ಹಿಮಾಚಲ ಪ್ರದೇಶದ ಅಟಲ್ ಸುರಂಗದಲ್ಲಿ ಮಹೀಂದ್ರ ಥಾರ್ ಗಾಡಿ ಹಿಮದಲ್ಲಿ ಜಾರಿ ಚಾಲಕನ ನಿಯಂತ್ರಣ ತಪ್ಪಿದೆ. ಭಯಭೀತರಾದ ಚಾಲಕ ವಾಹನದಿಂದ ಹಾರಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಘಟನೆ ಹಿಮದಲ್ಲಿ ವಾಹನ ಚಾಲನೆಯ ಅಪಾಯಗಳನ್ನು ಎತ್ತಿ ತೋರಿಸುತ್ತದೆ.

ತೀವ್ರವಾದ ಹಿಮಪಾತದಿಂದ ರಸ್ತೆಗಳಲ್ಲಿ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಜಾರಿ ಅನಾಹುತ ಸೃಷ್ಟಿಯಾಗುತ್ತಿರುವ ಹಲವು ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಹಿಮಾಚಲ ಪ್ರದೇಶ ಮನಾಲಿಯಲ್ಲಿ ವಾಹನವೊಂದು ನಡುರಸ್ತೆಯಲ್ಲಿ ಹಿಮದಿಂದಾಗಿ ಜಾರಿ ಚಾಲಕನ ನಿಯಂತ್ರಣ ಕಳೆದುಕೊಂಡು 360 ಡಿಗ್ರಿ ತಿರುಗಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಹಿಮಾಚಲ ಪ್ರದೇಶದ ಅಟಲ್ ಟ್ಯುನಲ್‌ನಲ್ಲಿ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. 

Add Asianetnews Kannada as a Preferred SourcegooglePreferred

ಮಹೀಂದ್ರಾ ಥಾರ್ ಗಾಡಿಯೊಂದು ಹಿಮದಿಂದ ತುಂಬಿದ್ದ ಅಟಲ್ ಸುರಂಗ (Atal Tunnel)ಮಾರ್ಗದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿದೆ. ಬಳಿಕ ವೇಗವಾಗಿ ಸಾಗಲಾರಂಭಿಸಿದ್ದು, ಈ ವೇಳೆ ಈ ಥಾರ್ ಗಾಡಿಯ ಒಳಗಿದ್ದ ಚಾಲಕ ಕೆಳಗೆ ಹಾರಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶವೂ ಹಿಮದ ಹೊದಿಕೆ ಹೊದ್ದು ಮಲಗಿದೆ. ಧಾರಕಾರವಾಗಿ ಹಿಮಪಾತವಾಗುತ್ತಿರುವುದರಿಂದ ರಸ್ತೆಗಳಲ್ಲಿ ಹಿಮ ತುಂಬಿಕೊಂಡಿದೆ. ಹಿಮದಿಂದಾಗ ಸೃಷ್ಟಿಯಾಗಿರುವ ಅದ್ಭುತ ಲೋಕವನ್ನು ನೋಡುವುದಕ್ಕೆ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಆದರೆ ಹಿಮಪಾತದ ಮಧ್ಯೆ ವಾಹನ ಚಾಲನೆ ಅಷ್ಟು ಸುಲಭವಲ್ಲ, ಹಿಮಾಚಲ ಪ್ರದೇಶದ ಬೆಟ್ಟ ಗುಡ್ಡಗಳಿಂದ ಕೂಡಿದ ರಸ್ತೆಗಳು ಮೊದಲೇ ಕಡಿದಾಗಿದ್ದು, ಅನುಭವ ಇಲ್ಲದ ಪ್ರವಾಸಿಗರು ಇಲ್ಲಿ ವಾಹನ ಚಾಲನೆ ಮಾಡುವುದು ದೊಡ್ಡ ಸಾಹಸವೇ ಸರಿ. ಹೀಗಿರುವಾಗ ಮಹೀಂದ್ರ ಥಾರ್ ಗಾಡಿ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಜಾರುತ್ತಾ ಸಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದರ ಜೊತೆಗೆ ಈ ವೇಳೆ ಭಯಗೊಂಡ ಚಾಲಕನೋರ್ವ ಹೀಗೆ ನಿಯಂತ್ರಣ ಕಳೆದುಕೊಂಡ ವಾಹನದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದು, ಈ ವೀಡಿಯೋ ಮತ್ತಷ್ಟು ಭಯ ಮೂಡಿಸುತ್ತಿದೆ.

