ಮೈತೇಯಿ ವಿದ್ಯಾರ್ಥಿಗಳಿಬ್ಬರ ಹತ್ಯೆಗೈದ 6 ಬಂಡುಕೋರರ ಬಂಧನ, ಇದರಲ್ಲಿ ಇಬ್ಬರು ಮಹಿಳೆಯರು!
ಮಣಿಪುರದಲ್ಲಿ ಮತ್ತೆ ಶಾಂತಿಕದಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಮೈತೇಯಿ ಸಮುದಾಯದ ವಿದ್ಯಾರ್ಥಿಗಳಿಬ್ಬರ ಮೃತದೇಹ ಫೋಟೋ ವೈರಲ್ ಆದ ಬೆನ್ನಲ್ಲೇ ಹಿಂಸಾಚಾರ ಜೋರಾಗಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ವಿದ್ಯಾರ್ಥಿಗಳ ಹತ್ಯೆಗೈದ 6 ಬಂಡುಕೋರರನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದ್ದಾರೆ.

ಮಣಿಪುರ(ಅ.01) ಮಣಿಪುರ ಹಿಂಸಾಚಾರದಲ್ಲಿ ನಾಪತ್ತೆಯಾಗಿದ್ದ ಮೈತೇಯಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಫೋಟೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಇತ್ತ ಕ್ಷಿಪ್ರ ಕಾರ್ಯಾಚರಣೆಗೆ ಇಳಿದ CBI ಈ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಿದೆ. ಈ ಪೈಕಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದ್ದಾರೆ.
ಮೇ.3 ರಂದು ಕುಕಿ ಹಾಗೂ ಮೈತೇಯಿ ಸಮುದಾಯದ ನಡುವಿನ ಘರ್ಷಣೆ ತಾರಕಕ್ಕೇರಿತ್ತು. ಈ ಹಿಂಸಾಚಾರದಲ್ಲಿ ಮಣಿಪುರ ಹೊತ್ತಿ ಉರಿದಿತ್ತು. ಇದೇ ವೇಳೆ ಮೈತೇಯಿ ಸಮುದಾಯದ 16 ವರ್ಷದ ಬಾಲಕಿ ಹಾಗೂ 20ರ ಹರೆಯದ ಯುವಕ ನಾಪತ್ತೆಯಾಗಿದ್ದ. ಸುದೀರ್ಘ ದಿನಗಳ ಬಳಿಕ ಮಣಿಪುರದ ಹಿಂಸಾಚಾರ ನಿಯಂತ್ರಣಕ್ಕೆ ಬಂದ ಬಳಿಕ ಇಂಟರ್ನೆಟ್ ಸೇವೆ ಒದಗಿಸಲಾಗಿತ್ತು. ಈ ವೇಳೆ ಈ ವಿದ್ಯಾರ್ಥಿಗಳ ಮೃತದೇಹದ ಫೋಟೋ ವೈರಲ್ ಆಗಿತ್ತು.
ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಣಿಪುರ ವಿದ್ಯಾರ್ಥಿಗಳ ಹತ್ಯೆ, ಚಿತ್ರ ವೈರಲ್, ದೇಹಕ್ಕಾಗಿ ಪೊಲೀಸರ ಶೋಧ!
ಈ ವಿದ್ಯಾರ್ಥಿಗಳು ಕುಕಿ ಸಮುದಾಯದ ವಲಯದಲ್ಲಿ ಸಿಲುಕಿದ್ದರು. ಮೃತದೇಹದ ಫೋಟೋದಲ್ಲಿ ಕೆಲ ಕುಕಿ ಸಮುದಾಯದ ಬಂಡೋಕೋರರ ಸುಳಿವು ಸಿಕ್ಕಿತ್ತು. ಕಾರ್ಯಾಚರಣೆ ಆರಂಭಿಸಿದ CBI ಪೊಲೀಸರು ನಾಲ್ವರನ್ನು ಬಂಧಿಸಿದ್ದರೆ, ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಹಿಂಸಾಚಾರದ ವೇಳೆ ಕಾಣೆಯಾಗಿದ್ದರು, ಇವರಿಬ್ಬರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಇದೀಗ 5 ತಿಂಗಳಿಂದ ನಿಷೇಧಕ್ಕೊಳಪಟ್ಟಿದ್ದ ಮೊಬೈಲ್ ಇಂಟರ್ನೆಟ್ ಮತ್ತೆ ಸ್ಥಾಪಿತಗೊಂಡ ಬೆನ್ನಲ್ಲೇ ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದ್ದು, ಪ್ರತಿಭಟನೆ ಆರಂಭವಾಗಿತ್ತು.. ನೂರಾರು ವಿದ್ಯಾರ್ಥಿಗಳು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದರು.
ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರದಲ್ಲಿ 5 ತಿಂಗಳ ಬಳಿಕ ಇಂಟರ್ನೆಟ್ ಸೇವೆ ಪ್ರಾರಂಭ
ಇಬ್ಬರು ವಿದ್ಯಾರ್ಥಿಗಳು ಹತ್ಯೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಉಗ್ರಗಾಮಿಗಳು ಮಣಿಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇವು ಭದ್ರತಾ ಪಡೆಗಳಿಗೆ ಹೆಚ್ಚಿನ ತಲೆನೋವು ತಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆದ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಗಳು ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವಂತೆ ಉದ್ರಿಕ್ತ ಯುವಕರಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್, ಪೀಪಲ್ಸ್ ಲಿಬರೇಶನ್ ಆರ್ಮಿ ಮುಂತಾದ ನಿಷೇಧಿತ ನಕ್ಸಲ್ ಗುಂಪುಗಳಿಂದ ತೊಂದರೆಯಾಗುವ ಕುರಿತಾಗಿ ಭದ್ರತಾ ಪಡೆಗಳಿಗೆ ಈಗಾಗಲೇ ಎಚ್ಚರಿಕೆಯನ್ನು ರವಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.