* ಗುರುವಾರದ ಸಭೆಯಲ್ಲಿ ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಲನಕ್ಷೆ ಚರ್ಚೆ* ಕ್ಷೇತ್ರ ಮರುವಿಂಗಡನೆ ಬಗ್ಗೆ ಗುರುವಾರದ ಸಭೆಯಲ್ಲಿ ಸಮಾಲೋಚನೆ* ಸಭೆಗೆ ಗುಪ್ಕರ್‌ ಸಮಿತಿಯಿಂದ ಇಬ್ಬರು ಪ್ರತಿನಿಧಿಗಳ ರವಾನೆಗೆ ನಿರ್ಧಾರ

ನವದೆಹಲಿ/ಶ್ರೀನಗರ(ಜೂ.21): ಜಮ್ಮು ಮತ್ತು ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ಕೇಂದ್ರ ಸರ್ಕಾರ ಜೂ.24ರ ಗುರುವಾರ ಆಯೋಜಿಸಿರುವ ಸಭೆಯಲ್ಲಿ, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದರ ಬದಲಾಗಿ, ಕ್ಷೇತ್ರ ಮರುವಿಂಗಡನೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ರಾಜಕೀಯ ಪಕ್ಷಗಳು ಬೇಡಿಕೆ ಇಟ್ಟಿರುವಂತೆ ತಕ್ಷಣಕ್ಕೆ ರಾಜ್ಯ ಸ್ಥಾನಮಾನ ನೀಡುವ ಯಾವುದೇ ಸಾಧ್ಯತೆ ಇಲ್ಲ. ಜೊತೆಗೆ ಈಗಾಗಲೇ ರದ್ದುಪಡಿಸಲಾಗಿರುವ 370ನೇ ವಿಧಿ ಮರು ಸ್ಥಾಪನೆಯ ಯಾವುದೇ ಸಾಧ್ಯತೆಯಂತೂ ಇಲ್ಲವೇ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಕಾರಣ, ರಾಜ್ಯ ರಚನೆಗೂ ಮುನ್ನ ಕ್ಷೇತ್ರ ಮರುವಿಂಗಡನೆ ಆಗಬೇಕು. ಈ ಕುರಿತು ಶಿಫಾರಸು ಮಾಡಲು ರಚಿಸಲಾಗಿರುವ ಸಮಿತಿ ಇನ್ನೂ ತನ್ನ ವರದಿ ಸಲ್ಲಿಸಿಲ್ಲ. ಅದು ತನ್ನ ವರದಿ ಸಲ್ಲಿಸುವುದು ವರ್ಷಾಂತ್ಯದ ವೇಳೆಗೆ. ಹೀಗಾಗಿ ಗುರುವಾರದ ಸಭೆಯಲ್ಲಿ ಮುಖ್ಯವಾಗಿ ಎಲ್ಲಾ ಪಕ್ಷಗಳನ್ನು ಮರು ವಿಂಗಡನೆ ಕುರಿತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನವಾಗಿರಲಿದೆ. ಜೊತೆಗೆ ರಾಜ್ಯ ಘೋಷಣೆಗೂ ಮುನ್ನ ಸಂಸತ್ತಿನಲ್ಲಿ ಈ ಕುರಿತು ಅನುಮೋದನೆ ಪಡೆದುಕೊಳ್ಳಬೇಕು. ಹೀಗಾಗಿ ಗುರುವಾರದ ಸಭೆ ರಾಜ್ಯ ರಚನೆಗೆ ಅಗತ್ಯವಾದ ನೀಲನಕ್ಷೆ ಕುರಿತು ಸಮಾಲೋಚಿಸಲಿದೆ. ಅದರಲ್ಲಿ ಮೊದಲ ವಿಷಯ, ಕ್ಷೇತ್ರ ಪುನರ್‌ ವಿಂಗಡಣೆಯದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿನಿಧಿ:

ಕಾಶ್ಮೀರಕ್ಕೆ 370ನೇ ವಿಧಿ ರದ್ದು ಬಳಿಕ, ರಾಜ್ಯದ ಹಿತಾಸಕ್ತಿ ಕಾಪಾಡುವ ಹೆಸರಿನಲ್ಲಿ ರಚನೆಗೊಂಡಿರುವ ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ಒಕ್ಕೂಟವಾದ ಗುಪ್ಕರ್‌ ಸಮಿತಿ, ಗುರುವಾರದ ಸಭೆಗೆ ತನ್ನ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸುವ ಘೋಷಣೆ ಮಾಡಿದೆ. ಮೂಲಗಳ ಪ್ರಕಾರ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರುಖ್‌ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಪ್ರತಿನಿಧಿಗಳಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.