ದೇಶದಲ್ಲಿ ಕೋವಿಡ್‌ ಮೂರನೇ ಅಲೆ ಸೆಪ್ಟೆಂಬರ್‌- ಅಕ್ಟೋಬರ್‌ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಮುಖ್ಯಸ್ಥರ ಸೂಚನೆ

ನವದೆಹಲಿ (ಜು.23):  ದೇಶದಲ್ಲಿ ಕೋವಿಡ್‌ ಮೂರನೇ ಅಲೆ ಸೆಪ್ಟೆಂಬರ್‌- ಅಕ್ಟೋಬರ್‌ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಮುಖ್ಯಸ್ಥ ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಅಲ್ಲದೆ ಹಂತಹಂತವಾಗಿ ಶಾಲೆಗಳನ್ನು ತೆರೆಯುವುದರ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಾ. ಗುಲೇರಿಯಾ ‘ಇತ್ತೀಚಿನ ಸೆರೋ ಸರ್ವೇ ಅನ್ವಯ ದೇಶದ ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟುಜನರಲ್ಲಿ ರೋಗದ ವಿರುದ್ಧ ಪ್ರತಿಕಾಯಗಳು ಕಂಡುಬಂದಿವೆ. ಆದರೆ ಹಾಗೆಂದು ನಾವು ನಿರ್ಲಕ್ಷ್ಯ ವಹಿಸುವಂತಿಲ್ಲ. ಕಾರಣ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೋಂಕಿಗೆ ತುತ್ತಾಗುವ ಅಪಾಯ ಎದುರಿಸುತ್ತಲೇ ಇದ್ದಾರೆ. ಜೊತೆಗೆ ಪ್ರತಿಕಾಯ ಪತ್ತೆಯಾಗಿದ್ದು ಹಲವು ತಿಂಗಳ ಹಿಂದಿನ ಸಮೀಕ್ಷೆಯಲ್ಲಿ. ಜೊತೆಗೆ ಅವರಲ್ಲಿನ ಪ್ರತಿಕಾಯದ ಪ್ರಮಾಣವನ್ನೂ ನಾವು ಗಮನಿಸಬೇಕಾಗುತ್ತದೆ. ಇದೆಲ್ಲವನ್ನೂ ನೋಡಿದಾಗ ಸೋಂಕಿಗೆ ತುತ್ತಾಗುವವರ ಪ್ರಮಾಣ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇರಬಹುದು’ ಹೀಗಾಗಿ ಯಾವುದೇ ಕಾರಣಕ್ಕೂ ನಾವು ನಿರ್ಲಕ್ಷ್ಯ ವಹಿಸುವಂತಿಲ್ಲ’ ಎಂದಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಜು. 21ರ ಅಂಕಿ-ಸಂಖ್ಯೆ ನೋಡಿ

ಜೊತೆಗೆ ‘ನಾವಿನ್ನೂ ಎರಡನೇ ಅಲೆ ಪೂರ್ಣವಾಗಿ ಮುಗಿದಿದೆ ಎಂದು ಹೇಳುವ ಸ್ಥಿತಿಯಲ್ಲಿ ಇಲ್ಲ. ಈ ಹಂತದಲ್ಲಿ ದೇಶಾದ್ಯಂತ ಎಲ್ಲೆಡೆ ಅನ್‌ಲಾಕ್‌ ಆರಂಭವಾಗಿದೆ. ಹೀಗಾಗಿ ಮುಂದಿನ ಕೆಲ ವಾರಗಳಲ್ಲೇ ಅಂದರೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ನಾವು ಕೋವಿಡ ಮೂರನೇ ಅಲೆ ನಿರೀಕ್ಷಿಸಬಹುದು. ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಗಣನೀಯ ಏರಿಕೆ ಆಗಬಹುದು’ ಎಂದು ಹೇಳಿದ್ದಾರೆ.

ಕೊರೋನಾ ಭೀತಿ: 15 ತಿಂಗಳಿಂದ ಬಂಧನಕ್ಕೆ ಒಳಗಾಗಿದ್ದ 3 ಸ್ತ್ರೀಯರು

ಶಾಲೆ ಪುನಾರಂಭ:

ಇದೇ ವೇಳೆ ಹಂತಹಂತವಾಗಿ ಶಾಲೆಗಳನ್ನು ಪುನಾರಂಭಿಸುವುದು ಸೂಕ್ತ. ಶೇ.50ರಷ್ಟುಮಕ್ಕಳಿಗೆ ಆನ್‌ಲೈನ್‌ ಮೂಲಕ, ಶೇ.50ರಷ್ಟುಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುವ ಮೂಲಕ ಹಂತಹಂತವಾಗಿ ಶಾಲೆಗಳನ್ನು ಆರಂಭಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗಲಿದೆ. ಸೆಪ್ಟೆಂಬರ್‌ ವೇಳೆಗೆ ಮಕ್ಕಳಿಗೆ ನೀಡುವ ಲಸಿಕೆ ಕೂಡಾ ಲಭ್ಯವಾಗುವ ಹಿನ್ನೆಲೆಯಲ್ಲಿ ಮಕ್ಕಳನ್ನು ನಾವು ಸೋಂಕಿನಿಂದ ಮತ್ತಷ್ಟುರಕ್ಷಣೆ ಮಾಡಬಹುದು. ಇತ್ತೀಚಿನ ಸೆರೋ ಸರ್ವೇ ಅನ್ವಯ 6 ವರ್ಷ ಮೇಲ್ಪಟ್ಟಶೇ.60ರಷ್ಟುಮಕ್ಕಳಲ್ಲೂ ಪ್ರತಿಕಾಯ ಕಂಡುಬಂದಿದೆ. ಅಂದರೆ ಅವರು ಕೂಡಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ ಎಂದರ್ಥ. ಜೊತೆಗೆ ಅವರಲ್ಲಿ ಸೋಂಕು ಅಷ್ಟೇನು ತೀವ್ರವಾಗಿಯೂ ಇರಲಿಲ್ಲ. ಹೀಗಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವ ಮೂಲಕ ಶಾಲೆಗಳನ್ನು ಪುನಾರಂಭ ಮಾಡುವುದು ಒಳಿತು ಎಂದು ಹೇಳಿದ್ದಾರೆ. ಮೊದಲಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿ, 2-3 ವಾರ ಪರಿಶೀಲಿಸಬಹುದು. ಬಳಿಕ ಉಳಿದ ತರಗತಿಗಳನ್ನೂ ಆರಂಭಿಸಬಹುದು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona