Asianet Suvarna News Asianet Suvarna News

ಇಸ್ರೇಲ್‌ ಪರ ಬೇಹುಗಾರಿಕೆ ಆರೋಪ: ಭಾರತದ 8 ಮಾಜಿ ನೌಕಾ ಸಿಬ್ಬಂದಿಗೆ ಕತಾರ್‌ ಗಲ್ಲು!

ಕತಾರ್ ನ್ಯಾಯಾಲಯದ ತೀರ್ಪಿನಿಂದ ಆಘಾತವಾಗಿದೆ. ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದೇವೆ. ಎಂಟೂ ಮಂದಿಯ ಕುಟುಂಬ ಹಾಗೂ ಕಾನೂನು ತಂಡದ ಜತೆ ಸಂಪರ್ಕದಲ್ಲಿದ್ದೇವೆ. ಭಾರತೀಯರನ್ನು ರಕ್ಷಿಸಲು ಎಲ್ಲ ಆಯ್ಕೆಗಳನ್ನೂ ಪರಿಶೀಲಿಸಲಾಗುತ್ತಿದೆ- ಭಾರತದ ವಿದೇಶಾಂಗ ಸಚಿವಾಲಯ

Espionage for Israel Qatar will hangs 8 ex naval personnel of India akb
Author
First Published Oct 27, 2023, 6:19 AM IST

ಯಾಕೆ ಶಿಕ್ಷೆ?

  • - ಎಂಟೂ ಮಂದಿ ಕತಾರ್‌ನ ಅಲ್‌ ದಹ್ರಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು
  • - ಕತಾರ್‌ ಸೇನೆ ಯೋಧರಿಗೆ ತರಬೇತಿ, ಮತ್ತಿತರೆ ಸೇವೆ ನೀಡುವ ಕಂಪನಿ ಇದು
  • - ಇಟಲಿ ತಂತ್ರಜ್ಞಾನ ಬಳಸಿ ದಾಳಿ ನಡೆಸುವ ಸಬ್‌ಮರೀನ್‌ ಉತ್ಪಾದಿಸುತ್ತಿದ್ದರು
  • - ಈ ವೇಳೆ ಕತಾರ್‌ ಸೇನೆಯ ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ರವಾನಿಸಿದ ಆರೋಪ
  • - ಕಳೆದ ವರ್ಷ ಆಗಸ್ಟ್‌ನಲ್ಲೇ 8 ಭಾರತೀಯ ಮಾಜಿ ನೌಕಾ ಅಧಿಕಾರಿಗಳ ಬಂಧನ
  • - ಭಾರತ ಸರ್ಕಾರಕ್ಕಾಗಲೀ, ಭಾರತೀಯರ ಕುಟುಂಬಕ್ಕಾಗಲೀ ಮಾಹಿತಿ ನೀಡದೆ ವಿಚಾರಣೆ
  • - ಇದೀಗ ನ್ಯಾಯಾಲಯದಿಂದ ತೀರ್ಪು ಪ್ರಕಟ. ಎಂಟು ಮಂದಿಗೆ ಮರಣದಂಡನೆ ಘೋಷಣೆ

 

ದೋಹಾ/ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕತಾರ್‌ನಲ್ಲಿ ಇಸ್ರೇಲ್‌ ಪರ ಗೂಢಚರ್ಯೆ ನಡೆಸಿದ ಆರೋಪದಡಿ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್‌ನ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿದೆ. ತೀರ್ಪಿಗೆ ಆಘಾತ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಾರತೀಯರನ್ನು ರಕ್ಷಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದೆ.

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್‌ ನವತೇಜ್‌ ಸಿಂಗ್‌ ಗಿಲ್‌(Captain Navtej Singh Gill), ಕ್ಯಾಪ್ಟನ್‌ ಬೀರೇಂದ್ರ ಕುಮಾರ್‌ ವರ್ಮಾ(Captain Birendra Kumar Verma), ಕ್ಯಾಪ್ಟನ್‌ ಸೌರಭ್‌ ವಸಿಷ್ಠ(Captain Saurabh Vasistha), ಕಮಾಂಡರ್‌ ಅಮಿತ್‌ ನಾಗಪಾಲ್‌(Commander Amit Nagpal), ಕಮಾಂಡರ್‌ ಪೂರ್ಣೇಂದು ತಿವಾರಿ(Commander Purnendu Tiwari), ಕಮಾಂಡರ್‌ ಸುಗುಣಾಕರ್‌ ಪಾಕಳ(Commander Sugunakar Pakala), ಕಮಾಂಡರ್‌ ಸಂಜೀವ್‌ ಗುಪ್ತಾ (Commander Sanjeev Gupta) ಹಾಗೂ ಸೈಲರ್‌ ರಾಗೇಶ್‌ (Sailor Ragesh) ವಿರುದ್ಧ ಗುರುವಾರ ಗಲ್ಲುಶಿಕ್ಷೆಯ ತೀರ್ಪು ಹೊರಬಿದ್ದಿದೆ ಎನ್ನಲಾಗಿದೆ. ಆದರೆ ಈ ಹೆಸರುಗಳನ್ನು ಕತಾರ್‌ ಅಧಿಕೃತವಾಗಿ ಖಚಿತಪಡಿಸಿಲ್ಲ.

