ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟದ ತೀವ್ರತೆ ಬಯಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ, ಜೈಶ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಡಾ. ಶಾಹೀನ್ ಸಯೀದ್ ಎಂಬ ವೈದ್ಯೆಯನ್ನು ಬಂಧಿಸಲಾಗಿದೆ.

ನವದೆಹಲಿ (ನ.12): ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಎದುರಲ್ಲೇ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದ ಉಗ್ರ ಕೃತ್ಯದಲ್ಲಿ ಇಲ್ಲಿಯವರೆಗೂ 12 ಮಂದಿ ಸಾವು ಕಂಡಿದ್ದಾರೆ. ಇವರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಗಳು ಹೊರಬಿದ್ದಿವೆ. ಘಟನೆಯ ದಿನ ಒಟ್ಟು 8 ಮಂದಿ ಸಾವು ಕಂಡಿದ್ದರೆ, ನಂತರ ಚಿಕಿತ್ಸೆ ಫಲಕಾರಯಾಗದೆ 4 ಮಂದಿ ಸಾವಿಗೀಡಾಗಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಂಬ್‌ ಬ್ಲಾಸ್ಟ್‌ನ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಹೆಚ್ಚಿನವರ ದೇಹದ ಯಾವ ಭಾಗಗಳು ಕೂಡ ಪತ್ತೆಯಾಗಿಲ್ಲ. ಡಿಎನ್‌ಎ ಮ್ಯಾಚಿಂಗ್‌ ಮೂಲಕ ಸಂತ್ರಸ್ಥರ ಗುರುತನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ.

Add Asianetnews Kannada as a Preferred SourcegooglePreferred

ಬಾಂಬ್‌ ಸ್ಫೋಟದ ತೀವ್ರತೆಗೆ ಸಾವು ಕಂಡ ವ್ಯಕ್ತಿಗಳ ಕಿವಿಪದರ, ಶ್ವಾಸಕೋಶ ಹಾಗೂ ಕರುಳುಗಳು ಗುರುತೇ ಸಿಗದಷ್ಟು ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ದೇಹದ ಬಹುತೇಕ ಎಲ್ಲಾ ಮೂಳೆಗಳು ಮುರಿದುಹೋಗಿದ್ದು, ತಲೆಯ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಸ್ಪೋಟದ ತೀವ್ರತೆ ಹೇಗಿತ್ತೆಂದರೆ ಆಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳ ದೇಹ ಹತ್ತಿರದ ಗೋಡೆಗೆ ಹಾಗೂ ರಸ್ತೆಗೆ ಭಾರೀ ವೇಗದಲ್ಲಿ ಬಡಿದಿದೆ ಅನ್ನೋದು ಗೊತ್ತಾಗಿದೆ. ತೀವ್ರ ಗಾಯ ಗಾಗೂ ಅತಿಯಾದ ರಕ್ತಸ್ರಾವದಿಂದಾಗಿ ಈ ಸಾವುಗಳು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೈಶ್‌ ಚೀಫ್‌ ಅಜರ್‌ ಮಸೂದ್‌ ಸಹೋದರಿ ಜೊತೆ ಸಂಪರ್ಕದಲ್ಲಿದ್ದ ಡಾ.ಶಾಹೀನ್‌

ಡಾ. ಶಾಹೀನ್ ಸಯೀದ್‌ಳನ್ನು ಜೈಶ್‌ನ ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್‌ನಲ್ಲಿ ಪ್ರಮುಖ ಕೊಂಡಿ ಎಂದು ಪರಿಗಣಿಸಲಾಗಿದೆ. ಈಕೆ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಜೊತೆ ನೇರ ಸಂಪರ್ಕದಲ್ಲಿದ್ದಳು ಮತ್ತು ಭಯೋತ್ಪಾದಕ ಸಂಘಟನೆಯ ಮಹಿಳಾ ವಿಭಾಗವಾದ ಜಮಾತ್-ಉಲ್-ಮೊಮಿನಾತ್‌ನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಅಕ್ಟೋಬರ್ 2025 ರಲ್ಲಿ ಆಪರೇಷನ್ ಸಿಂಧೂರ್ ನಲ್ಲಿ ತನ್ನ ಪತಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸಾದಿಯಾ ಈ ವಿಭಾಗವನ್ನು ರಚಿಸಿದ್ದಳು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಡಾ. ಶಾಹೀನ್ ಅವರನ್ನು ಬಂಧಿಸಿ ಶ್ರೀನಗರಕ್ಕೆ ಕರೆದೊಯ್ದ ಬಳಿಕ ಅಲ್ಲಿ ಆಕೆಯನ್ನು ಕಾನೂನುಬದ್ಧವಾಗಿ ಬಂಧಿಸಲಾಗಿದೆ.

ಶಾಹೀನ್ 1996-2001 ಬ್ಯಾಚ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾಳೆ ಮತ್ತು ಅಲಹಾಬಾದ್ ವೈದ್ಯಕೀಯ ಕಾಲೇಜಿನಿಂದ ಔಷಧಶಾಸ್ತ್ರದಲ್ಲಿ ಎಂಡಿ ಪದವಿ ಪಡೆದಿದ್ದಾಳೆ. ಈಕೆ2006 ರಿಂದ 2013 ರವರೆಗೆ ಏಳು ವರ್ಷಗಳ ಕಾಲ ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾಳೆ. ಈಕೆ ಯುಪಿಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದಳು.

ಆ ನಂತರ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕಾಲೇಜು ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ವಿಫಲವಾದ ಕಾರಣ ಆಕೆಯನ್ನು 2021 ರಲ್ಲಿ ವಜಾಗೊಳಿಸಲಾಯಿತು. ನಂತರ ಆಕೆ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು. ಅಲ್ಲಿ ಈಕೆ ಡಾ. ಮುಜಮ್ಮಿಲ್ ಸಂಪರ್ಕಕ್ಕೆ ಬಂದಿದ್ದಳು ಎನ್ನಲಾಗಿದೆ.