ಕಾಂಗ್ರೆಸ್ಗೆ ಮತ್ತೊಂದು ಶಾಕ್, ಮೂವರು ನಾಯಕರಿಗೆ ಇಡಿ ಸಮನ್ಸ್, ಖರ್ಗೆಗೂ ಎದುರಾಯ್ತು ಸಂಕಷ್ಟ!
ಕಾಂಗ್ರೆಸ್ ನಾಯಕರಿಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿದೆ. ಒಂದೆಡೆ ನಾಯಕರ ರಾಜೀನಾಮೆ, ಮತ್ತೊಂದೆಡೆ ಭಾರತ್ ಜೋಡೋ ಯಾತ್ರೆಯಲ್ಲಿ ಎದುರಾಗುತ್ತಿರುವ ಅಡೆತಡೆ. ಇದರ ಬೆನ್ನಲ್ಲೇ ಇದೀಗ ಮೂವರು ಪ್ರಮುಖ ನಾಯಕರಿಗೆ ಇಡಿ ಸಮನ್ಸ್ ನೀಡಿದೆ.
ನವದೆಹಲಿ(ಸೆ.23): ಭಾರತ್ ಜೋಡೋ ಯಾತ್ರೆ ಆರಂಭಗೊಂಡ ಬಳಿಕ ಕಾಂಗ್ರೆಸ್ಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಿದೆ. ಎಲ್ಲವೂ ಮುಗೀತು ಅನ್ನುವಷ್ಟರಲ್ಲೇ ಮತ್ತೆ ಹಳೇ ಕೇಸ್ ಕಾಂಗ್ರೆಸ್ಗೆ ತಲೆನೋವು ತಂದಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ಮೂವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ ನಡೆಸಿರುವ ಇಡಿ ಇದೀಗ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಒಟ್ಟು ಮೂವರು ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿದೆ. ಕಳೆದ ತಿಂಗಳು ಇದೇ ಪ್ರಕರಣ ಸಂಬಂಧ ಮಲ್ಲಿಕಾರ್ಜುನ ಖರ್ಗೆಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿಯಲ್ಲಿ ಹಾಜರಿರುವಂತೆ ಖರ್ಗೆ ಸೂಚನೆ ನೀಡಲಾಗಿತ್ತು.
ಆಂಧ್ರ ಪ್ರದೇಶ(Andhra Pradesh) ಹಾಗೂ ತೆಲಂಗಾಣದ(Telangana) ಮೂವರು ನಾಯಕರ ಹೆಸರು ನ್ಯಾಷನಲ್ ಹೆರಾಲ್ಡ್(National Herald) ಅಕ್ರಮ ಹಣ ವರ್ಗಾವಣೆ(Money Laundering) ಪ್ರಕರಣದಲ್ಲಿ ಕೇಳಿಬರುತ್ತಿದೆ. ಈ ಕುರಿತು ವಿಚಾರಣೆ ಹಾಜರಾಗಲು ನೋಟಿಸ್(Summons) ನೀಡಿದೆ. ಇದೀಗ ಇಡಿ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್(Congress) ನಾಯಕರಿಗೆ ತಲೆನೋವು ಹೆಚ್ಚಾಗಿದೆ.
80 ದಾಟಿರುವ ಖರ್ಗೆಗೆ ಯಾರು ದುಃಖಿಸುವವರೇ ಇಲ್ಲ: ವ್ಯಂಗ್ಯವಾಡಿದ ಬಿಜೆಪಿ
ಯಂಗ್ ಇಂಡಿಯನ್ನಲ್ಲಿ ಖರ್ಗೆ ಬಿಟ್ಟು ಬೇರಾವ ನೌಕರರೂ ಇಲ್ಲ!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gnadhi) ಹಾಗೂ ಅವರ ಪುತ್ರ ರಾಹುಲ್ ಗಾಂಧಿ(Rahul Gandhi) ಪ್ರಮುಖ ಷೇರುದಾರರಾಗಿರುವ ಯಂಗ್ ಇಂಡಿಯನ್ ಕಂಪನಿಯಲ್ಲಿ(Young India LTD) ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರನ್ನು ಹೊರತುಪಡಿಸಿ ಬೇರಾವ ನೌಕರರೂ ಇಲ್ಲ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಯಂಗ್ ಇಂಡಿಯನ್ ಕಂಪನಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿದ್ದಾರೆ. ವಿಚಿತ್ರ ಎಂದರೆ, ಅವರಡಿಯಲ್ಲಿ ಬೇರಾವ ನೌಕರನೂ ಇಲ್ಲ ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ಮೂಲಗಳು ಸ್ಪಷ್ಟಪಡಿಸಿವೆ. ಹೀಗಾಗಿಯೇ ಅವರನ್ನಷ್ಟೇ ಗುರುವಾರ ‘ಯಂಗ್ ಇಂಡಿಯನ್’ನಲ್ಲಿ ನಡೆದ ದಾಖಲೆ ತಪಾಸಣೆಗೆ ಕರೆಯುವುದು ಇ.ಡಿ.ಗೆ ಅನಿವಾರ್ಯವಾಯಿತು ಎಂದು ಅವು ಹೇಳಿವೆ.
ನ್ಯಾಷನಲ್ ಹೆರಾಲ್ಡ್ ಬಗ್ಗೆ ಮಧ್ಯಪ್ರದೇಶದಲ್ಲೂ ತನಿಖೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ದೇಶಕರಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿರುವಾಗಲೇ, ಮಧ್ಯಪ್ರದೇಶ ಸರ್ಕಾರ ಕೂಡ ತನಿಖೆಗೆ ಆದೇಶಿಸಿದೆ. ಭೋಪಾಲ್ನ ಪ್ರೆಸ್ ಕಾಂಪ್ಲೆಕ್ಸ್ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ನಿಯಮ ಬಾಹಿರವಾಗಿ ಅಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದಾಗಿ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಏನಾದರೂ ಅವ್ಯವಹಾರ ಕಂಡುಬಂದರೆ, ಕ್ರಮ ಕೈಗೊಂಡು ಬೀಗ ಹಾಕುತ್ತೇವೆ ಎಂದು ಸುದ್ದಿವಾಹಿನಿಯೊಂದಕ್ಕೆ ಸಿಂಗ್ ಅವರು ತಿಳಿಸಿದ್ದಾರೆ. ಬೇರೆ ಮಾಧ್ಯಮ ಸಂಸ್ಥೆಗಳೂ ಇದೇ ರೀತಿ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿವೆಯೆಲ್ಲಾ ಎಂಬ ಪ್ರಶ್ನೆಗೆ, ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಅದಕ್ಕೆ ಕಾನೂನಿನಡಿ ಅವಕಾಶವಿಲ್ಲ. ಅದು ತಪ್ಪಾಗುತ್ತದೆ. ಹೀಗಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.