Eknath Shinde Warn: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ, ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿದ್ದಾರೆ. ಸಿಎಂ ಫಡ್ನವೀಸ್ ಮತ್ತು ಶಿಂಧೆ ನಡುವೆ ಬಿರುಕು ಮೂಡಿದೆ ಎಂಬ ವರದಿಗಳ ನಡುವೆಯೇ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಂಧೆ ಗೈರುಹಾಜರಿ ಅನುಮಾನಗಳಿಗೆ ಕಾರಣವಾಗಿದೆ.

ಮುಂಬೈ:  ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ‘ನನ್ನನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಶಿಂಧೆ ನಡುವೆ ಬಿರುಕು ಮೂಡಿದೆ ಎಂಬ ವರದಿಗಳ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ತಮಗೆ ಬಾಂಬ್‌ ಬೆದರಿಕೆ ಕರೆ ಬಂದಿದ್ದಕ್ಕೆ ಸುದ್ದಿಗಾರರಿಗೆ ಶುಕ್ರವಾರ ಮೊದಲು ಪ್ರತಿಕ್ರಿಯಿಸಿದ ಅವರು, ‘ಬೆದರಿಕೆ ಬರುತ್ತಲೇ ಇರುತ್ತವೆ. ಇದಕ್ಕೆ ನಾನು ಹೆದರಲ್ಲ’ ಎಂದರು.

ಇದರ ಬೆನ್ನಲ್ಲೇ ರಾಜಕೀಯ ಹೇಳಿಕೆ ನೀಡಿದ ಅವರು, ‘ಯಾವತ್ತೂ ನನ್ನನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ನನ್ನನ್ನು ಹಗುರವಾಗಿ ಪರಿಗಣಿಸಿದವರಿಗೆ ನಾನು ಈಗಾಗಲೇ ಈ ಮಾತನ್ನು ಹೇಳಿದ್ದೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಆದರೆ ನಾನು ಬಾಳಾಸಾಹೇಬ್ ಠಾಕ್ರೆ (ಶಿವಸೇನೆಯ ಸ್ಥಾಪಕ) ಅವರ ಕಾರ್ಯಕರ್ತನೂ ಹೌದು. ಈ ಎಚ್ಚರಿಕೆ ಇಲ್ಲರಿಗೂ ಇರಲಿ’ ಎಂದರು.

ಇದೇ ಸಂದರ್ಭದಲ್ಲಿ, ಬಿಜೆಪಿ ಸರ್ಕಾರ ರಚಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ ಅವರು, ‘2022ರಲ್ಲಿ ನಾನು ಸರ್ಕಾರವನ್ನೇ ಬದಲಾಯಿಸಿದ್ದೇನೆ. ವಿಧಾನಸಭೆಯಲ್ಲಿ ನನ್ನ ಮೊದಲ ಭಾಷಣದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದೆ. ಆದರೆ 232 ಸ್ಥಾನಗಳು ಸಿಕ್ಕಿವೆ. ಅದಕ್ಕಾಗಿಯೇ, ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳುತ್ತಿದ್ದೇನೆ’ ಎಂದರು.

ಮಹಾಯುತಿ ಸರ್ಕಾರದಲ್ಲಿ ಮುನಿಸಿಕೊಂಡಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು, ಸಿಎಂ ದೇವೇಂದ್ರ ಫಡ್ನವೀಸ್ ಹಾಜರಾಗಿದ್ದ 3 ಸರ್ಕಾರಿ ಕಾರ್ಯಕ್ರಮ ಗಳಿಗೆ ಗೈರುಹಾಜರಾಗಿದ್ದಾರೆ. ಇದರಿಂದ ಸರ್ಕಾರದಲ್ಲಿ ಬಿರುಕಿದೆ ಎನ್ನುವ ಊಹಾಪೋಹಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ. ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಛತ್ತಪ್ರತಿ ಶಿವಾಜಿ ಮಹಾರಾಜರ ಪ್ರತಿಮೆಯ ಉದ್ಘಾಟನೆ, ಐತಿಹಾಸಿಕ ಆಗ್ರಾ ಕೋಟೆಯಲ್ಲಿ ಮರಾಠಾ ರಾಜನ ಜನ್ಮ ದಿನಾಚರಣೆ ಮತ್ತು ಅಂಬೇಗಾಂವ್ ಬುದ್ರುಕ್‌ನಲ್ಲಿ ಶಿವಸೃಷ್ಟಿ ಥೀಮ್ ಪಾರ್ಕ್‌ನ ಎರಡನೇ ಹಂತದ ಉದ್ಘಾಟನೆ ಸಮಾರಂಭ-ಈ ಕಾರ್ಯಕ್ರಮಗಳಲ್ಲಿ ದೇವೇಂದ್ರ ಫಡ್ನವೀಸ್ ಹಾಜರಿದ್ದರು. ಆದರೆ ಶಿಂಧೆ ಗೈರು ಹಾಜರಾಗಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: ಮುಂದಿನ ವಾರದ ಈ ದಿನ ಬರಲಿದೆ ಪಿಎಂ ಕಿಸಾನ್‌ 2 ಸಾವಿರ ರೂಪಾಯಿ ಹಣ!

ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರ ದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಸಿಎಂ ಕನಸಿನಲ್ಲಿದ್ದ ಶಿಂಧೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಅಂದಿನಿಂದ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಹರಿದಾಡತೊಡಗಿವೆ

ಬೆದರಿಕೆ ಕರೆ ಇಬ್ಬರ ಬಂಧನ
ಏಕನಾಥ್‌ ಶಿಂಧೆ ಅವರ ಕಾರಿಗೆ ಬಾಂಬ್‌ ಇರಿಸಿ ಸ್ಫೋಟ ನಡೆಸುವುದಾಗಿ ಗುರುವಾರ ಬಂದ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ.ಬೆದರಿಕೆ ಪ್ರಕರಣ ಬೆನ್ನತ್ತಿದ ಗೋರೇಗಾಂವ್‌ ಪೊಲೀಸರು, ಬುಲ್ಢಾನಾ ಜಿಲ್ಲೆಯ ದೇವಲಗಾಂವ್‌ ಎಂಬಲ್ಲಿ ಅಭಯ್‌ ಶಿಂಘ್ನೆ (22) ಮತ್ತು ಮಂಗೇಶ್‌ ವಾಯಲ್‌ (35) ರನ್ನು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ. ಜೊತೆಗೆ ಇವರಿಂದ ಮೊಬೈಲ್‌ ಸೇರಿದಂತೆ ವಿದ್ಯುತ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 351(3) ಮತ್ತು 353(2) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 88 ವರ್ಷಗಳ ನಂತರ ಶುಕ್ರವಾರದ ನಮಾಜ್ ಬ್ರೇಕ್ ನಿಲ್ಲಿಸಿದ ಅಸ್ಸಾಂ ಸರ್ಕಾರ!