* ಬೇಗ ಮದುವೆ ಮಾಡಿ ಮುಗಿಸಲು ಪೋಷಕರ ಧಾವಂತ* 3ನೇ ಅಲೆ ಆತಂಕ: ಆಂಧ್ರದಲ್ಲಿ 13 ದಿನದಲ್ಲಿ 50,000 ಮದುವೆ* ಶ್ರಾವಣದಲ್ಲಿ ಮುಹೂರ್ತ ಕಡಿಮೆಯಿರುವುದೂ ಕಾರಣ

ವಿಜಯವಾಡ(ಆ.16): ಕೊರೋನಾ ಮೂರನೇ ಅಲೆಯ ಭೀತಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರಿಗೆ ಮಾತ್ರವಲ್ಲ, ಮಕ್ಕಳ ಮದುವೆಗೆ ಕಾದಿರುವವರಿಗೂ ಭಾರೀ ಆತಂಕ ಹುಟ್ಟಿಸಿದೆ. ಹೀಗಾಗಿಯೇ 3ನೇ ಅಲೆ ಬರುವ ಮುನ್ನವೇ ಮಕ್ಕಳ ಮದುವೆ ಮಾಡಲು ಆಂಧ್ರದಲ್ಲಿ ಸಾವಿರಾರು ಪೋಷಕರು ಮುಗಿಬಿದಿದ್ದಾರೆ.

Add Asianetnews Kannada as a Preferred SourcegooglePreferred

ಹೌದು. ಸೆಪ್ಟೆಂಬರ್‌, ಅಕ್ಟೋಬರ್‌ ವೇಳೆಗೆ ದೇಶಕ್ಕೆ 3ನೇ ಬರಬಹುದು ಎಂದು ಈಗಾಗಲೇ ತಜ್ಞರು ಅಂದಾಜಿಸಿದ್ದಾರೆ. ಇದರ ಜೊತೆಗೆ ವಿವಾಹ ಕಾರ್ಯಕ್ರಮಕ್ಕೆ ಪ್ರಶಸ್ತವಾದ ಶ್ರಾವಣ ಮಾಸದಲ್ಲಿ ಈ ಬಾರಿ ಮದುವೆಗೆ ಉತ್ತಮ ಮುಹೂರ್ತದ ದಿನಗಳು ಕಡಿಮೆ ಇದೆ. ಆಗಸ್ಟ್‌ನಲ್ಲಿ ಕೇವಲ 13 ದಿನ ಮಾತ್ರವೇ ಮದುವೆಗೆ ಸೂಕ್ತವೆನ್ನಿಸುವ ಮುಹೂರ್ತವಿದೆ. ನಂತರ ಸೆ.1ರಂದು ಮಾತ್ರವೇ ಉತ್ತಮ ಮುಹೂರ್ತವಿದೆ.

ಹೀಗಾಗಿ ಕೊರೋನಾ 2ನೇ ಅಲೆಯಲ್ಲಿ ಮದುವೆ ಮಾಡಲಾಗದೆ ಮುಂದೂಡಿದವರು, ಲಾಕ್ಡೌನ್‌ ಮೊದಲಾದ ಕಾರಣಗಳಿಂದ ಮದುವೆ ಮುಂದೂಡಿದವರು ಈ 13 ದಿನಗಳಲ್ಲೇ ಮದುವೆ ಮಾಡಿ ಮುಗಿಸಲು ಮುಗಿಬಿದ್ದಿದ್ದಾರೆ. ಹೀಗಾಗಿ ಆ.11ರಿಂದ ಸೆ.1ರ ನಡುವಿನ 13 ದಿನಗಳ ಅವಧಿಯಲ್ಲಿ ಆಂಧ್ರವೊಂದರಲ್ಲೇ ಕನಿಷ್ಠ 50000 ಜೋಡಿಗಳು ವಿವಾಹ ಬಂಧನಕ್ಕೆ ಒಳಪಡಲಿದ್ದಾರೆ.

ಆಂಧ್ರದಲ್ಲಿ ಹಾಲಿ ಕೊರೋನಾ ಮಾರ್ಗಸೂಚಿ ಅನ್ವಯ ವಿವಾಹ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಮದುವೆಯಲ್ಲಿ ಗರಿಷ್ಠ 150 ಮಂದಿ ಭಾಗವಹಿಸಬಹುದು. ಇದರ ಉಲ್ಲಂಘನೆಗೆ ದಂಡ ವಿಧಿಸುವ ಕಠಿಣ ನಿಯಮ ಜಾರಿಯಲ್ಲಿದೆ.