ದೆಹಲಿ ಅಬಕಾರಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ತಕ್ಷಣಕ್ಕೆ ಕೇಂದ್ರದ ತನಿಖಾ ಸಂಸ್ಥೆಗಳ ವಿಚಾರಣಾ ಕುಣಿಕೆಯಿಂದ ಹೊರಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. 

ನವದೆಹಲಿ (ಮಾ.24): ದೆಹಲಿ ಅಬಕಾರಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ತಕ್ಷಣಕ್ಕೆ ಕೇಂದ್ರದ ತನಿಖಾ ಸಂಸ್ಥೆಗಳ ವಿಚಾರಣಾ ಕುಣಿಕೆಯಿಂದ ಹೊರಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಕಾರಣ, ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ಮುಗಿದ ಬೆನ್ನಲ್ಲೇ, ಸಿಬಿಐ ಕೇಜ್ರಿವಾಲ್‌ರನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಅಬಕಾರಿ ಹಗರಣ ಸಂಬಂಧ 2022ರಲ್ಲಿ ಮೊದಲು ಕೇಸು ದಾಖಲು ಮಾಡಿದ್ದೇ ಸಿಬಿಐ. ಈ ಬಗ್ಗೆ ಒಮ್ಮೆ ಕೇಜ್ರಿವಾಲ್ ಅವರನ್ನು ಸಿಬಿಐ ಅಧಿಕಾರಿಗಳು 9 ತಾಸು ವಿಚಾರಣೆಗೆ ಒಳಪಡಿಸಿದ್ದರು. ಸಿಬಿಐ ದಾಖಲಿಸಿದ್ದ ಕೇಸು ಆಧಾರವಾಗಿಟ್ಟುಕೊಂಡೇ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಹೀಗಾಗಿ ಮೂಲ ಪ್ರಕರಣ ಸಂಬಂಧ ಇನ್ನಷ್ಟು ವಿಚಾರಣೆಗಾಗಿ ಕೇಜ್ರಿವಾಲ್‌ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರ್ಟ್‌ ಮೊರೆ ಹೋಗಬಹುದು ಎನ್ನಲಾಗಿದೆ.

ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಕಿಂಗ್‌ಪಿನ್‌: ಕೋರ್ಟ್‌ಗೆ ಇ.ಡಿ. ವರದಿ

ಅಬಕಾರಿ ಹಗರಣದ ಜೊತೆಗೆ ದೆಹಲಿ ಜಲಮಂಡಳಿ ಹಗರಣದಲ್ಲೂ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿ ಮಾಡಿದೆ. ಅಂದರೆ ಅಬಕಾರಿ ಹಗರಣದ ವಿಚಾರಣೆ ಮುಗಿದ ಬಳಿಕ ಜಲಮಂಡಳಿ ಕೇಸಲ್ಲಿ ಕೇಜ್ರಿವಾಲ್‌ರನ್ನು ಇ.ಡಿ. ವಿಚಾರಣೆಗೆ ಒಳಪಡಿಸಬಹುದು. ಅದು ಮುಗಿದ ಬಳಿಕ ಕೂಡಾ ಈ ಎರಡೂ ಪ್ರಕರಣಗಳ ಸಂಬಂಧ ಕೇಜ್ರಿವಾಲ್‌ ವಿಚಾರಣೆಗೆ ಮುಂದಾಗಬಹುದು. ಹೀಗಾದಲ್ಲಿ ಕೇಜ್ರಿವಾಲ್‌ ವಿಚಾರಣೆಯಿಂದ ತಕ್ಷಣಕ್ಕೆ ಹೊರ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಅಬಕಾರಿ ಹಗರಣದಲ್ಲಿ ಬಂಧಿತ ಆಪ್‌ ಸರ್ಕಾರದ ಇನ್ನೊಬ್ಬ ಸಚಿವ ಮನೀಶ್‌ ಸಿಸೋಡಿಯಾಗೆ ಜಾಮೀನು ನೀಡಲು ಇತ್ತೀಚೆಗೆ ನ್ಯಾಯಾಲಯ ನಿರಾಕರಿಸಿತ್ತು. ಈ ವೇಳೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಲಾಗುವುದು ಎಂದು ಸಿಬಿಐ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಈ ಉನ್ನತ ಮಟ್ಟದ ವ್ಯಕ್ತಿ ಸ್ವತಃ ಕೇಜ್ರಿವಾಲ್ ಆಗಿರಬಹುದು ಎನ್ನಲಾಗಿದೆ. ಹಾಲಿ ಕೇಜ್ರಿವಾಲ್ ಅವರನ್ನು ದೆಹಲಿ ನ್ಯಾಯಾಲಯ ಮಾ.28ರವರೆಗೂ ಇ.ಡಿ.ವಶಕ್ಕೆ ನೀಡಿದೆ. ಮನೀಶ್‌ ಸಿಸೋಡಿಯಾ ಅವರನ್ನು ಕೂಡಾ ಇ.ಡಿ. ವಿಚಾರಣೆ ಬಳಿಕ ಮರು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ, ಈ ವೇಳೆ ಅವರನ್ನು ಬಂಧಿಸಿತ್ತು.

ಈಗ ಪಂಜಾಬ್‌ ಆಪ್‌ ಸರ್ಕಾರಕ್ಕೂ ನಡುಕ: ಪಂಜಾಬ್‌ನಲ್ಲಿರುವ ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರಕ್ಕೂ ಇದೀಗ ಆತಂಕ ಆರಂಭವಾಗಿದೆ. ದೆಹಲಿಯ ಅಬಕಾರಿ ನೀತಿಯನ್ನೇ ಆಧರಿಸಿ ಪಂಜಾಬ್‌ನಲ್ಲೂ ಆಪ್‌ ಸರ್ಕಾರ ಅಬಕಾರಿ ನೀತಿ ಜಾರಿಗೆ ತಂದಿದೆ. ಇಲ್ಲಿ ಮದ್ಯದ ಲೈಸನ್ಸ್‌ ಪಡೆದ ಎರಡು ಕಂಪನಿಗಳು ದಿಲ್ಲಿ ಹಗರಣದಲ್ಲಿ ಆರೋಪಿಗಳಾಗಿದ್ದಾರೆ.

ನಾನು ರಾಜಕಾರಣಿಯಲ್ಲ, ರಾಷ್ಟ್ರಕಾರಣಿ: ಡಾ.ಸಿ.ಎನ್‌.ಮಂಜುನಾಥ್

ಬಿಜೆಪಿಗರು ನಮ್ಮ ಸಹೋದರರು. ಅವರನ್ನು ದ್ವೇಷಿಸಬೇಡಿ. ನನ್ನನ್ನು ದೀರ್ಘಕಾಲ ಬಂಧಿಸಿಡುವ ಜೈಲು ಭಾರತದಲ್ಲಿಲ್ಲ. ಆದಷ್ಟು ಬೇಗ ಹೊರಬಂದು ನನ್ನ ಭರವಸೆಗಳನ್ನು ಈಡೇರಿಸುವೆ.
- ಅರವಿಂದ ಕೇಜ್ರಿವಾಲ್‌