ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ನವನೀತ್ ರಾಣಾ ವಿರುದ್ಧ ಶುಕ್ರವಾರ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. 

ಹೈದರಾಬಾದ್‌ (ಮೇ.11): ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ನವನೀತ್ ರಾಣಾ ವಿರುದ್ಧ ಶುಕ್ರವಾರ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. ಇಲ್ಲಿ ಗುರುವಾರ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ವಿರುದ್ಧ ವಾಗ್ದಾಳಿ ನಡೆಸಿದ ನವನೀತ್‌ ರಾಣಾ ಅವರು, ‘ಕಾಂಗ್ರೆಸ್‌ಗೆ ಮತ ಹಾಕುವುದೆಂದರೆ ಪಾಕಿಸ್ತಾನಕ್ಕೆ ಮತ ಹಾಕುವುದು, 15 ಸೆಕೆಂಡುಗಳ ಕಾಲ ಪೊಲೀಸರನ್ನು ಕರ್ತವ್ಯದಿಂದ ತೆಗೆದು ಹಾಕಿದರೆ, ಓವೈಸಿ ಸೋದರರು ಎಲ್ಲಿಂದ ಬಂದರು ಮತ್ತೆ ಎಲ್ಲಿಗೆ ಹೋದರು ಎಂದು ತಿಳಿಯುವುದಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ಕಿಡಿಕಾರಿದ್ದರು.

ಒವೈಸಿಗೆ ಸವಾಲ್: ಹೈದರಾಬಾದ್‌ನ ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಓವೈಸಿ 11 ವರ್ಷಗಳ ಹಿಂದೆ ನೀಡಿದ್ದ ‘15 ನಿಮಿಷ ಪೊಲೀಸರನ್ನು ತೆಗೆಯಿರಿ, ನಾವೇನು ಮಾಡುತ್ತೇವೆಂದು ತೋರಿಸುತ್ತೇವೆ’ ಎಂಬ ಪ್ರಚೋದನಕಾರಿ ಹೇಳಿಕೆಗೆ ಈಗ ಬಿಜೆಪಿ ನಾಯಕಿ ನವನೀತ್‌ ರಾಣಾ ತಿರುಗೇಟು ನೀಡಿ, ‘ನಮಗೆ ಬರೀ 15 ಸೆಕೆಂಡ್‌ ಸಾಕು’ ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್‌ನಲ್ಲಿ ಎಐಎಂಎಐಎಂ ಸಂಸದ ಅಸಾದುದ್ದೀನ್‌ ಓವೈಸಿ ವಿರುದ್ಧ ಬಿಜೆಪಿಯ ಮಾಧವಿ ಲತಾ ಸ್ಪರ್ಧಿಸಿದ್ದಾರೆ. ಅವರ ಪರ ಮಹಾರಾಷ್ಟ್ರದ ಮಾಜಿ ಸಂಸದೆ ನವನೀತ್‌ ರಾಣಾ ಗುರುವಾರ ಪ್ರಚಾರ ನಡೆಸಿ, ‘ಓವೈಸಿಯ ಸಹೋದರ ಹಿಂದೆ 15 ನಿಮಿಷ ಪೊಲೀಸರನ್ನು ತೆಗೆಯಿರಿ, ನಾವೇನು ಮಾಡುತ್ತೇವೆಂದು ತೋರಿಸುತ್ತೇವೆ ಎಂದಿದ್ದರು. ನಾನು ಅವರಿಗೆ ಹೇಳುತ್ತೇನೆ, ನಿಮಗೆ 15 ನಿಮಿಷ ಬೇಕಾಗಬಹುದು, ಆದರೆ ನಮಗೆ ಬರೀ 15 ಸೆಕೆಂಡ್‌ ಸಾಕು...’ ಎಂದು ಹೇಳಿದರು.

ಶಿಂಧೆ, ಅಜಿತ್ ಬಣ ಸೇರಿ: ಪವಾರ್, ಉದ್ಧವ್‌ಗೆ ಪ್ರಧಾನಿ ಮೋದಿ ಆಹ್ವಾನ

ಇದೇ ವೇಳೆ ಅವರು, ‘ಮಾಧವಿ ಲತಾ ಖಂಡಿತ ಹೈದರಾಬಾದ್‌ ಪಾಕಿಸ್ತಾನ ಆಗುವುದನ್ನು ತಡೆಯುತ್ತಾರೆ. ಕಾಂಗ್ರೆಸ್‌ ಅಥವಾ ಎಐಎಂಐಎಂಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ’ ಎಂದೂ ಕಿಡಿಕಾರಿದರು. ರಾಣಾ ಹೇಳಿಕೆಗೆ ತಿರುಗೇಟು ನೀಡಿರುವ ಅಸಾದುದ್ದೀನ್‌ ಓವೈಸಿ, ‘ಮೋದಿಜೀ, ಅವರಿಗೆ 15 ಸೆಕೆಂಡ್‌ ಕೊಡಿ. ಏನು ಮಾಡುತ್ತಾರೋ ನೋಡೋಣ. 15 ಸೆಕೆಂಡ್‌ ಯಾಕೆ, ಒಂದು ತಾಸು ಕೊಡಿ. ಏನು ಮಾಡುತ್ತಾರೋ ಮಾಡಲಿ. ಇಲ್ಲಿ ಏನಾದರೂ ಮಾನವೀಯತೆ ಉಳಿದಿದೆಯಾ? ನಾವು ಯಾರಿಗೂ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧರಿದ್ದೇವೆ’ ಎಂದು ಹೇಳಿದರು.