ಕೋಮು ಗಲಭೆಗಳು ನಿಲ್ಲೋದು ಮುಖ್ಯ ಅಲ್ವಾ, ಹಾಗಿದ್ದಲ್ಲಿ ಬುಲ್ಡೋಜರ್ ಬಳಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯನ್ನು ಧ್ವಂಸ ಮಾಡಿ. ಆಗ ಕೋಮು ಗಲಭೆಗಳು ನಿಲ್ಲುತ್ತವೆ ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.
ನವದೆಹಲಿ (ಏ.20): ಕಳೆದ ವಾರ ಕೋಮು ಘರ್ಷಣೆಯನ್ನು ಕಂಡ ದೆಹಲಿಯ ಜಹಾಂಗೀರ್ಪುರಿಯಲ್ಲಿ, ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನು ಬುಧವಾರ ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ. ಉತ್ತರ ದೆಹಲಿ ಮಹಾನಗರ ಪಾಲಿಕೆಯ ಒತ್ತುವರಿ ವಿರೋಧಿ ಅಭಿಯಾನಕ್ಕೆ, ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ಕಟುವಾಗಿ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi ) ಇದನ್ನು "ಭಾರತದ ಸಾಂವಿಧಾನಿಕ ಮೌಲ್ಯಗಳ ಧ್ವಂಸ" ಮತ್ತು "ಬಡವರು ಮತ್ತು ಅಲ್ಪಸಂಖ್ಯಾತರ ಮನೆಗಳನ್ನು ರಾಜ್ಯ ಪ್ರಾಯೋಜಿತವಾಗಿ ಗುರಿ ಮಾಡಲಾಗುತ್ತಿದೆ" ಎಂದು ಹೇಳಿದ್ದರೆ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Aam Aadmi Party MP Raghav Chadha) ಅವರು ಗೃಹ ಸಚಿವ ಅಮಿತ್ ಶಾ (Home Minister Amit Shah ) ಕೋಮುಗಲಭೆಗಳನ್ನು ರೂಪಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು ಮತ್ತು ಕೋಮು ಗಲಭೆಗಳು ನಿಲ್ಲಬೇಕಿದ್ದಲ್ಲಿ ಮೊದಲು ಅಮಿತ್ ಶಾ ಮನೆಯನ್ನು ಧ್ವಂಸ ಮಾಡಬೇಕು ಎಂದು ಹೇಳಿದ್ದಾರೆ.
"ಗೃಹ ಸಚಿವರೇ ಈ ಗಲಭೆಗಳನ್ನು ರೂಪಿಸುತ್ತಿದ್ದಾರೆ. ನೀವು ಬುಲ್ಡೋಜರ್ ಅನ್ನು ಬಳಸಲು ಬಯಸಿದರೆ, ಗೃಹ ಸಚಿವರ ಮನೆಯನ್ನು ಕೆಡವಲು ಅದನ್ನು ಬಳಸಿ. ಆಗ ಗಲಭೆಗಳು ನಿಲ್ಲುತ್ತವೆ" ಎಂದು ಎಎಪಿ ನಾಯಕ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. ಬಿಜೆಪಿಯು ಕಳೆದ ಎಂಟು ವರ್ಷಗಳಲ್ಲಿ "ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು" ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಪುನರ್ವಸತಿ ಮಾಡಿದೆ ಎಂದು ಅವರು ಹೇಳಿದ್ದಾರೆ, ಅವರ ಮೂಲಕ ಕೋಮುಗಲಭೆಗಳನ್ನು ಸಂಘಟಿಸಲು ಬಳಸುತ್ತದೆ. ಮುಂದಿನ ಗಲಭೆಗಳ ಸ್ಥಳದ ಬಗ್ಗೆ ನಿಮಗೆ ತಿಳಿಯಬೇಕಾದರೆ, ಅವರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಎಲ್ಲಿ ಸ್ಥಳಾಂತರಿಸಿದ್ದಾರೆ ಎಂಬ ಪಟ್ಟಿಯನ್ನು ಬಿಜೆಪಿಗೆ ಕೇಳಿ," ಎಂದು ಅವರು ಹೇಳಿದರು.
ಆಡಳಿತ ಪಕ್ಷವು ಹಲವು ವರ್ಷಗಳಿಂದ ರಾಜಧಾನಿಯಲ್ಲಿ ನಾಗರಿಕ ಸಂಸ್ಥೆಗಳ ನೇತೃತ್ವ ವಹಿಸಿರುವುದರಿಂದ ಲಂಚಕ್ಕಾಗಿ ದೆಹಲಿಯಲ್ಲಿ ಅಕ್ರಮ ನಿರ್ಮಾಣಕ್ಕೆ ಬಿಜೆಪಿ ಅವಕಾಶ ನೀಡಿದೆ ಎಂದು ಯುವ ಸಂಸದ ಆರೋಪಿಸಿದ್ದಾರೆ. ‘ನಗರಸಭೆಯಲ್ಲಿ 15 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದ್ದು, ಅಲ್ಲಿ ಅವರ ನಾಯಕರು ಲಂಚ ಪಡೆದು ಅಕ್ರಮ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ, ಇಂದು ಈ ಅಕ್ರಮ ಕಟ್ಟಡಗಳನ್ನು ಕೆಡವಲು ಹೊರಟಿರುವ ಅವರು, ಲಂಚ ಪಡೆದ ಬಿಜೆಪಿ ಮುಖಂಡರ ಮನೆಗಳನ್ನೂ ಕೆಡವಬೇಕು' ಎಂದು ಹೇಳಿದ್ದಾರೆ.
