Anil Deshmukh admitted ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆ ದಾಖಲು!
- ಹಫ್ತಾ ಕೇಸ್, ಮನಿ ಲಾಂಡರಿಂಗ್ ಆರೋಪ ಹೊತ್ತಿರುವ ದೇಶ್ಮುಖ್
- ಎದೆ ನೋವು, ಹೈ ಬಿಪಿಯಿಂದ ತೀವ್ರ ನಿಘಾತ ಘಟಕದಲ್ಲಿ ಚಿಕಿತ್ಸೆ
- ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೇಶ್ಮುಖ್
ಮುಂಬೈ(ಮೇ.27): ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಾಯಕ ಅನಿಲ್ ದೇಶ್ಮುಖ್ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ದೇಶ್ಮುಖ್ ಅವರನ್ನು ಮುಂಬೈನ KEM ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರ ಎದೆ ನೋವು, ಹೈ ಬಿಪಿ ಹಾಗೂ ಭುಜದ ನೋವಿನಿಂದ ಬಳಲಿದ ಅನಿಲ್ ದೇಶ್ಮುಖ್ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಪಾಲಾದ ಬಳಿಕ ಅನಿಲ್ ದೇಶ್ಮುಖ್ ಆರೋಗ್ಯ ಕ್ಷೀಣಿಸಿತ್ತು ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಬಂಧನ!
ಕೋರ್ಟ್ ವಿಚಾರಣೆ ವೇಳೆ ತಮಗೆ ಮಲಗಲು ಹಾಸಿಗೆ ಹಾಗೂ ಮನೆಯೂಟ ನೀಡಲು 71 ವರ್ಷದ ಅನಿಲ್ ದೇಶ್ಮುಖ್ ಮನವಿ ಮಾಡಿದ್ದರು. ಅನಿಲ್ ದೇಶ್ಮುಖ್ ಅವರ ಆರೋಗ್ಯದ ದೃಷ್ಟಿಯಿಂದ ಹಾಸಿಗೆ ನೀಡಲು ಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಮನೆಯೂಟ ನೀಡಲು ನಿರಾಕರಿಸಿತ್ತು. ಜೈಲೂಟ ತಿನ್ನಿ ಎಂದು ಕೋರ್ಟ್ ಸೂಚಿಸಿತ್ತು.
100 ಕೋಟಿ ಹಫ್ತಾ, ಇಡಿ ಕೇಸ್
ಮುಂಬೈ ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ಮಾಸಿಕ 100 ಕೋಟಿ ರು. ಹಫ್ತಾ ವಸೂಲಿ ಮಾಡುವಂತೆ ಪೊಲೀಸರಿಗೆ ಸೂಚಿಸಿದ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದೆ
ಆರೋಪದ ಕುರಿತು ಈಗಾಗಲೇ ಸಿಬಿಐ ಕೇಸು ದಾಖಲಿಸಿಕೊಂಡು, ಪ್ರಾಥಮಿಕ ವರದಿಯನ್ನು ಬಾಂಬೆ ಹೈಕೋರ್ಟ್ಗೆ ಸಲ್ಲಿಕೆ ಮಾಡಿತ್ತು. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಡಿಗೆ ಸೂಚಿಸಿತ್ತು. ಅದರಂತೆ ಇದೀಗ ಇಡಿ ಕೂಡಾ ಕೇಸು ದಾಖಲಿಸಿಕೊಂಡಿದ್ದು, ಶೀಘ್ರವೇ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಅವರು, ಅನಿಲ್ ದೇಶ್ಮುಖ್ ತಮಗೆ ಮಾಸಿಕ 100 ಕೋಟಿ ರು. ಹಫ್ತಾ ವಸೂಲಿ ಮಾಡಿಕೊಡುವಂತೆ ಸೂಚಿಸಿದ್ದರು ಎಂದು ಆರೋಪಿಸಿದ್ದರು.
ಹಫ್ತಾ ಗೇಟ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ; ಅನಿಲ್ ದೇಶ್ಮುಖ್ ಅರ್ಜಿ ವಜಾ!
ಐಟಿ ದಾಳಿ
ತೆರಿಗೆ ವಂಚನೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ಗೆ ಸೇರಿದ ವಿವಿಧ ಕಚೇರಿ ಮತ್ತು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮುಂಬೈ, ನಾಗ್ಪುರ, ರಾಜಸ್ಥಾನದ ಜೈಪುರದಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಕಿಕ್ಬ್ಯಾಕ್ ಪಾವತಿ ಆರೋಪ ಪ್ರಕರಣದಲ್ಲಿ ದೇಶ್ಮುಖ್ ಈಗಾಗಲೇ ಸಿಬಿಐ, ಇಡಿ ತನಿಖೆ ಎದುರಿಸುತ್ತಿದ್ದಾರೆ. 100 ಕೋಟಿ ರು. ಭ್ರಷ್ಟಾಚಾರ ಆರೋಪದ ಮೇಲೆ ಮೊದಲು ಸಿಬಿಐ ದೇಶ್ಮುಖ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಬಳಿಕ ಈಡಿ ಕೂಡಾ ಪ್ರಕರಣ ದಾಖಲಿಸಿದ ತನಿಖೆ ಕೈಗೊಂಡಿತ್ತು. ಇಡಿ ಐದು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ದೇಶ್ಮುಖ್ ಇದಕ್ಕೆ ಉತ್ತರಿಸಿರಲಿಲ್ಲ.
ದೇಶ್ಮುಖ್ ವಿರುದ್ಧ ಸಿಬಿಐ ಬದಲು ಎಸ್ಐಟಿ ತನಿಖೆ:
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಬದಲು, ವಿಶೇಷ ತನಿಖಾ ದಳ ರಚನೆಗೆ ಅವಕಾಶ ನೀಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಚ್ ಶುಕ್ರವಾರ ತಿರಸ್ಕರಿಸಿದೆ. ಬಾಂಬೆ ಹೈಕೋರ್ಚ್ ಈ ಅರ್ಜಿಯನ್ನು 2021ರ ಡಿ.15ರಂದು ತಿರಸ್ಕರಿಸಿತ್ತು. ಇದಾದ ನಂತರ ಸರ್ಕಾರ ಸುಪ್ರೀಂ ಕೋರ್ಚ್ಗೆ ಮೇಲ್ಮನವಿ ಸಲ್ಲಿಸಿತ್ತು.