ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್‌ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ, ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷನಾಗಲು ನಿರ್ಧಾರ ಮಾಡಿದ್ದಾರೆ. ಈ ಕುರಿತಾಗಿ ಅವರು ಕಾನೂನು ಸಲಹೆಯನ್ನೂ ಪಡೆದುಕೊಳ್ಳುತ್ತಿದ್ದಾರೆ.

ಕೋಲ್ಕತ್ತಾ (ಜೂ.22): ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್‌ ಭಟ್ಟಾಚಾರ್ಯ ಅವರ ಏಕೈಕ ಪುತ್ರಿ ಸುಚೇತನಾ ಭಟ್ಟಾಚಾರ್ಯ ಲಿಂಗ ಪರಿವರ್ತನೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಶೀಘ್ರದಲ್ಲಿಯೇ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷನಾಗಲು ನಿರ್ಧಾರ ಮಾಡಿದ್ದೇನೆ ಎಂದಿರುವ ಅವರು ಈ ಕುರಿತಾಗಿ ಕಾನೂನು ಅಲಹೆಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಶಸ್ತ್ರಚಿಕತ್ಸೆ ಮುಕ್ತಾಯದ ಬಳಿಕ ತಮ್ಮ ಹೆಸರನ್ನು 'ಸುಚೇತನ್‌' ಆಗಿ ಬದಲಾಯಿಸಿಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಈಗಾಗಲೇ ಸುಚೇತನಾ, ಕಾನೂನು ಸಲಹೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಮತ್ತು ಕಾರ್ಯವಿಧಾನಕ್ಕೆ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳಿಗಾಗಿ ಮನೋವೈದ್ಯರನ್ನು ಸಂಪರ್ಕಿಸಿದ್ದಾರೆ. ಇತ್ತೀಚೆಗೆ ಎಲ್‌ಜಿಬಿಟಿಕ್ಯು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಚೇತನಾ, ತಾನು ಪುರುಷ ಎಂದು ಗುರುತಿಸಿಕೊಂಡಿದ್ದೇನೆ ಮತ್ತು ದೈಹಿಕವಾಗಿಯೂ ನಾನು ಪುರುಷನಾಗಲ ಬಯಸಿದ್ದೇನೆ ಎಂದು ತಿಳಿಸಿದ್ದರು.

ಈ ಕುರಿತಂತೆ ಮಾತನಾಡಿರುವ ಸುಚೇತನಾ, “ನನ್ನ ಪೋಷಕರ ಗುರುತು ಅಥವಾ ಕುಟುಂಬದ ಗುರುತು ದೊಡ್ಡ ವಿಷಯವಲ್ಲ. ನನ್ನ ಎಲ್‌ಜಿಬಿಟಿಕ್ಯು ಚಳುವಳಿಯ ಭಾಗವಾಗಿ ನಾನು ಇದನ್ನು ಮಾಡುತ್ತಿದ್ದೇನೆ. ಟ್ರಾನ್ಸ್ ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ನಿಲ್ಲಿಸಲು ನಾನು ಬಯಸುತ್ತೇನೆ.' ಎಂದು ಹೇಳಿದ್ದಾರೆ.

"ನಾನು ವಯಸ್ಕಳಾಗಿದ್ದೇನೆ. ನನಗೆ ಈಗ 41 ವರ್ಷ. ಇದರ ಪರಿಣಾಮವಾಗಿ, ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬಹುದು. ನಾನು ಈ ನಿರ್ಧಾರವನ್ನು ಅದೇ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಹೆತ್ತವರನ್ನು ಇದಕ್ಕೆ ಎಳೆಯಬೇಡಿ. ನಾನು ಈಗಾಗಲೇ ನನ್ನನ್ನು ಪುರುಷ ಎಂದು ಪರಿಗಣಿಸಿದ್ದೇನೆ. ಮಾನಸಿಕವಾಗಿ ಈಗಾಗಲೇ ನಾನು ಪುರುಷ. ಈಗ ದೈಹಿಕವಾಗಿಯೂ ಪುರುಷನಾಗಿರಲು ಬಯಸಿದ್ದೇನೆ' ಎಂದು ತಿಳಿಸಿದ್ದಾರೆ.

ಬಹುಶಃ ನನ್ನ ತಂದೆ (ಬುದ್ಧದೇಬ್‌ ಭಟ್ಟಾಚಾರ್ಯ) ನಿರ್ಧಾರವನ್ನು ಬೆಂಬಲಿಸಬಹುದು. ಏಕೆಂದರೆ, ಬಾಲ್ಯದಿಂದಲೂ ನನ್ನ ಯೋಚನೆಗಳು ಪುರುಷರ ರೀತಿಯಲ್ಲಿಯೇ ಇರೋದನ್ನು ಅವರು ಕಂಡಿದ್ದಾರೆ ಎಂದು ಸುಚೇತನಾ ಹೇಳಿದ್ದಾರೆ. 

'ನಾನು ಈಗಾಗಲೇ ನಿರ್ಧಾರ ಮಾಡಿದ್ದೇನೆ. ಇದಕ್ಕಾಗಿ ಹೋರಾಟ ಮಾಡುತ್ತೇನೆ. ಆ ಶಕ್ತಿ ನನ್ನಲ್ಲಿದೆ. ಯಾರು ಏನು ಹೇಳ್ತಾರೆ ಅನ್ನೋದು ನನಗೆ ಬೇಕಾಗಿಲ್ಲ. ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಲು ನಾನು ಸಿದ್ಧನಿದ್ದೇನೆ' ಎಂದಿದ್ದಾರೆ. ಮಾಧ್ಯಮಗಳಿಗೆ ನನ್ನದೊಂದೇ ವಿನಂತಿ ಏನೆಂದರೆ, ಯಾವುದೇ ಕಾರಣಕ್ಕೂ ನೀವು ಈ ಸುದ್ದಿಯನ್ನು ತಿರುಚಿ ಪ್ರಸಾರ ಮಾಡಬೇಡಿ ಎಂದಿದ್ದಾರೆ.

Add Asianetnews Kannada as a Preferred SourcegooglePreferred

'ಗೆಳತಿಯನ್ನು ಮದುವೆಯಾಗಬೇಕು ನನ್ನ ಲಿಂಗ ಪರಿವರ್ತನೆ ಮಾಡಿ' ಎಂದ ಲೆಸ್ಬಿಯನ್ನಳನ್ನು ಕೊಂದ ಮಾಟಗಾರ!

"ಇದು ನನ್ನ ಹಾಗೂ ನಾನೋಬ್ಬಳೇ ಮಾಡಿರುವ ನಿರ್ಧಾರ. ಈ ಸುದ್ದಿಯನ್ನು ತಿರುಚಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಇದು ನನ್ನದೇ ಹೋರಾಟ. ನಾನು ಇದನ್ನು ಏಕಾಂಗಿಯಾಗಿ ಹೋರಾಡಲು ಬಯಸುತ್ತೇನೆ. ಇದಕ್ಕಿಂತ ಉತ್ತಮ ಸಮಯ ಕೂಡ ಇನ್ನೊಂದಿಲ್ಲ. ನನ್ನ ಬಾಲ್ಯದಿಂದಲೂ ನಾನು ಈ ದೃಷ್ಟಿಕೋನವನ್ನು ಹೊಂದಿದ್ದೇನೆ. ಅನೇಕರು ಇದನ್ನು ಬೆಂಬಲಿಸಿದರು, ಮತ್ತು ಅನೇಕರು ಹೀಯಾಳಿಸಿದರು. ಮಾನಸಿಕವಾಗಿ, ನಾನು ಟ್ರಾನ್ಸ್ ಮ್ಯಾನ್, ಮತ್ತು ದೈಹಿಕವಾಗಿ, ನಾನು ಅದೇ ಆಗಲು ಬಯಸುತ್ತೇನೆ ಎಂದಿದ್ದಾರೆ.

ಸೆಕ್ಸ್‌ ನಂತರ ಚೂರಿ ಇರಿದು ಇಬ್ಬರು ತೃತೀಯಲಿಂಗಿಗಳ ಭೀಕರ ಕೊಲೆ!

ಇದೇ ವೇಳೆ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ಧೈರ್ಯದಿಂದ ಇರುವಂತೆ ಕೇಳಿಕೊಂಡರು. “ಎಲ್ಲರೂ ಧೈರ್ಯದಿಂದ ಇರಬೇಕು ಎಂದು ಹೇಳುತ್ತೇನೆ. ಬಹುಶಃ ನನ್ನ ಹೆಸರು ಮತ್ತು ನನ್ನ ಹೆತ್ತವರ ಬಗ್ಗೆ ಕೆಲವು ವಿವಾದಗಳು ಉಂಟಾಗಬಹುದು. ಆದರೆ ನಾನು ಪದೇ ಪದೇ ಹೇಳುತ್ತೇನೆ, ದಯವಿಟ್ಟು ಅರ್ಥಮಾಡಿಕೊಳ್ಳಿ. ಪ್ರತಿಯೊಬ್ಬರಿಗೂ ಇದು ಅಗತ್ಯವಿದೆ' ಎಂದು ತಿಳಿಸಿದ್ದಾರೆ.