ಕೇರಳದಲ್ಲಿ ಚಿಕನ್ ಶವರ್ಮ ತಿಂದು 22 ವರ್ಷದ ಯುವಕ ಸಾವು: ಹೊಟೇಲ್‌ ಬಂದ್ ಮಾಡಿಸಿದ ಅಧಿಕಾರಿಗಳು

ಕತಾರ್‌ನ ಸೇನೆಯ ಯೋಧರಿಗೆ ತರಬೇತಿ ಮತ್ತು ಇತರೆ ವಿಷಯದಲ್ಲಿ ಅಲ್‌ ದಹ್ರಾ (Al Dahra) ಎಂಬ ಕಂಪನಿ ಸೇವೆ ನೀಡುತ್ತದೆ. ಈ ಕಂಪನಿಯಲ್ಲಿ ನೌಕರರಾಗಿದ್ದ 8 ಭಾರತೀಯರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಕತಾರ್‌ ಪೊಲೀಸರು ಬಂಧಿಸಿದ್ದರು. ಬಳಿಕ ಭಾರತ ಸರ್ಕಾರಕ್ಕಾಗಲೀ(Indian government), ಭಾರತದಲ್ಲಿರುವ ಅವರ ಕುಟುಂಬಕ್ಕಾಗಲೀ ಯಾವುದೇ ಮಾಹಿತಿ ನೀಡದೆ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

 

 

ಇಸ್ರೇಲ್‌ ಪರ ಗೂಢಚರ್ಯೆ ಆರೋಪ:

ಗಲ್ಲುಶಿಕ್ಷೆಗೆ ಗುರಿಯಾದ ಎಂಟು ಮಂದಿಯ ವಿರುದ್ಧ ಕತಾರ್‌ ಪೊಲೀಸರು ಇಸ್ರೇಲ್‌ನ ಪರ ಗೂಢಚರ್ಯೆ (spying for Israel) ನಡೆಸಿದ ಆರೋಪ ಹೊರಿಸಿದ್ದರು. ಅದನ್ನು ಸಾಬೀತುಪಡಿಸಲು ಅವರ ಬಳಿ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳಿವೆ ಎಂದು ಪತ್ರಿಕೆಯೊಂದು ಈ ಹಿಂದೆ ವರದಿ ಮಾಡಿತ್ತು.

ಇವರೆಲ್ಲರೂ ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ನಲ್ಲಿ (Dahra Global Technologies) ನೌಕರಿ ಮಾಡುತ್ತಿದ್ದರು. ಇಟಲಿ ಮೂಲದ ತಂತ್ರಜ್ಞಾನ ಬಳಸಿ ರಹಸ್ಯವಾಗಿ ದಾಳಿ ನಡೆಸುವ ಸಬ್‌ಮರೀನ್‌ಗಳನ್ನು ಉತ್ಪಾದಿಸುವ ಯೋಜನೆಯಲ್ಲಿ ಈ ಜನರು ತೊಡಗಿದ್ದರು. ಈ ವೇಳೆ ಇವರೆಲ್ಲಾ ಗೂಢಚರ್ಯೆ ನಡೆಸಿ ಕತಾರ್‌ ಸೇನೆಯ ಕುರಿತ ರಹಸ್ಯ ಮಾಹಿತಿಗಳನ್ನು ಇಸ್ರೇಲ್‌ಗೆ ರವಾನಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.

ಕಾನೂನು ಹೋರಾಟ ನಡೆಸುತ್ತೇವೆ-ಭಾರತ:

‘ಕತಾರ್‌ನ ನ್ಯಾಯಾಲಯ ನೀಡಿರುವ ತೀರ್ಪು ಆಘಾತ ತಂದಿದೆ. ವಿಸ್ತೃತ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಆರೋಪಿಗಳ ಕುಟುಂಬದ ಜೊತೆ ಹಾಗೂ ಕಾನೂನು ತಂಡದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಗಲ್ಲುಶಿಕ್ಷೆ ಎದುರಿಸುತ್ತಿರುವ ಭಾರತೀಯರನ್ನು ರಕ್ಷಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದೇ ವೇಳೆ ಸಾಧ್ಯವಿರುವ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಭಾರತೀಯರ ಬಿಡುಗಡೆಗೆ ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

Follow Us:
Download App:
  • android
  • ios