ಪೌರತ್ವ ಕಾಯ್ದೆ ಜಾರಿ: ಕೇಂದ್ರದಿಂದ ಗೆಜೆಟ್‌| ಯೋಜನೆ ಜಾರಿಯಿಂದ ಒಂದು ಹೆಜ್ಜೆಯೂ ಹಿಂದಿಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಣೆ

ನವದೆಹಲಿ[ಜ.11]: ದೇಶಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಗುರುವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಷ್ಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಕ್ಕಾಗಿ ಕಿರುಕುಳಕ್ಕೆ ಗುರಿಯಾಗಿರುವ ಹಿಂದೂ, ಕ್ರೈಸ್ತ, ಸಿಖ್‌, ಜೈನ ಪಾರ್ಸಿ, ಬೌದ್ಧ ಸಮುದಾಯಗಳಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶ ಹೊಂದಿರುವ ಈ ಕಾನೂನಿಗೆ ಈಗಾಗಲೇ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

Add Asianetnews Kannada as a Preferred SourcegooglePreferred

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಎಂದು ವಿಪಕ್ಷಗಳು ಮತ್ತು ಹಲವಾರು ಸಂಘಟನೆಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿವೆ. ಅದರ ಬೆನ್ನಲ್ಲೇ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಸಿಎಎ ಇಸ್ ಗುಡ್ ಎಂದ ಕಾಂಗ್ರೆಸ್ ನಾಯಕ: ಒಪ್ಪಿಕೊಳ್ಳಿ ಎಂದು ಜನತೆಗೆ ಕರೆ!

ವಿಪಕ್ಷಗಳ ಭಾರೀ ವಿರೋಧದ ಹೊರತಾಗಿಯೂ, ಕಾನೂನು ಜಾರಿ ಮಾಡಿಯೇ ಸಿದ್ಧ. ಯೋಜನೆ ಜಾರಿಯಿಂದ ಒಂದು ಹೆಜ್ಜೆಯೂ ಹಿಂದಿಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಮತ್ತೊಂದೆಡೆ ಎಲ್ಲೆಡೆ ವದಂತಿ ಹಬ್ಬಿಸಿರುವಂತೆ, ಯಾವುದೇ ಭಾರತೀಯರ ಪೌರತ್ವವನ್ನು ಇದು ಕಸಿದುಕೊಳ್ಳುವುದಿಲ್ಲ. ಬದಲಾಗಿ ಇದು ಪೌರತ್ವ ನೀಡುವ ಮಸೂದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಇದರ ಹೊರತಾಗಿಯೂ ಕಾಂಗ್ರೆಸ್‌, ಎಡಪಕ್ಷಗಳು, ಟಿಎಂಸಿ ಆಡಳಿತವಿರುವ ರಾಜ್ಯಗಳು ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿವೆ.

ಮೊದ್ಲು ಬಡಿದಾಡೋದು ನಿಲ್ಸಿ: ಸಿಎಎ ವಿಚಾರಣೆ ಆಮೇಲೆ ಎಂದ ಸುಪ್ರೀಂ!