ಗಣರಾಜ್ಯ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್!
ಬೇಡಿಕೆ ಈಡೇರದಿದ್ದಲ್ಲಿ ಗಣರಾಜ್ಯ ದಿನ ದಿಲ್ಲೀಲಿ ಟ್ರ್ಯಾಕ್ಟರ್ ಪರೇಡ್| ಕೇಂದ್ರಕ್ಕೆ ರೈತ ಸಂಘಟನೆಗಳ ಎಚ್ಚರಿಕೆ
ನವದೆಹಲಿ(ಜ.03): ಕೃಷಿ ಕಾಯ್ದೆ ಕುರಿತ ತಮ್ಮ ಪಟ್ಟನ್ನು ಮತ್ತಷ್ಟುಬಿಗಿಗೊಳಿಸಿರುವ ಪ್ರತಿಭಟನಾ ನಿರತ ರೈತ ಸಂಘಟನೆಗಳು ಜ.4ರಂದು ನಡೆವ ಕೇಂದ್ರ ಸರ್ಕಾರದೊಂದಿಗಿನ ಮುಂದಿನ ಸುತ್ತಿನ ಸಭೆಯಲ್ಲಿ ತಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಜ.26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಎಚ್ಚರಿಸಿವೆ.
ಈ ಕುರಿತು ಹೇಳಿಕೆ ನೀಡಿರುವ ರೈತ ನಾಯಕ ದರ್ಶನ್ ಪಾಲ್ಸಿಂಗ್, ‘ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗಿಯಾಗಲಿದ್ದಾರೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ಸರ್ಕಾರ ಪೂರ್ಣಗೊಳಿಸದೇ ಹೋದಲ್ಲಿ ಜ.26ಕ್ಕೆ ನಾವು ದೆಹಲಿಯಲ್ಲಿ ಗಣರಾಜ್ಯ ಪರೇಡ್ ಬಳಿಕ ಕಿಸಾನ್ ಪರೇಡ್ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
50 ರೈತರ ಸಾವು:
ಈ ನಡುವೆ ದೆಹಲಿಯ ಗಡಿ ಭಾಗದಲ್ಲಿ ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ನಡೆಯುತ್ತಿರುವ ಪ್ರತಿಭಟನೆ ಅವಧಿಯಲ್ಲಿ 50ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಆದರೂ ಸರ್ಕಾರದ ಕಣ್ಣು ತೆರೆದಿಲ್ಲ ಎಂದು ಮತ್ತೋರ್ವ ರೈತ ನಾಯಕ ಗುರ್ನಾಮ್ ಸಿಂಗ್ ಚೌಡನಿ ದೂರಿದ್ದಾರೆ.