ಬಾಯಲ್ಲಿ ಹೇಳಿದ್ರೆ ಆಗಲ್ಲ...ಗೋ ರಕ್ಷಣೆ... ಸರ್ಕಾರ, ನಾಗರಿಕರ ಹೊಣೆ!
* ಗೋವಿಗೆ ರಾಷ್ಟ್ರೀಯ ಪ್ರಾಣಿ ಪಟ್ಟ ವಿಚಾರ
* ಪ್ರಕರಣವೊಂದರ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ನಿಂದ ಪರಾಮರ್ಶೆ
* ಗೋಹತ್ಯೆ ಆರೋಪಿಗೆ ಜಾಮೀನು ನಿರಾಕರಣೆ
* ಸರ್ಕಾರಗಳು ಸರಿಯಾದ ರೀತಿ ಹೆಜ್ಜೆ ಇಡುತ್ತಿಲ್ಲ
ಅಲಹಾಬಾದ್(ಸೆ. 01) ಭಾರತದ ರಾಷ್ಟ್ರೀಯ ಪ್ರಾಣಿ ಗೋಮಾತೆಯಾಗೇಕು ಎಂಬ ವಿಚಾರವನ್ನು ಅಲಹಾಬಾದ್ ಹೈಕೋರ್ಟ್ ಪರಾಮರ್ಶೆಗೆ ಒಳಪಡಿಸಿದೆ. ಹಸುಗಳನ್ನು ದೇಶ ಸರಿಯಾದ ರೀತಿ ರಕ್ಷಣೆ ಮಾಡಿದರೆ ಅದು ತನ್ನಿಂದ ತಾನೇ ರಾಷ್ಟ್ರೀಯ ಪ್ರಾಣಿಯಾಗುತ್ತದೆ ಎಂದಿದೆ.
ಗೋಹತ್ಯೆ ನಿಷೇಧ ತಡೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯ ಜಾಮೀನು ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಪರಾಮರ್ಶೆಗೆ ಒಳಪಡಿಸಿದ್ದಾರೆ. ಗೋಹತ್ಯೆ ಮಾಡಿದ್ದ ಆರೋಪಿಗೆ ಜಾಮೀನು ನಿರಾಕರಿಸಲಾಗಿದ್ದು ಆರೋಪಿ ಪುನಃ ಪುನಃ ಇಂಥದ್ದೇ ಕೃತ್ಯದಲ್ಲಿ ತೊಡಗಿದ್ದು ಕಂಡುಬಂದಿದೆ. ಜಾಮೀನು ನೀಡಿದರೆ ಆತ ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಗೋ ಸಂತತಿಗೆ ಭಂಗ ತರುವ ಮಾತನ್ನಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೇಶ ಸಹ ಗೋ ರಕ್ಷಣೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಕೆಲವರು ಬಾಯಿ ಮಾತಿನಲ್ಲಿ ಗೋವಿನ ರಕ್ಷಣೆ ಎನ್ನುತ್ತಿದ್ದಾರೆ.. ಅವರೇ ಗೋಮಾಂಸ ಭಕ್ಷಣೆ ಮಾಡುತ್ತಾರೆ. ಸರ್ಕಾರಗಳು ಗೋ ಶಾಲೆ ತೆರೆಯುತ್ತಿವೆಯೋ.. ಅಥವಾ ಶೆಡ್ ನಿರ್ಮಾಣ ಮಾಡುತ್ತಿವೆಯೋ ಎಂದು ಪ್ರಶ್ನೆ ಮಾಡಿರುವ ಕೋರ್ಟ್ ಗೋವುಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ ಎಂಬ ವಿಚಾರವನ್ನು ತಿಳಿಸಿದೆ.
ಖಾಸಗಿ ಗೋಶಾಲೆಗಳು ಅವ್ಯವಸ್ಥೆಯ ತಾಣವಾಗಿವೆ. ಈ ಸಂಸ್ಥೆಗಳ ನಡೆಸುವವರು ಹಸುಗಳ ಹೆಸರಿನಲ್ಲಿ ಹಣ ಗಳಿಕೆಯ ಮಾರ್ಗ ಮಾಡಿಕೊಂಡಿದ್ದಾರೆ. ಹಸುಗಳಿಗೆ ಸರಿಯಾದ ಆಹಾರ-ವಸತಿ ಅಲ್ಲಿಯೂ ಸಿಗುತ್ತಿಲ್ಲ ಎಂದು ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಚಿತ
ಗೋವುಗಳ ಮುಂದೆ ನಿಂತು ಪೋಟೋ ತೆಗೆಸಿಕೊಂಡರೆ ಮುಗಿಯುವುದಿಲ್ಲ. ಅವುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗೋವುಗಳ ರಕ್ಷಣೆ ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಜವಾಬ್ದಾರಿ ಆಗಬೇಕು ಎಂದು ತಿಳಿಸಿದ್ದಾರೆ.
ನಾವು ನಮ್ಮ ಸಂಸ್ಕೃತಿಯನ್ನು ಮರೆತಾಗ, ವಿದೇಶಿಯರು ನಮ್ಮ ಮೇಲೆ ದಾಳಿ ಮಾಡಿದರು ನಮ್ಮನ್ನು ಗುಲಾಮಗಿರಿಗೆ ತಳ್ಳಿದರು. ಇಂದಿಗೂ ಹಾಗೆಯೇ ವರ್ತಿಸುತ್ತಿದ್ದೇವೆ. ಅಫ್ಘಾನಿಸ್ತಾನವನ್ನು ತಾಲೀಬಾನ್ ತನ್ನ ವಶ ಮಾಡಿಕೊಂಡ ಚಿತ್ರಣ ನಮ್ಮ ಮುಂದೆಯೇ ಇದ್ದು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೋವಿಗೆ ರಾಷ್ಟ್ರಪ್ರಾಣಿ ಪಟ್ಟ ನೀಡಬೇಕೆಂಬ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೂ ಮನವಿಗಳು ಹೋಗಿವೆ. ಈ ಅರ್ಜಿಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರದಿಂದಲೇ ಬಂದಿದೆ.