ತನ್ನದೇ ಆದ ಎಫ್‌​ಐ​ಆರ್‌ ದಾಖ​ಲಿಸಿ ತನಿಖೆ ಆರಂಭ, ಸ್ಥಳಕ್ಕೆ ಭೇಟಿ ನೀಡಿ ದಾಖ​ಲೆ ಸಂಗ್ರ​ಹಿ​ಸಿದ ಸಿಬಿಐ ತಂಡ, ಕ್ರಿಮಿ​ನಲ್‌ ಸಂಚು ನಡೆ​ದಿ​ದೆಯೇ ಎಂಬ ತನಿ​ಖೆ 

ಬಾಲಸೋರ್‌/ನವದೆಹಲಿ(ಜೂ.07): 278 ಮಂದಿಯ ಸಾವಿಗೆ ಕಾರಣವಾದ ಒಡಿಶಾದ ತ್ರಿವಳಿ ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರ ಆರಂಭಿಸಿದೆ. ಈ ಕುರಿತಾಗಿ ಸಿಬಿಐ ತನ್ನ​ದೇ ಎಫ್‌ಐಆರ್‌ ದಾಖಲಿಸಿದ್ದು, ಬಳಿ​ಕ ಸ್ಥಳಕ್ಕೆ ಭೇಟಿ ನೀಡಿದ ತನಿ​ಖಾ ತಂಡ ದಾಖಲೆಗಳನ್ನು ಸಂಗ್ರಹಿಸಿದೆ. ಕೃತ್ಯ​ದಲ್ಲಿ ಕ್ರಿಮಿ​ನಲ್‌ ಸಂಚು ಏನಾ​ದ​ರೂನ ನಡೆ​ದಿ​ದೆಯೇ ಎಂಬು​ದನ್ನು ಸಿಬಿಐ ಪತ್ತೆ ಮಾಡ​ಲಿ​ದೆ.

Add Asianetnews Kannada as a Preferred SourcegooglePreferred

ಈ ದುರಂತದ ಹಿಂದೆ ದುಷ್ಕೃತ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರೈಲ್ವೆ ಇಲಾಖೆ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಾಹಾನಗ ರೈಲು ನಿಲ್ದಾಣದಕ್ಕೆ ಭೇಟಿ 10 ಮಂದಿ ಸಿಬಿಐ ಅಧಿಕಾರಿಗಳ ತಂಡ, ರೈಲು ಹಳಿಗಳು, ಸಿಗ್ನಲ್‌ ರೂಂಗಳನ್ನು ಪರಿಶೀಲನೆ ನಡೆಸಿದ್ದು, ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಸಿಬಿಐ ಅಧಿಕಾರಿಗಳ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಸಹ ಬಾಲಸೋರ್‌ ತಲುಪಿದ್ದು, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ. ಈ ದುರಂತಕ್ಕೆ ಒಳಸಂಚು ಕಾರಣವಾಗಿರಬಹುದು ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಿಬಿಐ ಎಲ್ಲಾ ವಿಧಾನಗಳಲ್ಲೂ ತನಿಖೆ ನಡೆಸಲಿದೆ.

ರೈಲು ದುರಂತ ನಡೆದ ಬಹನಾಗಗೆ ಪ್ರಧಾನಿ ಭೇಟಿ, ಭೀಕರ ಅಪಘಾತ ಸ್ಥಳ ನೋಡಿ ಮರುಗಿದ ಮೋದಿ!

ಮಂಗಳವಾರ ಮಧ್ಯಾಹ್ನ 2.15ಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದು, ದಾಖಲೆಗಳ ಸಂಗ್ರಹ, ಸಾಕ್ಷಿಗಳ ವಿಚಾರಣೆ, ಹೇಳಿಕೆಗಳ ರೆಕಾರ್ಡ್‌ ಮತ್ತು ಶೋಧ ಕಾರ್ಯಗಳನ್ನು ಆರಂಭಿಸಿದೆ.
‘ರೈಲ್ವೆ ಸಚಿವಾಲಯದ ಮನವಿಯ ಆಧಾರದಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಕೋರಮಂಡಲ್‌ ಎಕ್ಸ್‌ಪ್ರೆಸ್‌, ಯಶವಂತಪುರ ಎಕ್ಸ್‌ಪ್ರೆಸ್‌ ಮತ್ತು ಗೂಡ್‌್ಸ ರೈಲುಗಳ ನಡುವೆ ಸಂಭವಿಸಿದ ಅಫಘಾತದಲ್ಲಿ ಕ್ರಿಮಿನಲ್‌ ಸಂಚು ಇರುವ ಕುರಿತಾಗಿ ತನಿಖೆ ನಡೆಸುತ್ತಿದೆ’ ಸಿಬಿಐ ವಕ್ತಾರ ಹೇಳಿದ್ದಾರೆ.

ಜೂ.2ರಂದು ದುರಂತ ನಡೆದ ಬಳಿಕ ಒಡಿಶಾ ಪೊಲೀಸರು ಐಪಿಸಿ ಸೆಕ್ಷನ್‌ 337, 338, 304ಎ, 34, 153, 154 ಮತ್ತು 175ಗಳಡಿಯಲ್ಲಿ (ನಿರ್ಲ​ಕ್ಷ್ಯ​ದಿಂದ ಸಾವು, ದುರು​ದ್ದೇಶ, ಪ್ರಯಾ​ಣಿ​ಕರ ಪ್ರಾಣಕ್ಕೆ ಅಪಾಯ ತರುವ ಕೃತ್ಯ.. ಇತ್ಯಾ​ದಿ​) ಪ್ರಕರಣ ದಾಖಲಿಸಿತ್ತು. ಈ ಪ್ರಕರಣಗಳ​ನ್ನೂ ಸಿಬಿಐ ತನ್ನ ತೆಕ್ಕೆಗೆ ತೆಗೆ​ದು​ಕೊಂಡಿದ್ದು, ಅದ​ರಲ್ಲಿ ಅಲ್ಪ ಬದ​ಲಾ​ವಣೆ ಮಾಡಿ ತನಿಖೆ ಮಾಡ​ಲಿದೆ. ಸಿಬಿ​ಐಗೆ ರೈಲ್ವೆ ಕುರಿತ ತನಿ​ಖೆ​ಯಲ್ಲಿ ಅಷ್ಟುಅನು​ಭವ ಇಲ್ಲದ ಕಾರಣ ರೈಲ್ವೆ ತಜ್ಞರ ಸಹಾಯ ಪಡೆ​ಯ​ಲಿದೆ ಎಂದು ಮೂಲ​ಗಳು ಹೇಳಿ​ವೆ.