ಲಾಕ್ಡೌನ್ ವೇಳೆ ಪೊಲೀಸ್ಗೆ ಮಚ್ಚಿನಿಂದ ಹಲ್ಲೆ, ಸತತ 7 ಗಂಟೆ ಸರ್ಜರಿಯಲ್ಲಿ ತುಂಡಾದ ಕೈ ಮರುಜೋಡಣೆ !
ಕೊರೋನಾ ವೈರಸ್ ಕಾರಣ ಭಾರತವನ್ನೇ ಲಾಕ್ಡೌನ್ ಮಾಡಲಾಗಿದೆ. ಜನರು ಇದನ್ನು ಅರ್ಥಮಾಡಿಕೊಂಡು ಮನೆಯಲ್ಲಿದ್ದರ ಕೊರೋನಾ ಹತೋಟಿಗೆ ಬರಲಿದೆ. ಆದರೆ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲ ಕಿಡಿಗೇಡಿಗಳು, ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮಚ್ಚಿನ ಏಟಿಗೆ ಪೊಲೀಸ್ ಕೈ ತುಂಡಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಣೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಭಯಾನಕ ಘಟನೆ ವಿವರ ಇಲ್ಲಿದೆ.
ಪಟಿಯಾಲ(ಏ.13): ಲಾಕ್ಡೌನ್ ವೇಳೆ ಕರ್ತವ್ಯದಲ್ಲಿ ಪೊಲೀಸ್ ಮೇಲೆ ದುಷ್ಕರ್ಮಿಗಳ ತಂಡ ದಾಳಿ ಮಾಡಿ ASI ಹರ್ಜೀತ್ ಸಿಂಗ್ ಕೈ ಕತ್ತರಿಸಿತ್ತು. ಇದೀಗ ಸತತ 7 .5 ಗಂಟೆಗಳ ಸರ್ಜರಿ ಬಳಿಕ ಪೊಲೀಸ್ ಹರ್ಜೀತ್ ಸಿಂಗ್ ಕೈಯನ್ನು ಮರುಜೋಡಿಸಲಾಗಿದೆ. ಈ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ಗೆ ಕೊರೋನಾ ತುತ್ತತುದಿ: ಪಂಜಾಬ್ ಸಿಎಂ ಸ್ಫೋಟಕ ಮಾಹಿತಿ
ಚಂಡಿಘಡದ ಮೆಡಿಕಲ್ ಎಜುಕೇಶನ್ ಹಾಗೂ ರಿಸರ್ಚ್(PGIMER)ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಸೂಚನೆ ಮೇರೆಗೆ PGIMER ಆಸ್ಪತ್ರೆಯಲ್ಲಿ ಡಾ.ಜಗತ್ ರಾಮ್ ನೇತೃತ್ವದಲ್ಲಿ ವೈದ್ಯರ ತಂಡ ರಚಿಸಲಾಗಿತ್ತು. ಇದರಲ್ಲಿ ಪ್ಲಾಸ್ಟಿಕ್ ಸರ್ಜನ್ ಸೇರಿದಂತೆ ನುರಿತ ವೈದ್ಯರ ತಂಡ ಸತತ 7.5 ಗಂಟೆಗಳ ಕಾಲ ಸರ್ಜರಿ ಮಾಡಿ ತುಂಡಾದ ಕೈಯನ್ನು ಮರುಜೋಡಿಸಿದ್ದಾರೆ.
ಸರ್ಜರಿ ಬಳಿಕ ಅಮರಿಂದರ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹರ್ಜೀತ್ ಸಿಂಗ್ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಘಟನೆ ವಿವರ:
ದೇಶದ ಎಲ್ಲಾ ರಸ್ತೆಗಳು ಸದ್ಯ ಶಾಂತವಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚರಿಸುವ ಪ್ರತಿಯೊಬ್ಬರನ್ನೂ ವಿಚಾರಿಸುತ್ತಿದ್ದಾರೆ. ಅನವಶ್ಯಕ ಸಂಚಾರ ಕಂಡು ಬಂದರೆ ದಂಡ, ವಾಹನ ವಶಕ್ಕೆ ಪಡೆಯಲಾಗುತ್ತಿದೆ. ಹೀಗೆ ಪಂಜಾಬ್ನ ಪಟಿಯಾಲದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಈ ರೀತಿ ಆಘಾತ ಎದುರಾಗತ್ತೆ ಎಂದು ಯಾರೂ ಊಹಿಸಿರಲಿಲ್ಲ.
ಲಾಕ್ಡೌನ್ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಕೈಕಟ್!
ಪಟಿಯಾಲದ ಮಾರುಕಟ್ಟೆ ಸಮೀಪ ಬೆಳಗ್ಗೆ 6.15ಕ್ಕೆ ASI ಹರ್ಜೀತ್ ಸಿಂಗ್ ನೇತೃತ್ವದ ತಂಡ ಲಾಕ್ಡೌನ್ ಕರ್ತವ್ಯದಲ್ಲಿ ನಿರತವಾಗಿತ್ತು. ಈ ವೇಳೆ 7ಜನರ ಗುಂಪು ಕಾರಿನಲ್ಲಿ ವೇಗವಾಗಿ ಸಾಗಿ ಬಂತು. ಪೊಲೀಸರು ನಿಲ್ಲಿಸಿ ವಾಹನ ಪಾಸ್ ಹಾಗೂ ಇತರ ಮಾಹಿತಿ ಕೇಳಿದ್ದಾರೆ. ಇಷ್ಟೇ ನೋಡಿ, ಕಾರಿನಿಂದ ಇಳಿದ ಐವರು ತಮ್ಮಲ್ಲಿದ್ದ ಮಾರಾಕಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.
ಒರ್ವ ಬೀಸಿದ ಮಚ್ಚಿನ ಏಟಿಗೆ ASI ಹರ್ಜೀತ್ ಸಿಂಗ್ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ. ತಕ್ಷಣವೇ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಇತ್ತ ಹರ್ಜೀತ್ ಸಿಂಗ್ ರಕ್ತ ಸ್ರಾವವಾಗಿ ನೆಲಕ್ಕುರುಳಿದರೆ, ಇನ್ನಿಬ್ಬರು ಪೊಲೀಸರಿ ಗಾಯಗೊಂಡ ಬಿದ್ದಿದ್ದಾರೆ. ಈ ವೇಳೆ ಈ ದಾರಿಯಲ್ಲಿ ಬಂದ ವ್ಯಕ್ತಿ ಸ್ಕೂಟರ್ ಮೂಲಕ ಹರ್ಜೀತ್ ಸಿಂಗ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.
ಇತ್ತ ಪೊಲೀಸರು ಹಾರಿಸಿದ ಗುಂಡಿನಲ್ಲಿ ಓರ್ವಗಾಯಗೊಂಡಿದ್ದು ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭವಾಗಿದೆ.