ಕೇಂದ್ರದ ವಿರುದ್ಧ ನಾಡಿದ್ದಿನಿಂದ ಉಗ್ರ ಹೋರಾಟ: ರೈತರ ನಿರ್ಧಾರ| 3 ಕೃಷಿ ಕಾಯ್ದೆ ವಾಪಸ್ಗೆ ಆಗ್ರಹಿಸಿ 2 ವಾರಗಳಿಂದ ದಿಲ್ಲಿಯಲ್ಲಿ ಸಾವಿರಾರು ರೈತರ ಪ್ರತಿಭಟನೆ| ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾವನೆ ತಿರಸ್ಕಾರ
ನವದೆಹಲಿ(ಡಿ.10): ಕಳೆದ ಸೆಪ್ಟೆಂಬರ್ನಲ್ಲಿ ಅಂಗೀಕರಿಸಲಾದ 3 ಕೃಷಿ ಕಾಯ್ದೆಗಳಲ್ಲಿನ ರೈತರ ಕಳವಳಕ್ಕೆ ಕಾರಣವಾದ ಅಂಶ ತಿದ್ದುಪಡಿಗೆ ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ನೀಡಿದ್ದ ಆಫರ್ ಅನ್ನು ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಗಳು ಬುಧವಾರ ತಿರಸ್ಕರಿಸಿವೆ. ಅಲ್ಲದೆ ಕೃಷಿ ಕಾಯ್ದೆ ರದ್ದಾಗುವವರೆಗೂ ತಮ್ಮ ಹೋರಾಟವನ್ನು ಮತ್ತಷ್ಟುತೀವ್ರಗೊಳಿಸುವುದಾಗಿ ಎಚ್ಚರಿಸಿವೆ. ಇದರೊಂದಿಗೆ ಕಳೆದ 2 ವಾರದಿಂದ ದೆಹಲಿ ಹೊರವಲಯಗಳಲ್ಲಿ ಪಂಜಾಬ್, ಚಂಡೀಗಢ ಸೇರಿದಂತೆ ಉತ್ತರ ಭಾರತದ ಸಾವಿರಾರು ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟುತೀವ್ರವಾಗುವ ಲಕ್ಷಣಗಳು ಗೋಚರಿಸಿವೆ.
ಮೋದಿ ಮೇಲೆ ಕೆಸಿಆರ್ಗೆ ದಿಢೀರ್ ಪ್ರೀತಿ!
ಜೊತೆಗೆ ತಮ್ಮ ಹೋರಾಟವನ್ನು ದೇಶವ್ಯಾಪಿಗೊಳಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳು ವಿವಿಧ ತಂತ್ರಗಳನ್ನು ಘೋಷಿಸಿವೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆಯ ನಿಟ್ಟಿನಲ್ಲಿ 3 ಕಾಯ್ದೆ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಂತೆ ಆಗಿದೆ. ಇದರ ಹೊರತಾಗಿಯೂ ಒಂದೊಮ್ಮೆ ಕೇಂದ್ರ ಸರ್ಕಾರ ಹೊಸದಾಗಿ ಪ್ರಸ್ತಾಪ ಸಲ್ಲಿಸಿದರೆ ಅದನ್ನು ಪರಿಶೀಲಿಸಲು ಸಿದ್ಧ ಎಂಬ ಭರವಸೆಯನ್ನು ರೈತ ಸಂಘಟನೆಗಳು ನೀಡಿವೆ. ಈ ಮೂಲಕ ಸಂಧಾನದ ಬಾಗಿಲನ್ನು ತೆರೆದಿಟ್ಟಿವೆ.
7 ತಿದ್ದುಪಡಿ ಪ್ರಸ್ತಾಪ:
ಕೃಷಿ ಕಾಯ್ದೆ ರದ್ದಿಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಗೆ ತೆರಳುವ ರಸ್ತೆಗಳನ್ನು 13 ದಿನಗಳಿಂದ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಮುಂದೆ ಕೇಂದ್ರ ಕೃಷಿ ಸಚಿವಾಲಯ ಬುಧವಾರ 7 ಪ್ರಸ್ತಾಪಗಳನ್ನು ಮುಂದಿಟ್ಟಿತ್ತು. ಅದರಲ್ಲಿ ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಸಲಾಗುವುದು ಎಂದು ಲಿಖಿತ ಭರವಸೆ ನೀಡಲಾಗುವುದು’ ಎಂಬುದೂ ಸೇರಿದಂತೆ 7 ತಿದ್ದುಪಡಿಗಳನ್ನು ಮಾಡಲು ಒಪ್ಪಿಕೊಂಡಿತ್ತು. ಆದರೆ, ಈ ಪ್ರಸ್ತಾಪಗಳಲ್ಲಿ ಹೊಸ ಅಂಶಗಳು ಏನೂ ಇಲ್ಲ. ಈ ಹಿಂದೆ ಹೇಳಿದ್ದನ್ನೇ ಸರ್ಕಾರ ಲಿಖಿತ ರೂಪದಲ್ಲಿ ನೀಡಿದೆ. ಇದು ರೈತರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿರುವ ಪ್ರತಿಭಟನಾನಿರತ ರೈತ ಸಂಘಟನೆಗಳು ಆಫರ್ ತಿರಸ್ಕರಿಸಿದ್ದು, ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂದು ಪಟ್ಟುಹಿಡಿದು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿವೆ.
