ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಧೂಮಪಾನ, ವಿದ್ಯಾರ್ಥಿ- ಸೆಕ್ಯೂರಿಟಿಗಾರ್ಡ್ ನಡುವೆ ಮಾರಾಮಾರಿ!
ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಧೂಮಪಾನ ಮಾಡಿದ್ದಾರೆ. ಕದ್ದುಮುಚ್ಚಿ ಪಾರ್ಟಿಯೂ ನಡೆದಿದೆ. ಇದನ್ನ ಪ್ರಶ್ನಿಸಿದ ಸೆಕ್ಯೂರಿಟಿ ಗಾರ್ಡ್ ಜೊತೆಗೆ ವಾಗ್ವಾದ ಆರಂಭಗೊಂಡಿದೆ. ಅಂತಿಮವಾಗಿ ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ನಡುವೆ ಮಾರಾಮಾರಿಯೇ ನಡೆದು ಹೋಗಿದೆ.
ನವದೆಹಲಿ(ಜೂ.05): ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಾಸ್ಟೆಲ್ನಲ್ಲಿ ಧೂಮಪಾನ ವಿಚಾರವಾಗಿ ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಕೋಲುಗಳಿಂದ ಎರಡು ಗುಂಪು ಹೊಡೆದಾಡಿಕೊಂಡು ಕೊನೆಗೆ ಪೊಲೀಸರು ಮಧ್ಯಪ್ರವೇಶಿ ಪರಿಸ್ಥಿತಿ ನಿಯಂತ್ರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪ್ರಕರಣದಲ್ಲಿ ಎರಡು ಗುಂಪಿನ ಒಟ್ಟು 33 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧನ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಗೌತಮ ಬುದ್ಧ ವಿಶ್ವವಿದ್ಯಾಲಯದ ಮುನ್ಶಿ ಪ್ರೇಮಚಂದ್ ಹಾಸ್ಟೆಲ್ನಲ್ಲಿ ಕೆಲ ವಿದ್ಯಾರ್ಥಿಗಳು ಧೂಮಪಾನ ಮಾಡಿದ್ದಾರೆ. ಜೊತೆ ಹಾಸ್ಟೆಲ್ ಒಳಗಡೆ ಪಾರ್ಟಿ ಮಾಡಿದ್ದಾರೆ. ಈ ಮಾಹಿತಿ ತಿಳಿದ ಸೆಕ್ಯೂರಿಟಿ ಗಾರ್ಡ್ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ವಿಶ್ವವಿದ್ಯಾಲಯ ಆವರಣದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಗದರಿಸಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವನ್ನೇ ಬಂದ್ ಮಾಡಿದ ಚಿಪ್ಸ್ ಪ್ಯಾಕೆಟ್
ಈ ವಾಗ್ವಾದ ಜೋರಾಗಿದೆ. ವಿದ್ಯಾರ್ಥಿಗಳು ಸೇರಿದರೆ, ಇತ್ತ ಸೆಕ್ಯೂರಿಟಿ ಗಾರ್ಡ್ಗಳು ಒಂದಾಗಿದ್ದಾರೆ. ಎರಡು ಗಂಪಿನ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ ಕೋಲುಗಳಿಂದ ಬಡಿದಾಡಿದ್ದಾರೆ. ಹೊಡೆದಾಟ ಜೋರಾಗಿದೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿಗಾರ್ಡ್ ಗುಂಪಿನ ಒಟ್ಟು 33 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿಗಾರ್ಡ್ ಎರಡು ಗುಂಪುಗಳು ದೂರು ದಾಖಲಿಸಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಶಿಸ್ತು ಮೀರಿದ್ದಾರೆ. ನಮ್ಮ ಕೆಲಸ ನಿಯಮಮೀರದಂತೆ ನೋಡಿಕೊಳ್ಳುವುದು. ನಾವು ನೇಮಕಗೊಂಡಿರುವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಲು. ಆದರೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಆವರಣದಲ್ಲಿ ಧೂಮಪಾನ ಮಾಡಿದ್ದಾರೆ. ಇದು ನಿಯಮ ಬಾಹಿರವಾಗಿದೆ. ಇದನ್ನು ಪ್ರಶ್ನಿಸಿದ ನಮ್ಮ ಮೇಲೆ ಜಗಳಕ್ಕೆ ನಿಂತಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ಗಳು ದೂರಿದ್ದಾರೆ.
ಇತ್ತ ಸೆಕ್ಯೂರಿಟಿ ಗಾರ್ಡ್ ಮೇಲೆ ವಿದ್ಯಾರ್ಥಿಗಳ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದೀಗ ಇಬ್ಬರ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಘಟನೆ ಕುರಿತು ಹಲವು ವಿಡಿಯೋಗಳು ವಿದ್ಯಾರ್ಥಿಗಳ ಮೊಬೈಲ್ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ.
ಕುಸ್ತಿಪಟು ಪ್ರತಿಭಟನೆ ಬೆಂಬಲಿಸಿದ ರೈತ ಸಂಘಟನೆಯಲ್ಲಿ ಭಿನ್ನಮತ, ಕ್ಯಾಮೆರಾ ಮುಂದೆ ಜಟಾಪಟಿ!
ಮಾರಾಮಾರಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಜಖಂಗೊಂಡಿದೆ. ಕೆಲವರಿಗೆ ಗಾಯಗಳಾಗಿವೆ. ಇತ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಹಲವು ವಿದ್ಯಾರ್ಥಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಸೆಕ್ಯೂರಿಟಿ ಗಾರ್ಡ್ಗಳು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.