'ॐ ಉಚ್ಛಾರಣೆಯಿಂದ ಯೋಗ ಶಕ್ತಿಶಾಲಿಯಾಗಲ್ಲ, ಅಲ್ಲಾ ಎಂದರೆ ಶಕ್ತಿ ಕಡಿಮೆ ಆಗುವುದಿಲ್ಲ'
* ವಿಶ್ವಾದ್ಯಂತ ಏಳನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
* ಯೋಗ ದಿನದಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಕಾಂಗ್ರೆಸ್ ನಾಯಕ ಸಿಂಘ್ವಿ
* ಸಿಂಘ್ವಿ ಸವಾಲಿಗೆ ಯೋಗಗುರು ಬಾಬಾ ರಾಮ್ದೇವ್ ತಿರುಗೇಟು
ನವದೆಹಲಿ(ಜೂ.21): ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಹೋರಾಟದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಯೋಗ ಮಹತ್ವಪೂರ್ಣವಾಗಿದೆ ಎಂಬ ಸಂದೇಶ ನೀಡಿದ್ದಾರೆ. ಈ ನಡುವೆ ಕಾಂಗ್ರರೆಸ್ ನಾಯಕ ಅಭಿಷೇಕ್ ಮನು ಸಿಮಘ್ವಿ ಟ್ವೀಟ್ ಒಂದನ್ನು ಮಾಡಿ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ಯೋಗದ ಬಗ್ಗೆ ಸವಾಲೆಸೆದ್ರು, ಬಾಬಾ ರಾಮ್ದೇವ್ ಉತ್ತರಿಸಿದ್ರು
ಅಭಿಷೇಕ್ ಮನು ಸಿಂಘ್ವಿ ಯೋಗ ದಿನದಂದು ಟ್ವೀಟ್ ಒಂದನ್ನು ಮಾಡಿ 'ॐ ಎಂಬ ಉಚ್ಛಾರಣೆಯಿಂದ ಯೋಗ ಹೆಚ್ಚು ಶಕ್ತಿಶಾಲಿಯಾಗುವುದಿಲ್ಲ, ಹಾಗೆಯೇ ಅಲ್ಲಾ ಎಂದರೆ ಈ ಯೋಗದ ಶಕ್ತಿ ಕಡಿಮೆಯಾಗುವುದಿಲ್ಲ' ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಯೋಗಗುರು ಬಾಬಾ ರಾಮ್ದೇವ್ 'ಈಶ್ವರ್- ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗ್ವಾನ್'. ದೇವರೆಲ್ಲರೂ ಒಂದೇ ಎಂದ ಮೇಲೆ ॐ ಎನ್ನಲು ಸಮಸ್ಯೆ ಏನು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ತಾನು ಯಾರನ್ನೂ ಅಲ್ಲಾ ಎಂದು ಹೇಳುವುದರಿಂದ ತಡೆಯುವುದಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಯೋಗ ಮಾಡಬೇಕು ಎಂದಿದ್ದಾರೆ.
ಯೋಗ ಧಾರ್ಮಿಕ ಆಚರಣೆಯಲ್ಲ
ಈ ಬಗ್ಗೆ ಮತ್ತಷ್ಟು ಮಾತನಾಡಿರುವ ಬಾಬಾ ರಾಮ್ದೇವ್ 'ಯೋಗ ಧಾರ್ಮಿಕ ಆಚರಣೆಯಲ್ಲ. ಇದು ನಮ್ಮ ಪೂರ್ವಜರ ಸಾಮಾನ್ಯ ಪರಂಪರೆಯಾಗಿದೆ. ನಾವು ಹೆಮ್ಮೆಯಿಂದ ಯೋಗ, ಆಯುರ್ವೇದ ಮತ್ತು ನಮ್ಮ ಸನಾತನ ಜ್ಞಾನ ಸಂಪ್ರದಾಯವನ್ನು ಅಳವಡಿಸಿಕೊಳ್ಳಬೇಕು. ಯೋಗದ ಬಗ್ಗೆ ಯಾವುದೇ ವಿವಾದಗಳಿಲ್ಲ. ನ್ಯಾಯಯುತವಾಗಿರಿ ಮತ್ತು ಯೋಗದ ಮಹತ್ವವನ್ನು ಸ್ವೀಕರಿಸಿ. ಇಂದು ಇಡೀ ವಿಶ್ವವೇ ಯೋಗ ಮಾಡುತ್ತಿದೆ. ಯೋಗ ನಮ್ಮ ದಿನಚರಿಯ ಒಂದು ಭಾಗವಾಗಲಿದೆ. ಯೋಗ ಮಾಡುವುದರಿಂದ ಒಂದು ತತೆರನಾದ ಸುರಕ್ಷಾ ಕವಚ ತಯಾರಾಗುತ್ತದೆ. ಒಂದು ಕಡೆ ಎರಡು ಡೋಸ್ ವ್ಯಾಕ್ಸಿನೇಷನ್ ಮತ್ತು ಇನ್ನೊಂದೆಡೆ ಯೋಗ ಆಯುರ್ವೇದದ ಡಬಲ್ ಡೋಸ್. ನೀವು ಎಲ್ಲ ಕಡೆಯಿಂದಲೂ ನಿಮ್ಮನ್ನು ಬಲಪಡಿಸಿದಾಗ, ಈ ಸುರಕ್ಷಾ ಕವಚ ಒಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ' ಎಂದಿದ್ದಾರೆ.