'HDK 8 ಕೋಟಿ ಪಡೆದಿರುವುದು ನಿಜ ಅನಿಸ್ತಿದೆ'
ರಾಷ್ಟ್ರಪತಿಗೆ ಮನವಿ:
ಈ ನಡುವೆ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ವಿಪಕ್ಷಗಳು ಮನವಿ ಮಾಡಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಮತ್ತು ಡಿಎಂಕೆಯ ಟಿಕೆಎಸ್ ಎಲಂಗೋವನ್ ಅವರನ್ನೊಳಗೊಂಡ ವಿಪಕ್ಷ ಮುಖಂಡರ ನಿಯೋಗವು ಬುಧವಾರ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿತು.
ಕೇಂದ್ರದ 8 ಪ್ರಸ್ತಾಪ
1. ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆಗೆ ಲಿಖಿತ ಭರವಸೆ
2. ಎಂಪಿಎಂಸಿ ಹೊರಗಿನ ವ್ಯಾಪಾರಸ್ಥರಿಗೆ ತೆರಿಗೆ ವಿಧಿಸಲು ಸಮ್ಮತಿ
3. ವರ್ತಕರ ನೋಂದಣಿ ಮಾಡಲು ರಾಜ್ಯ ಸರ್ಕಾರಗಳಿಗೆ ಆಯ್ಕೆ
4. ಗುತ್ತಿಗೆ ವಿವಾದ ಆದರೆ ಸಿವಿಲ್ ಕೋರ್ಟಿಗೆ ಹೋಗಲು ಅವಕಾಶ
5. ಕೃಷಿ ಭೂಮಿ ಗುತ್ತಿಗೆ ಬಗ್ಗೆ ಅಗತ್ಯ ಬಿದ್ದರೆ ಮತ್ತಷ್ಟುನಿಖರ ವಿವರಣೆ
6. ರೈತರ ವಿದ್ಯುತ್ ಶುಲ್ಕ ಕುರಿತು ಈಗಿರುವ ಪದ್ಧತಿ ಮುಂದುವರಿಕೆ
7. ಬೆಳೆತ್ಯಾಜ್ಯ ಸುಡುವ ರೈತರಿಗೆ ಶಿಕ್ಷೆ ರದ್ದತಿ ಬೇಡಿಕೆಗೆ ಸೂಕ್ತ ಪರಿಹಾರ
2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಬ್ರೇಕ್ ಡ್ಯಾನ್ಸ್ ಸೇರ್ಪಡೆ..!
ಹೋರಾಟ ಹೇಗೆ?
1. ಡಿ.12ಕ್ಕೆ ದಿಲ್ಲಿ-ಜೈಪುರ, ದಿಲ್ಲಿ-ಆಗ್ರಾ ಹೆದ್ದಾರಿ ತಡೆ. ಟೋಲ್ಗಳಲ್ಲಿ ಶುಲ್ಕ ನೀಡದೆ ಸಂಚಾರ
2. ಉತ್ತರ ಭಾರತದ ರೈತರು ಡಿ.14ಕ್ಕೆ ದಿಲ್ಲಿ ಚಲೋ. ದಕ್ಷಿಣದ ರೈತರು ಡೀಸಿ ಕಚೇರಿಗೆ ಮುತ್ತಿಗೆ
3. ಡಿ.14ಕ್ಕೆ ದಿಲ್ಲಿ ಸಂಪರ್ಕಿಸುವ ಎಲ್ಲ ಹೆದ್ದಾರಿ ಬಂದ್, ದೇಶಾದ್ಯಂತ ಬಿಜೆಪಿ ಕಚೇರಿಗೆ ಮುತ್ತಿಗೆ
4. ಉದ್ಯಮಿಗಳಾದ ಅದಾನಿ, ಅಂಬಾನಿ ಕಂಪನಿಗಳು ನೀಡುವ ಎಲ್ಲಾ ಸೇವೆಗಳಿಗೂ ಬಹಿಷ್ಕಾರ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 10, 2020, 10:07 AM IST