ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳನ್ನು ಒಳಗೊಂಡಿರುವ 123 ವಕ್ಫ್ ಬೋರ್ಡ್ ಆಸ್ತಿಗಳ ನಿಯಂತ್ರಣವನ್ನು ವಹಿಸಿಕೊಳ್ಳಲು ಈ ವರ್ಷದ ಫೆಬ್ರವರಿಯಲ್ಲಿ ಸಚಿವಾಲಯ ನಿರ್ಧಾರ ತೆಗೆದುಕೊಂಡಿತ್ತು.
ದೆಹಲಿ (ಆಗಸ್ಟ್ 31, 2023): ದೆಹಲಿಯ ಜಾಮಾ ಮಸೀದಿ ಸೇರಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಆಗಸ್ಟ್ 22ರಂದು ನೋಟಿಸ್ ನೀಡಿದೆ. ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳನ್ನು ಒಳಗೊಂಡಿರುವ 123 ವಕ್ಫ್ ಬೋರ್ಡ್ ಆಸ್ತಿಗಳ ನಿಯಂತ್ರಣವನ್ನು ವಹಿಸಿಕೊಳ್ಳಲು ಈ ವರ್ಷದ ಫೆಬ್ರವರಿಯಲ್ಲಿ ಸಚಿವಾಲಯ ನಿರ್ಧಾರ ತೆಗೆದುಕೊಂಡಿತ್ತು. ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಅದರ ಮುಂದುವರಿದ ಭಾಗವಾಗಿ ನೋಟಿಸ್ ನೀಡಿದೆ.
ಫೆಬ್ರವರಿ 8 ರ ಪತ್ರದಲ್ಲಿ, ಉಪ ಭೂಮಿ ಮತ್ತು ಅಭಿವೃದ್ಧಿ ಅಧಿಕಾರಿ 123 ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಂದ ಅದನ್ನು "ಮುಕ್ತಗೊಳಿಸುವ" ನಿರ್ಧಾರದ ಬಗ್ಗೆ ವಕ್ಫ್ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಡಿನೋಟಿಫೈಡ್ ವಕ್ಫ್ ಆಸ್ತಿಗಳ ವಿಷಯದ ಕುರಿತು ನ್ಯಾಯಮೂರ್ತಿ (ನಿವೃತ್ತ) ಎಸ್ಪಿ ಗಾರ್ಗ್ ನೇತೃತ್ವದ ದ್ವಿಸದಸ್ಯ ಸಮಿತಿಯು ತನ್ನ ವರದಿಯಲ್ಲಿ ದೆಹಲಿ ವಕ್ಫ್ ಬೋರ್ಡ್ ಯಾವುದೇ ಪ್ರಾತಿನಿಧ್ಯ ಅಥವಾ ಆಕ್ಷೇಪಣೆಯನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್ & ಡಿಒ) ಹೇಳಿದೆ ಎಂದು ವರದಿ ಹೇಳಿದೆ.
ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧ: ಕೇಂದ್ರ ಸರ್ಕಾರ
"ದಿಲ್ಲಿ ವಕ್ಫ್ ಮಂಡಳಿಯು ಪಟ್ಟಿ ಮಾಡಲಾದ ಆಸ್ತಿಗಳಲ್ಲಿ ಯಾವುದೇ ಪಾಲನ್ನು ಹೊಂದಿಲ್ಲ, ಅಥವಾ ಅವರು ಆಸ್ತಿಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಅಥವಾ ಯಾವುದೇ ಆಕ್ಷೇಪಣೆಗಳು ಅಥವಾ ಹಕ್ಕುಗಳನ್ನು ಸಲ್ಲಿಸಿಲ್ಲ ಎಂಬುದು ಮೇಲಿನ ಸಂಗತಿಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ, ದೆಹಲಿ ವಕ್ಫ್ ಮಂಡಳಿಯನ್ನು ಈ '123 ವಕ್ಫ್ ಆಸ್ತಿಗಳಿಗೆ' ಸಂಬಂಧಿಸಿದ ಎಲ್ಲಾ ವಿಷಯಗಳಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.," ಎಂದು ಎಲ್ & ಡಿಒ ಪತ್ರದಲ್ಲಿ ತಿಳಿಸಲಾಗಿದೆ.
ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ 123 ಆಸ್ತಿಗಳ ಭೌತಿಕ ತಪಾಸಣೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ದೆಹಲಿ ವಕ್ಫ್ ಬೋರ್ಡ್ ಮತ್ತು ಕೇಂದ್ರ ಸರ್ಕಾರ ಎರಡೂ ತಮ್ಮ ಸ್ವಾಧೀನಕ್ಕೆ ಹಕ್ಕು ಸಲ್ಲಿಸಿರುವುದರಿಂದ ಈ ಆಸ್ತಿಗಳು ಪ್ರಸ್ತುತ ವಿವಾದದಲ್ಲಿದೆ. ಆದರೆ, ಈ ತೀರ್ಪಿನ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ಈ ನಿರ್ಧಾರವು ಮುಸ್ಲಿಂ ಸಮುದಾಯದಲ್ಲಿ ಗಮನಾರ್ಹ ಆತಂಕ, ಭಯ ಮತ್ತು ಅಸಮಾಧಾನವನ್ನು ಉಂಟುಮಾಡಿದೆ ಎಂದು ಅಮಾನತುಲ್ಲಾ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್ ಪೀಸ್ ಮಾಡಿದ ಆಟೋ ಡ್ರೈವರ್!
