ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಚುನಾವಣಾ ತಂತ್ರಗಾರಿಕೆ ನೋಡಿಕೊಳ್ಳುವ ಐ ಪ್ಯಾಕ್ ಸಂಸ್ಥೆ ಮೇಲೆ ನಡೆದ ಇ.ಡಿ ದಾಳಿ ಖಂಡಿಸಿ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ
ಕೋಲ್ಕತಾ/ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಚುನಾವಣಾ ತಂತ್ರಗಾರಿಕೆ ನೋಡಿಕೊಳ್ಳುವ ಐ ಪ್ಯಾಕ್ ಸಂಸ್ಥೆ ಮೇಲೆ ನಡೆದ ಇ.ಡಿ ದಾಳಿ ಖಂಡಿಸಿ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿ ಮುಂದೆ ತೃಣಮೂಲ ಕಾಂಗ್ರೆಸ್ ಸಂಸದರು ಪ್ರತಿಭಟಿಸಿದ್ದು, ಈ ವೇಳೆ ಹೈಡ್ರಾಮಾ ನಡೆದಿದೆ.
ಹಲವು ಸಂಸದರು ಪ್ರತಿಭಟಿಸಿ, ಘೋಷಣೆ
ಶಾ ಕಚೇರಿ ಮುಂದೆ ಡೆರೆಕ್ ಒಬ್ರಿಯಾನ್, ಮಹುವಾ ಮೊಯಿತ್ರಾ, ಕೀರ್ತಿ ಅಜಾದ್ ಸೇರಿದಂತೆ ಹಲವು ಸಂಸದರು ಪ್ರತಿಭಟಿಸಿ, ಘೋಷಣೆಗಳನ್ನುಕೂಗಿದರು. ಆಗ ಪೊಲೀಸರು ಮೊಯಿತ್ರಾ ಸೇರಿದಂತೆ ಪ್ರತಿಭಟನಾ ನಿರತರನ್ನು ಎತ್ತಿಕೊಂಡು ಬಸ್ಸಿಗೆ ಹಾಕಿ ಠಾಣೆಗೆ ಕರೆದೊಯ್ದರು. ಈ ದೃಶ್ಯ ಸಿನಿಮೀಯವಾಗಿತ್ತು.
ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸಂಸ್ಥೆಗಳ ದುರುಪಯೋಗ
ಇನ್ನು ಕೋಲ್ಕತಾದಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ‘ರಾಜಕೀಯ ದ್ವೇಷಕ್ಕಾಗಿ ಬಿಜೆಪಿ, ಕೇಂದ್ರ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಯಾವುದೇ ಹಣಕಾಸಿನ ತನಿಖೆಗೆ ಸಂಬಂಧವಿಲ್ಲದಿದ್ದರೂ ಇ.ಡಿ.ಯು ಟಿಎಂಸಿಯ ಚುನಾವಣಾ ದಾಖಲೆಗಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.


