* ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಅತ್ಯಂತ ಶಾಕಿಂಗ್ ಪ್ರಕರಣ* ಕೆಲವೇ ಕ್ಷಣದಲ್ಲಿ ಮರೆಯಾಯ್ತು ಸಂಭ್ರಮ, ಮದುವೆ ಮನೆಯಲ್ಲಿ ಶೋಕ* ಮದುವೆಗೆ ಸಜ್ಜಾದ ವಧುವಿನ ಜೀವ ಪಡೆದ ಡೋಕ್ಲಾ

ಭೋಪಾಲ್(ಮೇ.21): ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಅತ್ಯಂತ ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಟುಂಬದಲ್ಲಿ ಮನೆ ಮಾಡಿದ ಮದುವೆಯ ಸಂಭ್ರಮ ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಾಡಾಗಿದೆ. ಹಾಡು, ಡಿಜೆಯ ಬದಲು ಅಳು, ಕಿರುಚಾಟ ಮಾತ್ರ ಕೇಳಿ ಬಂದಿದೆ. ಏಕೆಂದರೆ ಇಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವಧು ಕೆಲ ಗಂಟೆಗಳ ಮೊದಲು ಸಾವನ್ನಪ್ಪಿದ್ದಾರೆ. ಬಂದ ಅತಿಥಿಗಳೆಲ್ಲರೂ ಖುಷಿಯಾಗೇ ಮಗಳನ್ನು ಗಂಡನ ಮನೆಗೆ ಕಳುಹಿಸಬೇಕಿದ್ದ ತಂದೆ ಈಗ ಆಕೆಯ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು ಎಂದು ಮರುಗಿದ್ದಾರೆ.

Add Asianetnews Kannada as a Preferred SourcegooglePreferred

ಅರಿಶಿನ, ಮೆಹಂದಿ ಶಾಸ್ತ್ರ ಮುಗಿದ ಬಳಿಕ ಸಾವು

ವಾಸ್ತವವಾಗಿ, ಈ ಘೋರ ಘಟನೆಯು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಶ್ಚಿಮ ಬುಧ್ವಾರಿ ಮಾರ್ಕೆಟ್‌ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಲಿ ಪ್ರಮೋದ್ ಮಹದೇವರಾವ್ ಕಾಳೆ ಅವರ ಪುತ್ರಿ ಮೇಘಾ ಕಾಳೆಯ ವಿವಾಹ ಮೇ 20 ರಂದು ನಡೆಯಬೇಕಿತ್ತು. ವಧು ಈಗಾಗಲೇ ಅರಿಶಿನ ಮತ್ತು ಮೆಹೆಂದಿ ಹಚ್ಚಿದ್ದಳು. ಮದುವೆಯ ವಿಧಿವಿಧಾನಗಳೂ ನಡೆಯುತ್ತಿದ್ದವು, ಅತಿಥಿಗಳು ಮತ್ತು ಕುಟುಂಬ ಸದಸ್ಯರು ಬೆಳಿಗ್ಗೆಯೇ ಚಹಾ ಮತ್ತು ಉಪಹಾರ ಸೇವಿಸುತ್ತಿದ್ದರು. ಈ ಮಧ್ಯೆ, ವಧು ಕೂಡ ತನ್ನ ಸ್ನೇಹಿತರ ಜೊತೆ ಉಪಾಹಾರಕ್ಕಾಗಿ ಢೋಕ್ಲಾವನ್ನು ತಿನ್ನುತ್ತಿದ್ದಾಗ ಉಸಿರುಗಟ್ಟಿದ ಅನುಭವವಾಯಿತು. ಸ್ಥಿತಿ ಹದಗೆಟ್ಟಂತೆ ತೋರಿತು. ಅವಸರದಲ್ಲಿ ಮನೆಯವರು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಮೇಘಾ ಸಾವನ್ನಪ್ಪಿದ್ದಾಳೆ.

ನಗು ನಗುತ್ತಾ ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಶೋಕ

ಮಗಳ ಮದುವೆಯ ಬಗ್ಗೆ ಎಲ್ಲರೂ ತುಂಬಾ ಸಂತೋಷಪಟ್ಟಿದ್ದರು. ಮನೆಯಲ್ಲಿ ಸಂಬಂಧಿಕರೆಲ್ಲರೂ ಇದ್ದರು. ಮದುವೆ ವಿಚಾರದಲ್ಲಿ ಮೇಘಾ ಅವರೇ ತುಂಬಾ ಖುಷಿಪಟ್ಟಿದ್ದರು. ಆದರೆ ಈ ಹಠಾತ್ ಘಟನೆಯ ನಂತರ, ಕುಟುಂಬಕ್ಕೆ ಏನಾಯಿತು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲರೂ ಬೆಚ್ಚಿಬಿದ್ದಿದ್ದು ಕೆಲವೇ ನಿಮಿಷಗಳಲ್ಲಿ ಮದುವೆ ಮನೆಯ ಸಂತಸ ಶೋಕಕ್ಕೆ ತಿರುಗಿತ್ತು.

MBBS ಮತ್ತು MD ಪದವಿ ಪಡೆದಿದ್ದ ಮೇಘಾ, ಆದರೆ ಒಂದು ಡೋಕ್ಲಾದಿಂದ ಎಲ್ಲವೂ ಅಂತ್ಯ 

ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಡಿಒಪಿ ಸಂತೋಷ್ ಡೆಹ್ರಿಯಾ, ಪ್ರಮೋದ್ ಮಹದೇವರಾವ್ ಕಾಳೆ ಅವರ ಪುತ್ರಿ ಮೇಘಾ ಕಾಳೆ ಅವರ ದಿಬ್ಬಣ ಪುಣೆಯಿಂದ ಬರಬೇಕಿತ್ತು. ಮೇಘಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಂದ್ವಾರದ ಕೇಂದ್ರೀಯ ವಿದ್ಯಾಲಯದಲ್ಲಿ ಮತ್ತು ಉನ್ನತ ಶಿಕ್ಷಣವನ್ನು ನಾಸಿಕ್ ಮತ್ತು ಬಾಂಬೆಯಲ್ಲಿ ಪೂರೈಸಿದ್ದರು. ವೈದ್ಯಕೀಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದರು. ಪ್ರಸ್ತುತ ಮುಂಬೈನಲ್ಲಿ ಅಭ್ಯಾಸ ಮಾಡುತ್ತಿದ್ದಳು, ಆದರೆ ಮದುವೆಗೆ ಕೆಲವು ಗಂಟೆಗಳ ಮೊದಲು ನಡೆದ ಈ ಘಟನೆಯಿಂದಾಗಿ ಇಡೀ ಕುಟುಂಬದಲ್ಲಿ ಕೋಲಾಹಲ ಉಂಟಾಯಿತು. ನಗು, ಖುಷಿಯಿಂದ ಸಿದ್ಧತೆಯಲ್ಲಿ ತೊಡಗಿದ್ದ ಈ ಕುಟುಂಬ ಈಗ ದುಃಖದಿಂದ ಕಣ್ಣೀರು ಸುರಿಸುತ್ತಿದೆ.