ನಟಿ ತಾಪ್ಸಿ, ಅನುರಾಗ್ ಕಶ್ಯಪ್ಗೆ ಐಟಿ ಬಿಸಿ!
ನಟಿ ತಾಪ್ಸಿ, ಕಶ್ಯಪ್ಗೆ ಐಟಿ ಬಿಸಿ| ಬಾಲಿವುಡ್ ಸ್ಟಾರ್ಗಳ ಮೇಲೆ ತೆರಿಗೆ ದಾಳಿ| 30 ಸ್ಥಳಗಳಲ್ಲಿ ಶೋಧ| ತೆರಿಗೆ ವಂಚನೆ ಆರೋಪದಡಿ ಶೋಧ| ಕೇಂದ್ರವನ್ನು ಟೀಕಿಸಿದ್ದ ನಟರು
ಮುಂಬೈ/ನವದೆಹಲಿ(ಮಾ.04): ತೆರಿಗೆ ವಂಚನೆ ಆರೋಪದ ಪ್ರಕರಣ ಸಂಬಂಧ ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ನಿವಾಸ ಮತ್ತು ಅವರ ಕೆಲ ಉದ್ಯಮ ಸ್ನೇಹಿತರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮುಂಬೈ ಮತ್ತು ಪುಣೆಯ 30 ಸ್ಥಳಗಳ ಮೇಲೆ ಏಕಕಾಲದಲ್ಲಿ ನಡೆದ ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪುಣೆಯಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ತೆರಿಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ತೆರಿಗೆ ದಾಳಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಕ್ತವಾಗಿ ಮಾತನಾಡಿದ್ದಕ್ಕಾಗಿ ಇಬ್ಬರ ಮೇಲೂ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಮತ್ತು ಎನ್ಸಿಪಿ ಟೀಕಿಸಿವೆ.
ತೆರಿಗೆ ವಂಚನೆ:
2011ರಲ್ಲಿ ಅನುರಾಗ್ ಕಶ್ಯಪ್ ಫ್ಯಾಂಟಮ್ ಫಿಲ್ಸ್್ಮ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಇದರ ಮೂಲಕ ‘ಲುಟೇರಾ’, ‘ಕ್ವೀನ್’, ‘ಎನ್ಎಚ್10’, ‘ಉಡ್ತಾ ಪಂಜಾಬ್’ ಸೇರಿದಂತೆ ಹಲವು ಚಿತ್ರ ನಿರ್ಮಿಸಿದ್ದರು. ಅವರ ಈ ಉದ್ಯಮದಲ್ಲಿ ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕ ವಿಕಾಸ್ ಬಹಲ್, ಮಧು ಮಂಟೇನಾ ಪಾಲುದಾರರಾಗಿದ್ದರು. 2018ರಲ್ಲಿ ಈ ಸಂಸ್ಥೆಯನ್ನು ಮುಚ್ಚಿ ಕಶ್ಯಪ್ ಬೇರೊಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಆದರೆ ಈ ಚಿತ್ರಸಂಸ್ಥೆ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ನಡೆಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆದಾಯ ತೆರಿಗೆ ಇಲಾಖೆ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ದಾಳಿ ನಡೆಸಿದೆ.
ಬುಧವಾರ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್, ರಿಲಯನ್ಸ್ ಎಂಟರ್ಟೇನ್ಮೆಂಟ್ ಸಮೂಹದ ಸಿಇಒ ಶಿಭಾಶೀಸ್ ಸರ್ಕಾರ್, ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಕ್ವಾನ್ ಮೇಲೆ ದಾಳಿ ನಡೆಸಲಾಗಿದೆ.
ಇದು ರಾಜಕೀಯ ಪ್ರೇರಿತ:
ನಟಿ ತಾಪ್ಸಿ ಪನ್ನು ಹಾಗೂ ಕಶ್ಯಪ್ ನಿವಾಸ ಮತ್ತು ಕಚೇರಿಗಳ ಮೇಲಿನ ಐ.ಟಿ ದಾಳಿಯನ್ನು ಬಿಜೆಪಿಯ ರಾಜಕೀಯ ಪ್ರೇರಿತ ದಾಳಿ ಎಂದು ಮಹಾರಾಷ್ಟ್ರದ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ದೂರಿವೆ. ಬಿಜೆಪಿಯ ಜನವಿರೋಧಿ ನಿಲುವುಗಳ ವಿರುದ್ಧ ಧ್ವನಿಯೆತ್ತುವವರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸತ್ಯ ಹೇಳಿದವರ ಬಾಯಿ ಮುಚ್ಚಿಸಲು ಇದು ಕೇಂದ್ರ ಸರ್ಕಾರ ಒತ್ತಡ ಹೇರುವ ತಂತ್ರದ ಭಾಗ ಎಂದು ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್ ಟೀಕಿಸಿದ್ದಾರೆ.