾಡಿದ್ದೇವೆ. ಆರೋಗ್ಯ ಎಂಬುದು ರಾಜ್ಯ ಪಟ್ಟಿಯಲ್ಲಿ ಬರುವ ವಿಷಯ. ಹೀಗಾಗಿ ನಿಯಮಬದ್ಧವಾಗಿಯೇ ಇದೆ’ ಎಂದು ಶನಿವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.