ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. ನಾಮ ಪತ್ರ ಸಲ್ಲಿಸಲು ಅರ್ಹತೆ ಏನಿರಬೇಕು?

ನವದೆಹಲಿ (ಆ.01) ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ದಿಢೀರ್ ರಾಜೀನಾಮೆ ನೀಡಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಪ್ರಧಾನಿ ಮೋದಿ ಸರ್ಕಾರದ ಸೂಚನೆಯಿಂದ ಧನ್ಕರ್ ರಾಜೀನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆರೋಗ್ಯ ಕಾರಣ ನೀಡಿ ಧನ್ಕರ್ ತಕ್ಷಣದಿಂದ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಇದೀಗ ಕೇಂದ್ರ ಚುನಾವಣಾ ಆಯೋಗ ಉಪರಾಷ್ಟ್ರಪತಿ ಸ್ಥಾನಕ್ಕೆ ದಿನಾಂಕ ಘೋಷಣೆ ಮಾಡಿದೆ. ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣಾ ಪ್ರಕ್ರಿಯೆ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದೆ.

ಸೆಪ್ಟೆಂಬರ್ 9ಕ್ಕೆ ಉಪ ರಾಷ್ಟ್ರಪತಿ ಚುನಾವಣೆ

ಕೇಂದ್ರ ಚುನಾವಣಾ ಆಯೋಗ ಸೆಪ್ಟೆಂಬರ್ 9ಕ್ಕೆ ಉಪ ರಾಷ್ಟ್ರಪತಿ ಚುನಾವಣೆ ದಿನಾಂಕ ನಿಗಧಿ ಮಾಡಿದೆ. ಇನ್ನು ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ. ಇದರೊಳಗೆ ನಾಮ ಪತ್ರ ಸಲ್ಲಿಕೆ ಮಾಡಬೇಕು. ಮತ ದಾನದ ದಿನವೇ ಅಂದರೆ ಸೆಪ್ಟೆಂಬರ್ 9 ರಂದೇ ಫಲಿತಾಂಶ ಘೋಷಣೆಯಾಗಲಿದೆ.

ಉಪರಾಷ್ಟ್ರಪತಿ ಚುನಾವಣಾ ವೇಳಾಪಟ್ಟಿ

ಆಗಸ್ಟ್ 7 ರಂದು ಉಪ ರಾಷ್ಟ್ರಪತಿ ಚುನಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗದಿಂದ ನೋಟಿಫಿಕೇಶನ್

ಆಗಸ್ಟ್ 21ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ

ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಆಗಸ್ಟ್ 22

ನಾಮಪತ್ರ ಹಿಂಪಡೆಯಲು ಕೊನೆಯ ದಿನ ಆಗಸ್ಟ್ 22

ಉಪರಾಷ್ಟ್ರಪತಿ ಚುನಾವಣೆ ಮತದಾನ ದಿನ ಸೆಪ್ಟೆಂಬರ್ 9

ಉಪ ರಾಷ್ಟ್ರಪತಿ ಚುನಾವಣೆ ಫಲಿತಾಂಶ ದಿನ ಸೆಪ್ಟೆಂಬರ್ 9

ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅರ್ಹತೆ ಏನಿರಬೇಕು

ಭಾರತೀಯ ನಾಗರೀಕನಾಗಿರಬೇಕು

ಕನಿಷ್ಠ 35 ವರ್ಷ ವಯಸ್ಸಾಗಿರಬೇಕು

ರಾಜ್ಯಸಭೆ ಸದಸ್ಯರಾಗಲು ಅರ್ಹರಾಗಿರುತ್ತಾರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು

ಜಗದೀಪ್ ಧನ್ಕರ್ ದಿಢೀರ್ ರಾಜೀನಾಮೆ

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಉಪ ರಾಷ್ಟ್ರಪತಿ ಸ್ಥಾನಕ್ಕೇರಿದ ಜಗದೀಪ್ ಧನ್ಕರ್ ಜುಲೈ 22ರಂದು ದಿಢೀರ್ ರಾಜೀನಾಮೆ ನೀಡಿದ್ದರು. ತಮ್ಮ ಆರೋಗ್ಯದ ಕಾರಣ ನೀಡಿ ಧನ್ಕರ್ ರಾಜೀನಾಮೆ ನೀಡಿದ್ದರು. ಆದರೆ ಅಸಲಿ ಕಾರಣ ಬೇರೆ ಎಂದು ವಿಪಕ್ಷಗಳು ಆರೋಪಿಸಿತ್ತು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಧನ್ಕರ್‌ಗೆ ರಾಜೀನಾಮೆ ಸೂಚನೆ ನೀಡಿತ್ತು ಅನ್ನೋ ಆರೋಪಗಳಿವೆ. 2022ರಲ್ಲಿ ಧನ್ಕರ್ ಉಪ ರಾಷ್ಟ್ರಪತಿಯಾಗಿ ನೇಮಕಗೊಂಡಿದ್ದರು. ಇನ್ನೂ ಎರಡು ವರ್ಷಗಳ ಸೇವೆ ಬಾಕಿ ಇರುವಾಗಲೇ ರಾಜೀನಾಮೆ ನೀಡಿ ಹೊರಬಂದಿದ್ದರು. ಇದಕ್ಕೂ ಮೊದಲು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡ ಧನ್ಕರ್ 2022ರ ವರೆಗೆ ಸೇವೆ ಸಲ್ಲಿಸಿದ್ದರು. ಬಳಿಕ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಧನ್ಕರ್ ಹೆಸರು ಸೂಚಿಸಿದ್ದರು. ಚುನಾವಣೆಯಲ್ಲಿ ಧನ್ಕರ್ ಗೆದ್ದು ಉಪರಾಷ್ಟ್ರಪತಿ ಸ್ಥಾನಕ್ಕೇರಿದ್ದರು.