Bank Fraud Case: ಸೀಕ್ರೆಟ್ ಲಾಕರ್ನಲ್ಲಿತ್ತು 431 ಕೆಜಿ ಚಿನ್ನ - ಬೆಳ್ಳಿ; ಜಪ್ತಿ ಮಾಡಿದ ಇ.ಡಿ
Enforcement Directorate seized 431 KG gold, silver: ಬರೋಬ್ಬರಿ 47 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಖಾಸಗಿ ಲೇವಾದೇವಿ ಪ್ರಕರಣ ಸಂಬಂಧ ವಿಚಾರಣೆ ಮಾಡುತ್ತಿದ್ದ ಇ.ಡಿ. ತಂಡಕ್ಕೆ ಕೋಟ್ಯಂತರ ಮೂಲದ ಚಿನ್ನ - ಬೆಳ್ಳಿ ಸಿಕ್ಕಿದೆ.
ನವದೆಹಲಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರೋಬ್ಬರಿ 431 ಕೆಜಿ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಸೀಕ್ರೆಟ್ ಲಾಕರ್ಗಳಿಂದ ಜಪ್ತಿ ಮಾಡಲಾಗಿದೆ. ಜಪ್ತಿಯಾದ ಚಿನ್ನ ಮತ್ತು ಬೆಳ್ಳಿಯ ಒಟ್ಟೂ ಮೌಲ್ಯ 47.76 ಕೋಟಿಗೂ ಅಧಿಕವಾಗಿದ್ದು ಕೋಟ್ಯಂತರ ಬೆಲೆ ಬಾಳುವ ಬೆಳ್ಳಿ ಕೂಡ ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಫ್ರಾಡ್ ಮತ್ತು ಖಾಸಗಿ ಲೇವಾದೇವಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್ ಸಂಸ್ಥೆಯ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರೇಖ್ ಅಲ್ಯುಮಿನೆಕ್ಸ್ ಎಂಬ ಕಂಪೆನಿಯ ಮೇಲೆ ಖಾಸಗಿ ಲೇವಾದೇವಿ ಪ್ರಕರಣ ದಾಖಲಾಗಿದ್ದು, ಈ ಕನೆಕ್ಷನ್ ಮೂಲಕ ಎರಡು ಕಂಪೆನಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ವೇಳೆ ಬುಲಿಯನ್ ಸಂಸ್ಥೆಯ ಆವರಣದಲ್ಲಿ ಖಾಸಗಿ ಲಾಕರ್ಗಳ ಕೀಲಿಗಳು ಸಿಕ್ಕಿದ್ದವು ಎಂದು ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. "ಖಾಸಗಿ ಲಾಕರ್ಗಳನ್ನು ಪರಿಶೀಲಿಸಿದಾಗ, ಯಾರು ಭೇಟಿ ಕೊಟ್ಟಿದ್ದಾರೆ ಎಂಬ ರಿಜಿಸ್ಟರ್ ಆಗಲಿ, ಕೆವೈಸಿಯಾಗಲಿ, ಸಿಸಿಟಿವಿಯಾಗಲಿ ಇರಲಿಲ್ಲ. ಲಾಕರ್ಗಳಲ್ಲಿ ಯಾವುದೇ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿರಲಿಲ್ಲ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬ್ಯಾಂಕ್ಗಳಿಗೆ 23000 ಕೋಟಿ ಮರಳಿಸುವಲ್ಲಿ ಇಡಿ ಯಶಸ್ವಿ
ಒಟ್ಟೂ 761 ಖಾಸಗಿ ಲಾಕರ್ಗಳು ಸಿಕ್ಕಿದ್ದು ಅದರಲ್ಲಿ 3 ಲಾಕರ್ ಮಾತ್ರ ರಕ್ಷಾ ಬುಲಿಯನ್ಗೆ ಸೇರಿದ್ದು ಎನ್ನಲಾಗಿದೆ. "ಲಾಕರ್ಗಳನ್ನು ತೆರೆದು ನೋಡಿದಾಗ, 91.5 ಕೆಜಿ ಬಂಗಾರ ಮತ್ತು 152 ಕೆಜಿ ಬೆಳ್ಳಿಯ ಗಟ್ಟಿಗಳು ಸಿಕ್ಕಿವೆ. ಅವೆಲ್ಲವನ್ನೂ ಜಪ್ತಿ ಮಾಡಲಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ರಕ್ಷಾ ಬುಲಿಯನ್ ಸಂಸ್ಥೆ ಆವರಣದಿಂದ ಹೆಚ್ಚುವರಿ 188 ಕೆಜಿ ಬೆಳ್ಳಿಯನ್ನೂ ವಶಪಡಿಸಿಕೊಳ್ಳಲಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಶಪಡಿಸಿಕೊಂಡಿರುವ ಚಿನ್ನ ಮತ್ತು ಬೆಳ್ಳಿಯ ಒಟ್ಟಾರೆ ಮೌಲ್ಯ 47.76 ಕೋಟಿಗಳಾಗಿದ್ದು ಎಲ್ಲವನ್ನೂ ಜಪ್ತಿ ಮಾಡಲಾಗಿದೆ. ಪರೇಖ್ ಅಲ್ಯುಮಿನೆಕ್ಸ್ ಸಂಸ್ಥೆ 2018ರಲ್ಲಿ ರೂ 2,296 ಕೋಟಿ ಸಾಲವನ್ನು ವಿವಿಧ ಬ್ಯಾಂಕ್ಗಳಿಂದ ಪಡೆದಿತ್ತು. ಮತ್ತು ಹಣ ವರ್ಗಾವಣೆ ಮತ್ತು ಲೇವಾದೇವಿ ಪ್ರಕರಣ ಸಂಸ್ಥೆಯ ಮೇಲೆ ದಾಖಲಾಗಿತ್ತು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಷೇರುಪೇಟೆ ಮಾಜಿ ಮುಖ್ಯಸ್ಥ ರವಿ ನಾರಾಯಣ್ ಸೆರೆ: ಇಂದು ಕೋರ್ಟ್ಗೆ ಹಾಜರು
ಸಾಲ ಪಡೆದ ಹಣವನ್ನು ಬೇರೆ ಬೇರೆ ಸಂಸ್ಥೆಗಳಿಗೆ ಅಕ್ರಮವಾಗಿ ಸಾಗಿಸಲಾಗಿತ್ತು. ಈ ಟ್ರಾನ್ಸಾಕ್ಷನ್ಗಳನ್ನು ಗಮನಿಸಿದ ಬ್ಯಾಂಕ್ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಒಂದು ನಿರ್ದಿಷ್ಟ ಕಾರಣಕ್ಕೆ ಸಾಲ ಪಡೆದ ನಂತರ ಕೇವಲ ಆ ಕಾರಣಕ್ಕೆ ಮಾತ್ರ ಹಣ ವ್ಯಯಿಸಬಹುದು. ಅದನ್ನು ಬೇರೆ ಕೆಲಸಕ್ಕೆ ಬಳಸುವುದಾಗಲೀ, ಬೇರೆ ಕಂಪೆನಿಗಳಿಗೆ ವರ್ಗಾವಣೆ ಮಾಡುವುದಾಗಲೀ ಮಾಡುವಂತಿಲ್ಲ.
"ಸಾಲದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಹೂಡಿಕೆ ರೂಪದಲ್ಲಿ ಮತ್ತು ಅಸುರಕ್ಷಿತ ಸಾಲದ ರೂಪದಲ್ಲಿ ವರ್ಗಾವಣೆ ಮಾಡಲಾಗಿದೆ. ಆದರೆ ಬ್ಯಾಂಕ್ಗಳಿಂದ ಸಾಲ ಪಡೆಯುವಾಗ ನೀಡಿದ ಕಾರಣವೇ ಬೇರೆ. ಈ ರೀತಿ ಖಾತೆಗಳಿಗೆ ವರ್ಗಾವಣೆ ಅಥವಾ ಅಸುರಕ್ಷಿತ ಸಾಲಕ್ಕೆ ಬ್ಯಾಂಕ್ ಹಣವನ್ನು ಬಳಸುವ ಕುರಿತು ಯಾವುದೇ ಅಗ್ರೀಮೆಂಟ್ ಆಗಿರಲಿಲ್ಲ," ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಪೇಟಿಎಂ, ರೇಝರ್ಪೇ, ಕ್ಯಾಶ್ಫ್ರೀಗೆ ಇಡಿ ಶಾಕ್; ಬೆಂಗಳೂರು ಕಚೇರಿಗಳ ಮೇಲೆ ದಾಳಿ
2019ರಲ್ಲಿ ಇದೇ ಪ್ರಕರಣದಲ್ಲಿ 205 ಕೋಟಿಗಳ ಮೌಲ್ಯದ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಲಾಯದ ಜಪ್ತಿ ಮಾಡಿತ್ತು.