ಭಾರತೀಯ ಸಂವಿಧಾನದ ಪೀಠಿಕೆಯ ಪ್ರತಿಯತ್ತ ಬುಲ್ಡೋಜರ್ ಮಾದರಿಯ ಯಂತ್ರವು ಚಲಿಸುತ್ತಿರುವುದನ್ನು ತೋರಿಸುವ ಚಿತ್ರವನ್ನು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ, ಇಂದಿನ ಕ್ರಮವು ಭಾರತದ ಸಾಂವಿಧಾನಿಕ ಮೌಲ್ಯಗಳ ನಾಶ ಎಂದು ಬಣ್ಣಿಸಿದ್ದಾರೆ.
"ಇದು ಭಾರತದ ಸಾಂವಿಧಾನಿಕ ಮೌಲ್ಯಗಳ ಧ್ವಂಸ. ಇದು ಬಡವರು ಮತ್ತು ಅಲ್ಪಸಂಖ್ಯಾತರ ಮನೆಗಳ ಮೇಲೆ ರಾಜ್ಯ ಪ್ರಾಯೋಜಿತ ಗುರಿಯಾಗಿದೆ. ಇವುಗಳನ್ನು ಮಾಡುವ ಬದಲು ಬಿಜೆಪಿ ತನ್ನ ಹೃದಯದಲ್ಲಿರುವ ದ್ವೇಷವನ್ನು ಬುಲ್ಡೋಜ್ ಮಾಡಬೇಕು,'' ಎಂದು ಬರೆದಿದ್ದಾರೆ.
ಉತ್ತರಪ್ರದೇಶ, ಮಧ್ಯಪ್ರದೇಶ ಬಳಿಕ ದೆಹಲಿಗೂ ತಲುಪಿದ ಬುಲ್ಡೋಜರ್!
ಸುಪ್ರೀಂ ಕೋರ್ಟ್ ಆದೇಶದ ನಂತರವೂ ಧ್ವಂಸ ಕಾರ್ಯಾಚರಣೆ ಮುಂದುವರಿದಾಗ, ಹಿರಿಯ ಸಿಪಿಎಂ ನಾಯಕಿ ಬೃಂದಾ ಕಾರಟ್ (Senior CPM leader Brinda Karat) ಅವರು ಆದೇಶದ ಪ್ರತಿಯೊಂದಿಗೆ ಪ್ರದೇಶಕ್ಕೆ ಧಾವಿಸುವ ಮೂಲಕ ಹೆಚ್ಚಿನ ಹಾನಿ ಆಗದಂತೆ ಬುಲ್ಡೋಜರ್ ಯಂತ್ರವನ್ನು ನಿರ್ಬಂಧಿಸಿದರು. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ನ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು ಇನ್ನೂ ಆದೇಶವನ್ನು ಸ್ವೀಕಾರ ಮಾಡಿಲ್ಲ. ಅದು ಸಿಗುವವರೆಗೂ ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವ ಕೆಲಸವನ್ನು ಮುಂದುವರಿಸುವುದಾಗಿ ಈ ಮುನ್ನ ಹೇಳಿದ್ದರು.
ಮಾಫಿಯಾಗೆ ಮಾತ್ರ ಬುಲ್ಡೋಜರ್, ಬಡವರಿಗೆ ಅಲ್ಲ ಎಂದ ಯೋಗಿ ಆದಿತ್ಯನಾಥ್!
ಈ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಗುರುವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ಇನ್ನೊಂದೆಡೆ ಮಹಾನಗರ ಪಾಲಿಕೆಯು ಅಕ್ರಮ ಮನೆಗಳನ್ನು ತೆಗೆಯುವುದು ಪಾಲಿಕೆಯ ಎಂದಿನ ಕಾರ್ಯ ಎಂದು ಹೇಳಿದೆ. ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಮೇಯರ್ಗೆ ಪತ್ರ ಬರೆದ ನಂತರ "ಗಲಭೆಕೋರರ" ಅಕ್ರಮ ನಿರ್ಮಾಣಗಳನ್ನು ಗುರುತಿಸಿ ಅವುಗಳನ್ನು ನೆಲಸಮಗೊಳಿಸುವಂತೆ ಒತ್ತಾಯಿಸಿದ ನಂತರ ಅತಿಕ್ರಮಣ ವಿರೋಧಿ ಅಭಿಯಾನವವನ್ನು ಆದೇಶಿಸಲಾಗಿತ್ತು.
