* ನಾಲ್ವರು ಪ್ರಧಾನಿಗಳ ಜೊತೆ ಕೆಲಸ ಮಾಡಿದ ಅನುಭವ* ನಾಲ್ಕು ದಶಕಗಳ ಕಾಲ ರಾಜಕಾರಣದ ಪಡಸಾಲೆಯಲ್ಲಿದ್ದ ಗುಲಾಂ ನಬಿ ಆಜಾದ್* ನಾಲ್ಕು ದಶಕಗಳ ರಾಜಕೀಯ ಅನುಭವಗಳು ಇದೀಗ ಕೃತಿಯ ರೂಪಕ್ಕೆ 

ನವದೆಹಲಿ (ಆ.28)- ಕಮಿಂಗ್ ಸೂನ್..! ಇವೆರಡು ಪದಗಳು ದೆಹಲಿಯ ರಾಜಕೀಯ ಕಟ್ಟೆಯಲ್ಲಿ ಬಹುಚರ್ಚಿತ ವಿಷಯವಾಗಿವೆ. ನಾಲ್ವರು ಪ್ರಧಾನಿಗಳ ಜೊತೆ ಕೆಲಸ ಮಾಡಿ, ನಾಲ್ಕು ದಶಕಗಳ ಕಾಲ ರಾಜಕಾರಣದ ಪಡಸಾಲೆಯಲ್ಲಿದ್ದು, ಅಲ್ಲಿ ಮಿಂದೆದ್ದ ನೋವು-ನಲಿವುಗಳ ಬಗ್ಗೆ ಒಂದು ವಿಶೇಷ ಪುಸ್ತಕ ಸಿದ್ದಗೊಳ್ಳುತ್ತಿದೆ. ಅಂದಾಗೆ ಅದರ ಸೃಷ್ಠಿ ಕರ್ತ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್.

Add Asianetnews Kannada as a Preferred SourcegooglePreferred

ಕರ್ನಾಟಕವೂ ಸೇರಿದಂತೆ ಭಾರತದ ಯಾವುದೇ ರಾಜ್ಯಕ್ಕೆ ಹೋದರು ಕೂಡ ಕಾಂಗ್ರೆಸ್ ಪಾಳಯದಲ್ಲಿ ಈ ಹೆಸರು ಚಿರಪರಿಚಿತ. ಹೆಚ್ಚು ಕಡಿಮೆ ಪ್ರತಿ ಕಾಂಗ್ರೆಸ್ ಕಾರ್ಯಕರ್ತನೂ ಬಾಯಲ್ಲೂ ಈ ಹೆಸರು ನಲಿಯುತಿತ್ತು. ಜಮ್ಮು-ಕಾಶ್ಮೀರ ಮೂಲದ ಗುಲಾಮ್ ನಬಿ ಆಜಾದ್, ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮೂರು ತಲೆಮಾರಿನವರ ಜೊತೆ ಕೆಲಸ ಮಾಡಿದ್ದಾರೆ. ನಾಲ್ವರು ಪ್ರಧಾನಿಗಳ ಬಳಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸಾಲದ್ದಕ್ಕೆ ಹೆಚ್ಚು ಕಡಿಮೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ.

ಲೂಟನ್ಸ್ ದೆಹಲಿಯ ಪವರ್ ಸೆಂಟರ್‌ನಲ್ಲಿ ಕೂತು ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್‌ನ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದಾರೆ. ಚುನಾವಣಾ ತಂತ್ರಗಾರರಾಗಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕೆಲಸ ಮಾಡಿದ್ದಾರೆ. ಜನಪತ್ ೧೦ (ಟೆನ್) ಜೊತೆ ನಿಂತು ಕಾಂಗ್ರೆಸ್ ಪಕ್ಷವನ್ನೂ ಕಟ್ಟಿದ್ದಾರೆ. ಇಂಥ ಆಜಾದ್ ಅವರು, ಪಕ್ಷದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಅಂಥ ಗಾಂಧಿ ಕುಟುಂಬದ ವಿರುದ್ಧ ಧ್ವನಿ ಎತ್ತಿ ಪತ್ರ ಬರೆದ ೨೩ ಮಂದಿಯಲ್ಲಿ ಅಗ್ರಗಣ್ಯರು ಕೂಡ. ಕೇಂದ್ರದಲ್ಲಿ ಹಲವು ಸಚಿವ ಹುದ್ದೆಗಳು, ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳು, ಅವಿಭಜಿತ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

ದೆಹಲಿಯ ಕಟ್ಟೆಯಲ್ಲಿ ಹೀಗೆ ಸಾಗಿದ ನಾಲ್ಕು ದಶಕಗಳ ರಾಜಕೀಯ ಅನುಭವಗಳು ಆಜಾದ್ ಅವರು ಇದೀಗ ಕೃತಿಯ ರೂಪಕ್ಕೆ ಇಳಿಸುತ್ತಿದ್ದಾರೆ. ಗುಲಾಮ್ ನಬಿ ಆಜಾದ್ ಅವರ ಆತ್ಮಕಥೆಯ ರೂಪದಲ್ಲಿ ಪುಸ್ತಕ ಹೊರಬರಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಒಂದಷ್ಟು ಮುಜುಗರ ತರುವ ವಿಷಯಗಳು ಕೂಡ ಪ್ರಸ್ತಾಪವಾಗುವ ಸಾಧ್ಯತೆ ಇದೆ.