Punjab AAP Government: ದೆಹಲಿ ಸೋಲಿನ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಪ್‌ಗೆ ಬಿಕ್ಕಟ್ಟು ಎದುರಾಗಿದ್ದು, ಕಾಂಗ್ರೆಸ್‌ನಿಂದ ಆಪರೇಷನ್‌ ನಡೆಯುತ್ತಿದೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಮಾನ್‌ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಪಕ್ಷದ ಪಂಜಾಬ್‌ ಘಟಕದಲ್ಲೂ ಬಿಕ್ಕಟ್ಟು ಮೂಡಿದೆ ಎಂಬ ಸುದ್ದಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್‌, ಮಂಗಳವಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಮತ್ತು ಶಾಸಕರೊಂದಿಗೆ ಮಹತ್ವದ ಸಭೆ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿ ಸರ್ಕಾರವನ್ನೇ ಮುಖವಾಡವಾಗಿ ಬಳಸಿ ಆಪ್‌ ಎಲ್ಲೆಡೆ ಪಕ್ಷ ವಿಸ್ತರಣೆ ಗುರಿ ರೂಪಿಸಿತ್ತು. ಆದರೆ ಇದೀಗ ದೆಹಲಿಯಲ್ಲೇ ಅಧಿಕಾರ ಕಳಚಿದೆ. ಅದಕ್ಕಿಂತ ಮೇಲಾಗಿ ಪಕ್ಷದ ಹಿರಿಯಾದ ಕೇಜ್ರಿವಾಲ್‌, ಸಿಸೋಡಿಯಾ ಅವರಂಥ ಪ್ರಮುಖರೇ ಸೋತಿದ್ದು, ಪಂಜಾಬ್‌ನ ಶಾಸಕರಲ್ಲೂ ಆತಂಕ ಮೂಡಿಸಿದೆ ಎಂದು ವರದಿಗಳು ಹೇಳಿವೆ.

ಮತ್ತೊಂದೆಡೆ ಆಪ್‌ನ 30 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್‌ ನಾಯಕರು ಬಾಂಬ್‌ ಸ್ಫೋಟಿಸಿದ್ದರು. ಜೊತೆಗೆ ಮಾನ್‌ ವಿರುದ್ಧ ಒಂದಷ್ಟು ಶಾಸಕರು ಬಂಡೆದಿದ್ದಾರೆ ಎಂಬ ಗುಸುಗುಸು ಕೂಡಾ ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳು ಆಪ್‌ನಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿ, ಇರುವ ಒಂದು ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಕೇಜ್ರಿವಾಲ್‌ ಪಂಜಾಬ್‌ಗೆ ಧಾವಿಸಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಸೋಲಿನ ಬಳಿಕವೂ ಸಿಎಂ ಆಗ್ತಾರೆ ಕೇಜ್ರಿವಾಲ್; ಹೇಗೆ ಎಂಬುದನ್ನ ವಿವರಿಸಿದ ಕಾಂಗ್ರೆಸ್

ಈ ನಡುವೆ ನಡೆಯುತ್ತಿರುವ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಆಪ್‌ ಅಸಮಾಧಾನ ವದಂತಿ ತಳ್ಳಿ ಹಾಕಿದ್ದು, ಇದು ‘ನಿಯಮಿತ ಕಾರ್ಯತಂತ್ರದ ಅಧಿವೇಶನ’ ಎಂದು ಕರೆದಿದೆ. ‘ ಪಕ್ಷದ ನಿರಂತರ ಪ್ರಕ್ರಿಯೆ, ಅದರ ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಎಲ್ಲ ಘಟಕಗಳಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಅದರ ಭಾಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಮಾನ್ ಮತ್ತು ಆಪ್ ಶಾಸಕರು ಅರವಿಂದ್‌ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ’ ಎಂದು ಆಪ್‌ ಮಲ್ವಿಂದರ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ದಿಲ್ಲಿ ಗದ್ದುಗೆಯಿಂದ AAP ಇಳಿಸಲು RSS ಸ್ವಯಂ ಸೇವಕರು ಗುಪ್ತಗಾಮಿನಿಯಂತೆ ಕೆಲಸ ಮಾಡಿದ್ದೇಗೆ?