ಶಶಿಕಲಾ 2000 ಕೋಟಿ ರು. ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ| ದಿ. ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಕಾರಣದಲ್ಲೂ ಹಿನ್ನಡೆ| ಮಹತ್ವದ ಘೋಷಣೆ ಮಾಡಿದ ಪನ್ನೀರ್ ಸೆಲ್ವಂ

ಚೆನ್ನೈ(ಅ.08): 2000 ಕೋಟಿ ರು. ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ ಬೆನ್ನಲ್ಲೇ ದಿ. ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಕಾರಣದಲ್ಲೂ ಹಿನ್ನಡೆಯಾಗಿದೆ.

Add Asianetnews Kannada as a Preferred SourcegooglePreferred

2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಹಾಲಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವತಃ ಉಪಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಅವರೇ ಈ ಘೋಷಣೆ ಮಾಡಿದ್ದಾರೆ.

ಈ ಮೂಲಕ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಪನ್ನೀರ್‌ಸೆಲ್ವಂ ಮತ್ತು ಕೆ.ಪಳನಿಸ್ವಾಮಿ ಅವರ ನಡುವಿದ್ದ ಭಿನ್ನಾಭಿಪ್ರಾಯಕ್ಕೆ ತೆರೆ ಬಿದ್ದಿದೆ. ಸದ್ಯ ಉಭಯ ನಾಯಕರ ನಡುವಣ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲಾಗಿದ್ದು, ರಾಜೀ ಸೂತ್ರವನ್ನು ರಚಿಸಲಾಗಿದೆ.

ಅದರನ್ವಯ ಪಕ್ಷದ ಚಟುವಟಿಕೆ ಮೇಲೆ ನಿಗಾ ಇಡಲು 11 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್‌ ಸೆಲ್ವಂ ಇಬ್ಬರ ಬೆಂಬಲಿಗರೂ ಇದ್ದಾರೆ.

ಶಶಿಕಲಾ ಆಸ್ತಿ ಮುಟ್ಟುಗೋಲು: 

ಜನವರಿಯಲ್ಲಿ ಜೈಲಿನಿಂದ ಹೊರಬಂದು ತಮಿಳುನಾಡು ರಾಜಕಾರಣದಲ್ಲಿ ‘ಕಿಂಗ್‌ಮೇಕರ್‌’ ಆಗುವ ತವಕದಲ್ಲಿರುವ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್‌ಗೆ ಭಾರಿ ಹಿನ್ನಡೆಯಾಗಿದೆ. ಶಶಿಕಲಾ, ಅವರ ಬಂಧುಗಳಾದ ಇಳವರಸಿ ಹಾಗೂ ವಿ.ಎನ್‌. ಸುಧಾಕರನ್‌ಗೆ ಸೇರಿದ ಬರೋಬ್ಬರಿ 2000 ಕೋಟಿ ರು. ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಸದ್ಯ ಈ ಮೂವರೂ ಬೆಂಗಳೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಬೇನಾಮಿ ವ್ಯವಹಾರ ನಿರ್ಬಂಧ ವಿಭಾಗ ಆಸ್ತಿಗಳನ್ನು ಜಪ್ತಿ ಮಾಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳು ತಮಿಳುನಾಡಿನ ಸಿರುಥವೂರು ಹಾಗೂ ಕೊಡನಾಡುಗಳಲ್ಲಿ ಇವೆ ಎಂದು ಆದಾಯ ತೆರಿಗೆ ಹೇಳಿಕೆಯಲ್ಲಿ ತಿಳಿಸಿದೆ.