ಜಮ್ಮು ಮತ್ತು ಕಾಶ್ಮೀರದ ದೂರದ ಕೆರಾನ್‌ನಲ್ಲಿ ಹೆರಿಗೆ ತೊಂದರೆಗಳ ಇತಿಹಾಸವನ್ನು ಹೊಂದಿದ್ದ ಗರ್ಭಿಣಿಯನ್ನು ಹಿಮಪಾತದ ಕಾರಣದಿಂದ ಏರ್‌ಲಿಫ್ಟ್‌ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ, ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ವೈದ್ಯರು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಶ್ರೀನಗರ (ಫೆಬ್ರವರಿ 12, 2023) : ಜಮ್ಮು ಕಾಶ್ಮೀರದಲ್ಲಿ ಈಗ ಕೆಲ ದಿನಗಳಿಂದ ಹಿಮಪಾತ ಹೆಚ್ಚಾಗಿದ್ದು, ಇದರಿಂದ ಜನರು ವಿಮಾನದಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲ, ಪ್ರಕರಣವೊಂದರಲ್ಲಿ ಹೆರಿಗೆ ಮಾಡಿಸುವುದು ಸಹ ಕಷ್ಟವಾಗಿದೆಯಂತೆ. ಜಮ್ಮು ಮತ್ತು ಕಾಶ್ಮೀರದ ದೂರದ ಕೆರಾನ್‌ನಲ್ಲಿ ಹೆರಿಗೆ ತೊಂದರೆಗಳ ಇತಿಹಾಸವನ್ನು ಹೊಂದಿದ್ದ ಗರ್ಭಿಣಿಯನ್ನು ಹಿಮಪಾತದ ಕಾರಣದಿಂದ ಏರ್‌ಲಿಫ್ಟ್‌ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ, ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ವೈದ್ಯರು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

Add Asianetnews Kannada as a Preferred SourcegooglePreferred

ಶುಕ್ರವಾರ ರಾತ್ರಿ, ಎಕ್ಲಾಂಪ್ಸಿಯಾ, ದೀರ್ಘಕಾಲದ ಹೆರಿಗೆ ಮತ್ತು ಎಪಿಸಿಯೊಟೊಮಿ ಸೇರಿದಂತೆ ಸಂಕೀರ್ಣವಾದ ಹೆರಿಗೆಯ (Complicated Delivery) ಇತಿಹಾಸ ಹೊಂದಿರುವ ಕೇರನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Keran Primary Health Centre) ದಾಖಲಾಗಿದ್ದ ರೋಗಿಗೆ ಹೆರಿಗೆ ಮಾಡಿಸಿರುವ ಬಗ್ಗೆ ಕ್ರಾಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಮೀರ್ ಮೊಹಮ್ಮದ್ ಶಾಫಿ ಹೇಳಿದ್ದಾರೆ. ಚಳಿಗಾಲದಲ್ಲಿ (Winter) ಕುಪ್ವಾರ ಜಿಲ್ಲೆಯ ಉಳಿದ ಭಾಗಗಳಿಂದ ಕೇರನ್ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಯನ್ನು ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಲು ವಾಯು ಸ್ಥಳಾಂತರಿಸುವ ಅಗತ್ಯವಿತ್ತು.

ಇದನ್ನು ಓದಿ: ಹೆರಿಗೆಯ ನಂತರ ವಿಪರೀತ ಮದ್ಯ ಸೇವಿಸ್ತಿದ್ದ ಮಹಿಳೆ, ಎದೆಹಾಲು ಕುಡಿದ ಎರಡು ತಿಂಗಳ ಮಗು ಸಾವು!

ಆದರೆ, ಗುರುವಾರ ಮತ್ತು ಶುಕ್ರವಾರದ ನಿರಂತರ ಹಿಮಪಾತದ (Snowfall) ಕಾರಣದಿಂದ ಅಧಿಕಾರಿಗಳು ವಾಯು ಸ್ಥಳಾಂತರಿಸುವಿಕೆಗೆ ವ್ಯವಸ್ಥೆಗೊಳಿಸುವುದನ್ನು ತಡೆಯಿತು. ಈ ಹಿನ್ನೆಲೆ ಕೇರನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಹೆರಿಗೆಯಲ್ಲಿ ಸಹಾಯ ಮಾಡಲು ಪರ್ಯಾಯ ಮಾರ್ಗವನ್ನು ಹುಡುಕುವಂತೆ ಮಾಡಲಾಯಿತು ಎಂದು ವರದಿಯಾಗಿದೆ.

