Celina Jaitly moves delhi court: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ, ಯುಎಇನಲ್ಲಿ ಬಂಧಿತರಾಗಿರುವ ತಮ್ಮ ಸೋದರ, ನಿವೃತ್ತ ಮೇಜರ್ ವಿಕ್ರಾಂತ್ ಕುಮಾರ್ ಜೇಟ್ಲಿಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಕ್ರಾಂತ್ ಅವರ ಬಿಡುಗಡೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಯುಎಇನಲ್ಲಿ ನಟಿ ಸೆಲೀನಾ ಜೇಟ್ಲಿ ಸೋದರ ಸೇನೆಯ ನಿವೃತ್ತ ಮೇಜರ್‌ನ ಬಂಧನ

ನವದೆಹಲಿ: ಯುಎಇನಲ್ಲಿ ಬಂಧಿಸಲ್ಪಟ್ಟಿರುವ ತಮ್ಮ ಸೋದರ, ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ನಿವೃತ್ತಿಗೊಂಡಿರುವ ವಿಕ್ರಾಂತ್ ಕುಮಾರ್ ಜೇಟ್ಲಿ ಅವರಿಗೆ ಸಹಾಯ ಒದಗಿಸುವಂತೆ ಕೋರಿ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ದೆಹಲಿ ಕೋರ್ಟ್‌ನಲ್ಲಿ ನಡೆದಿದೆ. ವಿಕ್ರಾಂತ್ ಕುಮಾರ್ ಜೇಟ್ಲಿ ಅವರನ್ನು ಯುಎಇ ಪೊಲೀಸರು ಕಳೆದ ವರ್ಷದ ಸೆಪ್ಟೆಂಬರ್‌ನಿಂದಲೂ ಬಂಧನದಲ್ಲಿ ಇರಿಸಿದ್ದಾರೆ. ಜೇಟ್ಲಿಯವರು 2016ರಿಂದಲೂ ಯುಎಇನಲ್ಲಿ ವಾಸ ಮಾಡುತ್ತಿದ್ದು, ರಾಷ್ಟ್ರೀಯ ಭದ್ರತೆಗೆ ಕಳವಳ ತಂದ ಆರೋಪದಡಿ ಅವರ ಬಂಧನ ಆಗಿದೆ ಎಂದು ಇಂದು ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ಆತನ ಬಿಡುಗಡೆಗೆ ವಿದೇಶಾಂಗ ಸಚಿವಾಲಯದ ಕಾನೂನು ಸಹಾಯ ಕೋರಿ ಕೋರ್ಟ್‌ ಮೆಟ್ಟಿಲೇರಿದ ನಟಿ

ನಟಿ ಸೆಲೀನಾ ಜೇಟ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಟಿ ಮತ್ತು ಅವರ ಸಹೋದರನ ನಡುವೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯವು ವಿದೇಶಾಂಗ ಸಚಿವಾಲಯಕ್ಕೆ (MEA) ಸೂಚಿಸಿದೆ. ವಿಕ್ರಾಂತ್ ಜೇಟ್ಲಿ ಮತ್ತು ಯುಎಇಯಲ್ಲಿರುವ ಅವರ ಪತ್ನಿಯ ನಡುವೆ ಸಂವಹನಕ್ಕೂ ಅನುಕೂಲ ಮಾಡಿಕೊಡುವಂತೆಯೂ ಕೋರಲಾಗಿದೆ. ಹಾಗೆಯೇ ಈ ವಿಚಾರದಲ್ಲಿ ಎಂಇಎ ನಡೆಸಿದ ಪ್ರಯತ್ನಗಳ ಕುರಿತು ಸ್ಥಿತಿಗತಿ ವರದಿಯನ್ನು ಸಹ ಕೋರಿದೆ.

ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಮಾಡಿದ ನಟಿ

ಈ ವಿಚಾರಣೆ ವೇಳೆ ನಟಿ ಕೋರ್ಟ್‌ನಲ್ಲಿ ಹಾಜರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತ: ಸೆಲೀನಾ ಜೇಟ್ಲಿ, ಇನ್ಸ್ಟಾಗ್ರಾಮ್‌ನಲ್ಲಿ ಉದ್ದದ ಪೋಸ್ಟೊಂದನ್ನು ಬರೆದುಕೊಂಡಿದ್ದು, ದೆಹಲಿ ಹೈಕೋರ್ಟ್‌ನ ನಿರ್ದೇಶನವು ನನ್ನಲ್ಲಿ ಭರವಸೆಯ ಬೆಳಕು ಮೂಡಿಸಿದೆ ಎಂದು ಹೇಳಿದ್ದಾರೆ. ಜೇಟ್ಲಿ ಭಾರತೀಯ ಪ್ರಜೆಯಾಗಿರುವುದರಿಂದ ಸರ್ಕಾರ ಅವರಿಗೆ ಕಾನೂನು ನೆರವು ನೀಡಬೇಕು ಎಂದು ಅವರ ಜೇಟ್ಲಿ ಪರ ವಕೀಲರು ಹೇಳಿದ್ದಾರೆ. ಸೆಲೀನಾ ಜೇಟ್ಲಿ ವಿಕ್ರಾಂತ್ ಜೇಟ್ಲಿಯ ಏಕೈಕ ರಕ್ತಸಂಬಂಧಿ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿ, ದೂತಾವಾಸ ಮತ್ತು ವಿದೇಶಾಂಗ ಸಚಿವರಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಮನವಿ ಸಲ್ಲಿಸಿದ್ದರೂ, ಜೇಟ್ಲಿಯವರ ಸ್ಥಿತಿ ಅಥವಾ ಕಾನೂನು ಸ್ಥಿತಿಯ ಬಗ್ಗೆ ಕುಟುಂಬಕ್ಕೆ ಯಾವುದೇ ಮಹತ್ವದ ಮಾಹಿತಿ ಬಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ದತ್ತ ನಡೆಸುತ್ತಿದ್ದು, ಮುಂದಿನ ವಿಚಾರಣೆ ಡಿಸೆಂಬರ್ 4 ರಂದು ನಡೆಯಲಿದೆ.