ಬಿಳಿ ಬಣ್ಣದ ಮಹೀಂದ್ರ ಕಾರು ನಿಯಂತ್ರಣ ಕಳೆದುಕೊಂಡು ಹಿಂದಕ್ಕೆ ಜಾರುತ್ತಿದ್ದರೆ ಕಾರೊಳಗಿನಿಂದ ಓರ್ವ ವ್ಯಕ್ತಿ ಕೆಳಗೆ ಹಾರಿದ್ದಾನೆ. ಈತ ಹಾರಿದ ನಂತರ ಕಾರಿನ ವೇಗ ಹೆಚ್ಚಾಗಿದ್ದು, ಸೀದಾ ಮುಂದೆ ಸಾಗಿ ಸ್ವಲ್ಪ ದೂರದಲ್ಲಿ ನಿಂತುಕೊಂಡಿದೆ. ನಂಗಲ್ವಾಸಿ (🇳​​🇮​​🇹​​🇮​​🇸​​🇭​ ​🇷​​🇺​​🇭​​🇪​​🇱​​🇦​) ಎಂಬುವವರು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ಸ್ನೋದ ಮೇಲೆ ಪ್ರಯಾಣಿಸುವುದು ಸುಲಭ ಅಲ್ಲ ಗೆಳೆಯರೇ ಎಂದು ಬರೆದುಕೊಂಡಿದ್ದಾರೆ. ಹಿಮಾಚಲದ ವ್ಲಾಗರ್ ಇವರಾಗಿದ್ದು, ಇವರ ಇನ್ಸ್ಟಾದಲ್ಲಿ ಹಿಮಾಚಲದ ಜನರ ಜೀವನಸೈಲಿಯ ಹಲವು ವೀಡಿಯೋಗಳಿವೆ. 

ಹಿಮಾಚಲ ಪ್ರದೇಶದ ಜನಪ್ರಿಯ ಗಿರಿಧಾಮವಾಗಿರುವ ಮನಾಲಿಯು ಕಳೆದ ಸೋಮವಾರದಂದು ತನ್ನ ಮೊದಲ ಹಿಮಪಾತ ಕಂಡ ಬಳಿಕ ಸುಂದರವಾದ ಚಳಿಗಾಲದ ಅದ್ಭುತ ಸ್ಥಳವಾಗಿ ಮಾರ್ಪಟ್ಟಿದೆ. ಹಿಮಪಾತವು ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಉತ್ಸುಕರಾಗಿರುವ ಪ್ರವಾಸಿಗರನ್ನು ಆಕರ್ಷಿಸಿದರೆ, ಇದು ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಪ್ರಯಾಣಿಸುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ, ಕನಸಿನಂತಹ ಸುಂದರ ಸ್ಥಳವನ್ನು ಅಪಾಯಕಾರಿ ಭೂಪ್ರದೇಶವಾಗಿ ಬದಲಾಯಿಸಿದೆ. ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, 49 ವರ್ಷದ ಪ್ರವಾಸಿಗರೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಲಾಹೌಲ್-ಸ್ಪಿಟಿ ರಸ್ತೆಯಲ್ಲಿ ಹಿಮದಿಂದಾಗಿ ಅವರ ಕಾರು ಸ್ಕಿಡ್ ಆಗಿತ್ತು. ಟ್ರಾಫಿಕ್‌ನಲ್ಲಿ ಸಿಲುಕಿದ್ದ ಇತರರನ್ನು ಹಿಂದಿಕ್ಕಲು ಯತ್ನಿಸಿದ ವೇಳೆ ವಾಹನ ನಿಯಂತ್ರಣ ತಪ್ಪಿ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿತ್ತು.

View post on Instagram