ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನುಸುಳುಕೋರರಿಗೆ ವರ| ಅಸ್ಸಾಂ ಚುನಾವಣೆ ರಾರ‍ಯಲಿಯಲ್ಲಿ ಶಾ ಆರೋಪ

ನಲ್‌ಬಾರಿ (ಅಸ್ಸಾಂ): ಅಸ್ಸಾಂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ‘ಬಿಜೆಪಿ ಚುನಾವಣಾ ಚಾಣಕ್ಯ’ ಖ್ಯಾತಿಯ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಬಿಜೆಪಿಯ ಮೊದಲ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಶಾ ಅವರು, ‘ಈ ಬಾರಿಯ ಚುನಾವಣೆ ವೇಳೆ ಕಾಂಗ್ರೆಸ್‌-ಎಐಯುಡಿಎಫ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಭಾರತದ ನುಸುಳುಕೋರರಿಗೆ ಈಗಾಗಲೇ ಬಂದ್‌ ಆಗಿರುವ ಎಲ್ಲಾ ಬಾಗಿಲುಗಳು ಪುನಃ ತೆರೆಯಲಿವೆ’ ಎಂದರು.

‘ಈ ಹಿಂದಿನ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಕೇವಲ ರಕ್ತಪಾತಗಳೇ ಆಗಿದ್ದು, ಈ ಘಟನೆಗಳಲ್ಲಿ ಸಾವಿರಾರು ಯುವಕರು ಪ್ರಾಣ ತೆತ್ತಿದ್ದಾರೆ. ನೆರೆಯ ರಾಷ್ಟ್ರದ ನುಸುಳುಕೋರರು ಕಾಂಗ್ರೆಸ್‌ನ ಮತಬ್ಯಾಂಕ್‌ ಆಗಿರುವುದರಿಂದ, ಕಾಂಗ್ರೆಸ್‌ ಮತ್ತು ಮುಸ್ಲಿಂ ಮುಖಂಡ ಬದ್ರುದ್ದೀನ್‌ ಅಜ್ಮಲ್‌ ಅವರು ನುಸುಳುಕೋರರಿಂದ ಅಸ್ಸಾಂ ಅನ್ನು ರಕ್ಷಿಸಬಲ್ಲರೇ?’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರವೇ ಒಳ ನುಸುಳುಕೋರರಿಂದ ರಾಜ್ಯವನ್ನು ರಕ್ಷಿಸುವ ಸಮರ್ಥ ನಾಯಕ’ ಎಂದರು.