ಕ್ರಾಲ್ಪೋರಾ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ. ಪರ್ವೈಜ್ ಅವರು ಕೇರನ್‌ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಡಾ. ಅರ್ಷದ್ ಸೋಫಿ ಮತ್ತು ಅವರ ಅರೆವೈದ್ಯಕೀಯ ಸಿಬ್ಬಂದಿಗೆ ಮಗುವನ್ನು ಹೆರಿಗೆ ಮಾಡುವ ಕಾರ್ಯವಿಧಾನದ ಕುರಿತು ವಾಟ್ಸಾಪ್ ಕಾಲ್‌ (WhatsApp Call) ಮೂಲಕ ಮಾರ್ಗದರ್ಶನ ನೀಡಿದರು ಎಂದು ತಿಳಿದುಬಂದಿದೆ. ಬಳಿಕ, ರೋಗಿಯನ್ನು ಹೆರಿಗೆಗೆ (Delivery) ಒಳಪಡಿಸಲಾಯಿತು ಮತ್ತು 6 ಗಂಟೆಗಳ ನಂತರ ಆರೋಗ್ಯವಂತ ಹೆಣ್ಣು ಮಗು ಜನಿಸಿದೆ. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ನಿಗಾದಲ್ಲಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಾ. ಮೀರ್‌ ಮೊಹಮ್ಮದ್‌ ಶಫಿ ಈ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಹೆರಿಗೆಯ ನಂತರ ಕೂದಲು ಉದುರೋದು ನಿಂತಿಲ್ವಾ? ಈ ಟಿಪ್ಸ್ ಟ್ರೈ ಮಾಡಿ

ಇನ್ನು, ಮಹಿಳೆ ಗರ್ಭಾವಸ್ಥೆ ಹಾಗೂ ಹೆರಿಗೆಯ ನಂತರ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಯಾಕೆಂದರೆ ಇದು ನೇರವಾಗಿ ಆಕೆಯ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದೆ. ಈ ಕಾರಣಕ್ಕಾಗಿಯೇ ಗರ್ಭಿಣಿ ಅಥವಾ ಹೆರಿಗೆಯ ನಂತರ ಮಹಿಳೆ ಪೌಷ್ಟಿಕ ಆಹಾರ ಸೇವಿಸಬೇಕು. ಹಾಲು, ಹಣ್ಣಿನ ರಸಗಳನ್ನು ಹೆಚ್ಚು ಸೇವಿಸಬೇಕೆಂದು ಸೂಚಿಸುತ್ತಾರೆ. ಮಾತ್ರವಲ್ಲ, ಅಲ್ಕೋಹಾಲ್‌, ಸಿಗರೇಟ್‌ನಿಂದ ದೂರವಿರುವಂತೆ ಹೇಳುತ್ತಾರೆ. ಆದರೆ ತಾಯಿಯೊಬ್ಬರು ವೈದ್ಯರ ಸಲಹೆ ಪಾಲಿಸದೆ ಹೆರಿಗೆಯ ನಂತರವೂ ಅಲ್ಕೋಹಾಲ್ ಕುಡಿದು ಮಗುವನ್ನು ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು.

ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಮಹಿಳೆ ಸೇವಿಸುವ ಪ್ರತಿಯೊಂದು ಆಹಾರವೂ ಮಗುವಿನೊಂದಿಗೆ ಸಂಪರ್ಕ ಪಡೆದುಕೊಳ್ಳುತ್ತದೆ. ತಾಯಿ ಅಲ್ಕೋಹಾಲ್ ಸೇವಿಸಿದರೆ ಎದೆಹಾಲಿನ ಮೂಲಕ ಇದು ಮಗುವನ್ನು ತಲುಪುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಮಾತ್ರವಲ್ಲ ತಾಯಿಯು ತನ್ನ ಮಗುವನ್ನು ಅಮಲಿನಲ್ಲಿ ಹೇಗೆ ನಿಭಾಯಿಸಬಹುದು ಎಂಬುದು ಆತಂಕದ ವಿಷಯವಾಗಿದೆ. ಅಲ್ಕೋಹಾಲ್ ಕುಡಿದ ನಂತರ, ತಾಯಿ ಮಗುವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೆ, ಇದ್ದಕ್ಕಿದ್ದಂತೆ ಬೀಳುವ ಅಥವಾ ಗಾಯಗೊಳ್ಳುವ ಹೆಚ್ಚಿನ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ. 

ಇದನ್ನೂ ಓದಿ: ಗರ್ಭಧಾರಣೆಯ ನಂತರ ಕರಿಯರ್ ಆರಂಭಿಸೋದು ಹೇಗೆ?