‘ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ನಡೆಸಿದ್ದು ಸಗಣಿಯನ್ನೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಯಪುರ (ಅ.01): ‘ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ನಡೆಸಿದ್ದು ಸಗಣಿಯನ್ನೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇನ್ನೇನು ವಿಧಾನಸಭೆ ಚುನಾವಣೆ ಎದುರಿಸಲಿರುವ ಛತ್ತೀಸಗಢದಲ್ಲಿ ನಡೆದ ಪರಿವರ್ತನ್‌ ಮಹಾ ಸಂಕಲ್ಪ ರಾಲಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಆರೋಪ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಗೋಧನ್‌ ನ್ಯಾಯ ಯೋಜನೆ’ಅಡಿಯ ಹಸುವಿನ ಸಗಣಿಯನ್ನು ರೈತರಿಂದ ಖರೀದಿಸುವ ಯೋಜನೆ ಜಾರಿ ಮಾಡಲಾಗಿತ್ತು. ಇದು ರೈತರಿಂದ 2 ರು.ಗೆ ಕೇಜಿ ಸಗಣಿ ಖರೀದಿಸಿ ಅದನ್ನು ಗೊಬ್ಬರ ಉತ್ಪಾದಿಸಲು ಬಳಸಲಾಗುತ್ತದೆ. 

Add Asianetnews Kannada as a Preferred SourcegooglePreferred

ಈ ಯೋಜನೆಯಲ್ಲಿ ಅಂದಾಜು 229 ಕೋಟಿ ರು. ಭ್ರಷ್ಟಾಚಾರ ಎಸಗಿದೆ ಎಂಬ ಆರೋಪವಿದೆ. ಇದನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಮೋದಿ, ‘ಬಿಜೆಪಿ ಸರ್ಕಾರ ಕೇಂದ್ರದಿಂದ ಛತ್ತೀಸ್‌ಗಢದ ವಿಕಾಸಕ್ಕಾಗಿ ಹಣ ಬಿಡುಗಡೆ ಮಾಡುತ್ತಿದ್ದರೆ ಇಲ್ಲಿಯ ಕಾಂಗ್ರೆಸ್‌ ಸರ್ಕಾರ ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ವಿಕಾಸಕ್ಕೆ ಅಡ್ಡಗಾಲಾಗಿದೆ. ಇಲ್ಲಿಯ ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮದ್ಯ ಹಾಗೂ ಪಡಿತರ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದ್ದು ಸಾಲದು ಎಂಬಂತೆ ಸಗಣಿ ವ್ಯಾಪಾರದಲ್ಲೂ ಭ್ರಷ್ಟಾಚಾರ ಮಾಡಿರುವುದು ಈ ರಾಜ್ಯದ ಜನತೆಗೆ ಮಾಡಿದ ದ್ರೋಹ’ ಎಂದು ಗುಡುಗಿದರು. ಇದೇ ವೇಳೆ, ನನ್ನನ್ನು ಟಾರ್ಗೆಟ್‌ ಮಾಡಿ ಪರೋಕ್ಷವಾಗಿ ಒಬಿಸಿಗಳನ್ನು ಕಾಂಗ್ರೆಸ್‌ ಅವಮಾನಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ

ಉಪಮುಖ್ಯಮಂತ್ರಿ ಮಾತಿಗೆ ತಿರುಗೇಟು: ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಟಿ.ಎಸ್‌.ಸಿಂಗ್‌ ಅವರು ದೆಹಲಿಯಲ್ಲಿ ರಾಜ್ಯಕ್ಕೆ ಅಭಿವೃದ್ಧಿಯ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತಿರುಗೇಟು ನೀಡಿದ ಮೋದಿ, ‘ನಾವು ರಸ್ತೆ, ರೈಲು ಮುಂತಾದ ಅಭಿವೃದ್ಧಿ ಯೋಜನೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಆದರೆ ನಾವು ಎಷ್ಟೇ ಹಣ ಬಿಡುಗಡೆ ಮಾಡಿದರೂ ಇಲ್ಲಿನ ಸರ್ಕಾರ ಅದನ್ನು ಜನರಿಗೆ ತಲುಪದಿರುವಂತೆ ಮಾಡುತ್ತದೆ. ಹಾಗಾಗಿ ರಾಜ್ಯದ ಜನತೆ ಬದಲಾವಣೆ ಬಯಸಿರುವುದು ಕಾಣಿಸುತ್ತಿದೆ’ ಎಂದು ತಿರುಗೇಟು ನೀಡಿದರು.