Asianet Suvarna News Asianet Suvarna News

Exclusive: 'ಹಾಗೇ ಸುಮ್ಮನೆ ರೈತರು ಮನೆಗೆ ಹೋಗಲ್ಲ, ಇನ್ನೂ ಅನೇಕ ಸಮಸ್ಯೆಗಳು ಬಗೆಹರಿಯಬೇಕಿದೆ'

* ಮೂರು ಕೃಷಿ ಕಾನೂನು ಹಿಂಪಡೆಯುವುದಾಗಿ ಘೋಚಿಸಿದ ಪಿಎಂ ಮೋದಿ

* ಕೃಷಿ ಕಾನೂನು ಹಿಂಪಡೆದ ಬಗ್ಗೆ ರೈತ ನಾಯಕ ಟಿಕಾಯತ್ ಮಾತು

* ಏಷ್ಯಾನೆಟ್ ನ್ಯೂಸ್ ಜೊತೆ ಮುಂದಿನ ಯೋಜನೆ ಬಗ್ಗೆ ಟಿಕಾಯತ್ ಮಾತು

Exclusive Farmers will not go home just like that there are other issues BKU leader Rakesh Tikait pod
Author
Bangalore, First Published Nov 22, 2021, 8:35 PM IST

ನವದೆಹಲಿ(ನ.22): ಕೇಂದ್ರದ ಮೂರು ಕೃಷಿ ಮಸೂದೆಗಳ (Farm Laws) ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ರೈತರನ್ನು ಮುನ್ನಡೆಸಿದ ನಾಯಕರಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ (Bharatiya Kisan Union leader Rakesh Tikait) ಕೂಡ ಸೇರಿದ್ದಾರೆ. 51ರ ವರ್ಷದ ರೈತ ನಾಯಕ, ಪ್ರಧಾನಿ ಮೋದಿಯವರು ಕೃಷಿ ಕಾನೂನನ್ನು ವಾಪಸು ಮಾಡುವುದಾಗಿ ಘೋಷಿಸಿದ ನಂತರವೂ ರೈತರು ಮನೆಗೆ ಹಿಂದಿರುಗಲ್ಲ ಎಂದು ಹೇಳುವ ಮೂಲಕ ಸರ್ಕಾರವನ್ನು ಅಚ್ಚರಿಗೊಳಿಸಿದ್ದರು. ಸಂಸತ್ತಿನಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನನ್ನು ತರುವಂತೆ ಸರ್ಕಾರವನ್ನು ಒತ್ತಾಯಿಸಲು ಟಿಕಾಯತ್ ಧೃಡವಾಗಿ ನಿರ್ಧರಿಸಿದ್ದಾರೆ . ಇಷ್ಟೇ ಅಲ್ಲದೇ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರೈತರ ಗಮನ ನೆಟ್ಟಿದೆ. ಹೀಗಿರುವಾಗ ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ (Kisan Mahapanchayat) ನಡುವೆ ಏಷ್ಯಾನೆಟ್ ನ್ಯೂಸ್‌ (Asianet News) ಜೊತೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.

* ಪ್ರಧಾನಿ ಮನವಿಯ ನಂತರ 32 ರೈತ ಸಂಘಟನೆಗಳು ಮುಷ್ಕರ ಅಂತ್ಯಗೊಳಿಸುತ್ತವೆಯೇ?

ನಾವು ಈ ರೀತಿ ಹಿಂತಿರುಗುವುದಿಲ್ಲ. ರೈತರ ಮೇಲಿನ ಪ್ರಕರಣಗಳನ್ನು ಅಂತ್ಯಗೊಳಿಸುವಂತಹ ಇತರ ಸಮಸ್ಯೆಗಳು ನಮ್ಮ ಮುಂದಿವೆ. ಆಂದೋಲನದ ಸಮಯದಲ್ಲಿ ಸಂಭವಿಸಿದ ರೈತರ ಸಾವಿನ ಬಗ್ಗೆ ನಮಗೆ ಉತ್ತರ ಬೇಕು. ಎಂಎಸ್‌ಪಿ ಪ್ರಶ್ನೆ ಇನ್ನೂ ಬಾಕಿ ಇದೆ. ಗಮನಹರಿಸಬೇಕಾದ ಇನ್ನೂ ಅನೇಕ ಸಮಸ್ಯೆಗಳಿವೆ. ಇದೆಲ್ಲವನ್ನೂ ಸರ್ಕಾರ ಚರ್ಚಿಸಲಿ. ಇವುಗಳ ಬಗ್ಗೆ ಕಾಳಜಿ ವಹಿಸದವರೆಗೆ ನಾವು ಪ್ರತಿಭಟನಾ ಸ್ಥಳದಲ್ಲಿ ನಿಲ್ಲುತ್ತೇವೆ.

* ಸರ್ಕಾರ ಬಹಳ ಹಿಂದೆಯೇ ಈ ನಿರ್ಧಾರ ಕೈಗೊಂಡಿದ್ದರೆ ಅನೇಕರ ಜೀವ ಉಳಿಯುತ್ತಿತ್ತು ಎಂದು ಬಿಜೆಪಿ ನಾಯಕ ವರುಣ್ ಗಾಂಧಿ ಬಹಿರಂಗವಾಗಿಯೇ ಹೇಳಿದ್ದಾರೆ, ಈ ಬಗ್ಗೆ ನೀವೇನು ಹೇಳುತ್ತೀರಿ?

ಅವರು ಹೇಳಿದ್ದು ಸಂಪೂರ್ಣವಾಗಿ ಸರಿ. ಅನೇಕ ಜೀವಗಳನ್ನು ಉಳಿಸಬಹುದಿತ್ತು. ನಾವು ಇದನ್ನು ಡಿಸೆಂಬರ್ 2020 ಮತ್ತು ಜನವರಿ 2021 ರಲ್ಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ಸರ್ಕಾರ ಕಿವಿಗೊಟ್ಟಿದ್ದರೆ ಅನೇಕ ಜೀವಗಳನ್ನು ಉಳಿಸಬಹುದಿತ್ತು.

* 2010ರಲ್ಲಿ ಇದೇ ರೀತಿಯ ಚಳವಳಿ ಹುಟ್ಟಿಕೊಂಡಿತ್ತು. ಇದು ಯುಪಿಎ ಪತನ ಮತ್ತು ಆಮ್ ಆದ್ಮಿ ಪಕ್ಷದ ರಚನೆಗೆ ಕಾರಣವಾಯಿತು. ಇದು ಮತ್ತೆ ಸಂಭವಿಸುತ್ತದೆ ಎಂದು ನಿಮಗನಿಸುತ್ತದೆಯೇ?

ನಾನು ಅಂತಹ ವಾತಾವರಣ ಗಮನಿಸಿಲ್ಲ, ಆದರೆ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ರೈತ ಚಳವಳಿಯಲ್ಲಿ ಎಲ್ಲರೂ ಉತ್ತಮ ಕೊಡುಗೆ ನೀಡಿದ್ದಾರೆ ಮತ್ತು ಯಾರೂ ರಾಜಕೀಯ ಲಾಭ ಪಡೆಯುತ್ತಿಲ್ಲ.

* ರಾಜಕೀಯಕ್ಕೆ ಪ್ರವೇಶಿಸಲು ರಾಕೇಶ್ ಟಿಕಾಯತ್ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಅನೇಕರುಉ ಟೀಕಿಸುತ್ತಿದ್ದಾರೆ, ಈ ಬಗ್ಗೆ ಏನು ಹೇಳುತ್ತೀರಿ?

ಇಲ್ಲ! ಖಂಡಿತ ಇಲ್ಲ! ನಾನು ರಾಜಕೀಯಕ್ಕೆ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಹೋಗುವುದಿಲ್ಲ.

* ಎಂಎಸ್‌ಪಿ ಕುರಿತು ನಿಮ್ಮ ಸರ್ಕಾರದಿಂದ ಯಾವ ಬೇಡಿಕೆಯಿದೆ?

ನಾವು ಎಂಎಸ್‌ಪಿಗೆ ಬದ್ಧರಾಗಿರುತ್ತೇವೆ. ಎಂಎಸ್‌ಪಿ ನಿರ್ಧಾರವಾಗುವವರೆಗೂ ನಮ್ಮ ಮುಷ್ಕರ ಮುಂದುವರಿಯಲಿದೆ. ಸರ್ಕಾರ ಮೊದಲು ಮಾತುಕತೆಗೆ ಬರಲಿ.

* ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರ ಯುಪಿ ಮತ್ತು ಪಂಜಾಬ್ ಚುನಾವಣೆಗೆ ಸಂಬಂಧಿಸಿದೆ ಎಂಬ ಚರ್ಚೆ ನಡೆಯುತ್ತಿದೆ. ಪ್ಲಾನ್ ಬಿ ಇದೆಯೇ?

ಅಂತಹ ಯಾವುದೇ ಚರ್ಚೆಯನ್ನು ನಾವು ಬಯಸುವುದಿಲ್ಲ. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು. ನಾವು ಅದರ ಬಗ್ಗೆ ಮಾತ್ರ ಚಿಂತಿಸುತ್ತೇವೆ. ಯಾರಾದರೂ ಎಮ್ಮೆಯನ್ನು ಸಾಕಿದಾಗ ಎಮ್ಮೆ ಕಪ್ಪಾಗಿದ್ದೋ ಬಿಳಿಯದ್ದೋ ಎಂದು ನೋಡುವುದಿಲ್ಲ, ಎಮ್ಮೆ ಎಷ್ಟು ಹಾಲು ಕೊಡುತ್ತದೆ ಎಂಬುದು ಮುಖ್ಯ.

* ಸರಕಾರ ಕಾನೂನನ್ನು ಹಿಂಪಡೆದಿರುವುದು ರೈತರಿಗೆ ತೃಪ್ತಿ ತಂದಿದೆಯೇ? ಇದರ ಪರಿಣಾಮಗಳೇನು?

ನಾವು ನಮ್ಮ ಬೇಡಿಕೆಗಳನ್ನು ಇಟ್ಟಿದ್ದೆವು ಮತ್ತು ಕಾನೂನನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಧಾನಿ ತೆಗೆದುಕೊಂಡರು. ಅವರ ಮಂತ್ರಿಗಳು ಅವರಿಗೆ ಪರಿಣಾಮಗಳನ್ನು ವಿವರಿಸಿದ್ದರೆ, ಈ ನಿರ್ಧಾರವು ತುಂಬಾ ಮುಂಚೆಯೇ ಬರುತ್ತಿತ್ತು.

Follow Us:
Download App:
  • android
  • ios