ದೆಹಲಿ ಹೈಕೋರ್ಟ್ ನಿರ್ದೇಶನದಿಂದ ಕತ್ತಲಲ್ಲಿ ಭರವಸೆ ಬೆಳಕಿನ ಕಿರಣ ಮೂಡಿದಂತಾಗಿದೆ:

ವಿಚಾರಣೆಯ ನಂತರ, ಸೆಲಿನಾ ಜೇಟ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. 14 ತಿಂಗಳ ಕಠಿಣ ಪರಿಶ್ರಮದ ನಂತರ, ನಾನು ಅಂತಿಮವಾಗಿ ಕತ್ತಲೆಯ ಸುರಂಗದ ಕೊನೆಯಲ್ಲಿ ಬೆಳಕನ್ನು ತಲುಪಿದ್ದೇನೆ. ನನ್ನ ಸಹೋದರನ ಕುರಿತಾದ ನನ್ನ ರಿಟ್ ಅರ್ಜಿಯ ವಿಚಾರಣೆ ನಡೆದ ದೆಹಲಿಯ ಗೌರವಾನ್ವಿತ ಹೈಕೋರ್ಟ್‌ನಿಂದ ನಾನು ಹೊರಬಂದಿದ್ದೇನೆ. ನನ್ನ ಸಹೋದರ ಬಂಧನದ ನಂತರ ಒಂಬತ್ತು ತಿಂಗಳ ಕಾಲ ಬಲವಂತದ ಕಣ್ಮರೆಗೆ ಬಲಿಯಾಗಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ನೀವು ನಮಗಾಗಿ ಹೋರಾಡಿದ್ದೀರಿ, ಭಾಯ್, ಈಗ ನಾವು ನಿಮ್ಮ ಬೆನ್ನಿಗೆ ನಿಲ್ಲುವ ಸಮಯ ಬಂದಿದೆ ಎಂದು ಹೇಳಿದ ಅವರು ನ್ಯಾಯಾಲಯದ ನಿರ್ದೇಶನದಿಂದ ಕತ್ತಲಿನಲ್ಲಿ ಭರವಸೆಯ ಬೆಳಕು ಬಂದಿದೆ ಎಂದು ಹೇಳಿಕೊಂಡ ಅವರು ರಾಷ್ಟ್ರವನ್ನು

ಒಂದು ವರ್ಷದಿಂದ ನಾನು ನಿಮಗಾಗಿ ಉತ್ತರಗಳನ್ನು ಹುಡುಕುತ್ತಿದ್ದೇನೆ. ಈಗ, ನಮ್ಮ ಗೌರವಾನ್ವಿತ ಸರ್ಕಾರವು ನಿಮಗಾಗಿ ಹೋರಾಡಲು, ನಿಮ್ಮನ್ನು ಸುರಕ್ಷಿತವಾಗಿ ಮರಳಿ ಕರೆತರಲು ನನ್ನ ಪ್ರಾರ್ಥನೆಯನ್ನು ಮುಂದುವರಿಸುತ್ತೇನೆ. ನನ್ನ ಸರ್ಕಾರ, ನಾನು ನಂಬುವ ಏಕೈಕ ಘಟಕ ಭಾರತ ಸರ್ಕಾರ, ಮತ್ತು ಈ 4 ನೇ ತಲೆಮಾರಿನ ಯುದ್ಧ ಪರಿಣಿತರ ಸೈನಿಕ, ಮಗ, ಮೊಮ್ಮಗ ಮರಿಮೊಮ್ಮಗನನ್ನು ರಕ್ಷಿಸಲು ಅವರು ಎಲ್ಲವನ್ನೂ ಮಾಡುತ್ತಾರೆಂದು ನನಗೆ ತಿಳಿದಿದೆ ಅವರು ತಮ್ಮ ಎಲ್ಲವನ್ನೂ, ತಮ್ಮ ಇಡೀ ಯೌವನವನ್ನು ನಮ್ಮ ರಾಷ್ಟ್ರದ ಸೇವೆಗಾಗಿ ನೀಡಿದ್ದಾರೆ, COAS ಶೌರ್ಯ ಪ್ರಶಂಸೆಯನ್ನು ಪಡೆದಿದ್ದಾರೆ ಎಂದು ಸೆಲೀನಾ ಜೇಟ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸ್ ಅಧಿಕಾರಿಯನ್ನೇ ಎತ್ತಿ ಕುಣಿದಾಡಿದ ಕ್ರಿಕೆಟ್ ಅಭಿಮಾನಿಗಳು

ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗೆ ಕಾರಿನಲ್ಲಿದ್ದ ವಿದ್ಯಾರ್ಥಿನಿಯ ಅಪಹರಿಸಿ ಗ್ಯಾಂಗ್‌*ರೇಪ್ : ವಿಮಾನ ನಿಲ್ದಾಣದ ಸಮೀಪವೇ ಘಟನೆ

View post on Instagram

Scroll to load tweet…