ಹಿಂಸೆ ಹಿಂದೆ ಸಮಾಜಘಾತಕರು, ಪಕ್ಷಗಳು: ರೈತ ಒಕ್ಕೂಟ|  ಸಮಾಜಘಾತಕ ಶಕ್ತಿಗಳಿಂದಲೇ ಈ ದಬ್ಬಾಳಿಕೆ: ಕಿಸಾನ್‌ ಮೋರ್ಚಾ| ಇಲ್ಲದಿದ್ದರೆ ರೈತರ ಟ್ರ್ಯಾಕ್ಟರ್‌ ರಾರ‍ಯಲಿ ಶಾಂತವಾಗಿರುತ್ತಿತ್ತು| ಕೆಲ ರೈತರು ಸೂಚಿತ ಮಾರ್ಗದಿಂದ ಬೇರ್ಪಟ್ಟಿದ್ದು ಸರಿಯಲ್ಲ

ನವದೆಹಲಿ(ಜ.27): ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್‌ ಪರೇಡ್‌ ವೇಳೆ ನಡೆದ ಗಲಭೆಗೂ ರೈತರಿಗೂ ಸಂಬಂಧವಿಲ್ಲ. ಇದು ಸಮಾಜಘಾರಕರ ಕೃತ್ಯ ಎಂದು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ಸ್ಪಷ್ಟಪಡಿಸಿದೆ. ಇದೇ ವೇಳೆ, ಘಟನೆಯ ಹಿಂದೆ ಕೆಲವು ರಾಜಕೀಯ ಪಕ್ಷಗಳ ಕೈವಾಡವಿದೆ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಮಂಗಳವಾರದ ಟ್ರ್ಯಾಕ್ಟರ್‌ ರಾರ‍ಯಲಿಯಲ್ಲಿ ನುಸುಳಿದ ಕೆಲ ಸಮಾಜಘಾತಕ ಶಕ್ತಿಗಳು ಈ ಹಿಂಸಾಚಾರಕ್ಕೆ ಕಾರಣವಾಗಿದೆ. ಇಲ್ಲದಿದ್ದರೆ ರೈತರ ಟ್ರ್ಯಾಕ್ಟರ್‌ ಪರೇಡ್‌ ಶಾಂತಿಯುತವಾಗಿರುತ್ತಿತ್ತು’ ಎಂದು ಕಿಸಾನ್‌ ಮೋರ್ಚಾ ಹೇಳಿದೆ.

‘ಈ ಘಟನೆ ವೇಳೆ ಹಲವು ರೈತ ಸಂಘಟನೆಗಳು ತಮ್ಮ ಟ್ರ್ಯಾಕ್ಟರ್‌ಗಳನ್ನು ಈಗಾಗಲೇ ನಿಗದಿಪಡಿಸಿದ ಮಾರ್ಗಗಳಲ್ಲಿ ಹೋಗುವ ಬದಲಾಗಿ ಇತರ ಮಾರ್ಗಗಳಲ್ಲಿ ಹೋಗಿದ್ದಕ್ಕೆ ಬೇಸರವಿದೆ. ಇದು ಒಪ್ಪಿತವಲ್ಲ ಮತ್ತು ಇಂಥ ಅನಪೇಕ್ಷಣೀಯ ಘಟನೆಯನ್ನು ನಾವು ಖಂಡಿಸುತ್ತೇವೆ. ಶಾಂತವಾಗಿರುವುದೇ ನಮ್ಮ ಅತಿದೊಡ್ಡ ಸಾಮರ್ಥ್ಯವಾಗಿದ್ದು, ಹಿಂಸಾಚಾರವು ಚಳವಳಿಯ ದಿಕ್ಕನ್ನು ತಪ್ಪಿಸಲಿದೆ’ ಎಂದು ರೈತರ 41 ಸಂಘಟನೆಗಳಲ್ಲಿ ಒಂದಾದ ವ್ಯಕ್ತಪಡಿಸಿದೆ.

ಗಲಭೆಗೆ ರೈತರು ಕಾರಣರಲ್ಲ:

ರೈತರ ಟ್ರ್ಯಾಕ್ಟರ್‌ ಚಳವಳಿಯಲ್ಲಿ ಸಂಭವಿಸಿದ ಗಲಭೆಗೆ ಕಾರಣವಲ್ಲ. ಈ ಗಲಭೆಗೆ ಅವಕಾಶ ಮಾಡಿಕೊಡಲು ಯತ್ನಿಸಿದವರನ್ನು ಗುರುತಿಸಲಾಗಿದ್ದು, ಅವರೆಲ್ಲರೂ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದಾರೆ ಎಂದು ಟಿಕಾಯತ್‌ ಹೇಳಿದ್ದಾರೆ.

ಈ ನಡುವೆ, ದೆಹಲಿ ಪೊಲೀಸರ ಜೊತೆ ಮಾಡಿಕೊಂಡ ಒಪ್ಪಂದದ ವೇಳೆ ನಿಗದಿಪಡಿಸಲಾಗಿದ್ದ ಮಾರ್ಗಗಳಲ್ಲೇ ಪ್ರತಿಭಟನಾನಿರತ ರೈತರ ಟ್ರ್ಯಾಕ್ಟರ್‌ ಮೆರವಣಿಗೆ ನಡೆದಿತ್ತು. ಆದಾಗ್ಯೂ ರೈತರ ಮೇಲಿನ ಹಿಂಸಾಚಾರ ಮತ್ತು ದಬ್ಬಾಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಇನ್ನೊಬ್ಬ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ್‌ ಆಪಾದಿಸಿದ್ದಾರೆ.