Asianet Suvarna News Asianet Suvarna News

ಜಿ20ಯಲ್ಲಿ ಭಾರತವನ್ನು ಟೀಕಿಸಲು ಮಿತ್ರ ದೇಶಗಳಿಗೆ ಮನವಿ ಮಾಡಿದ್ದ ಕೆನಡಾ

ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ  ಈ ವಿಚಾರಕ್ಕೆ ಸಂಬಂಧಿದಂತೆ ಭಾರತವನ್ನು ಜಿ20 ಶೃಂಗದ ವೇಳೆ ಟೀಕಿಸುವಂತೆ ಅಮೆರಿಕ ಹಾಗೂ ಇತರ ಮಿತ್ರ ದೇಶಗಳಿಗೆ ಆಗ್ರಹಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

Canadian Prime Minister Justin Trudeau had asked the US and other allied countries to criticize India during the G20 summit akb
Author
First Published Sep 21, 2023, 7:18 AM IST

ನವದೆಹಲಿ: ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ  ಈ ವಿಚಾರಕ್ಕೆ ಸಂಬಂಧಿದಂತೆ ಭಾರತವನ್ನು ಜಿ20 ಶೃಂಗದ ವೇಳೆ ಟೀಕಿಸುವಂತೆ ಅಮೆರಿಕ ಹಾಗೂ ಇತರ ಮಿತ್ರ ದೇಶಗಳಿಗೆ ಆಗ್ರಹಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆದರೆ ಅಮೆರಿಕಗೆ ಚೀನಾ ವಿರುದ್ಧ ರಾಜತಾಂತ್ರಿಕವಾಗಿ ಹೋರಾಡಲು ಭಾರತ ಪ್ರಮುಖ ಸ್ಥಾನದಲ್ಲಿರುವ ಕಾರಣ ಜೋ ಬೈಡೆನ್‌ (Joe Biden) ಭಾರತದ ವಿರುದ್ಧ ಜಿ20 ಸಭೆಯಲ್ಲಿ ಖಲಿಸ್ತಾನಿ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ಕೆನಡಾ ಪ್ರಧಾನಿ ಹೇಳಿಕೆ ಅತ್ಯಂತ ಗಂಭೀರ : ಆಸ್ಟ್ರೇಲಿಯಾ ಅಮೆರಿಕಾ

ನ್ಯೂಯಾರ್ಕ್‌/ಜವಿಶ್ವಸಂಸ್ಥೆ: ಕೆನಡಾದಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಜಸ್ಟಿನ್ ಟ್ರೂಡೋ ಹೇಳಿಕೆಗೆ ಅಮೆರಿಕ ಹಾಗೂ ಆಸ್ಟ್ರೇಲಿಯಾ (Australia) ದೇಶಗಳು ಕಳವಳ ವ್ಯಕ್ತಪಡಿಸಿವೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ಅಧಿಕಾರಿ ಜಾನ್‌ ಕಿರ್ಬಿ, ಟ್ರೂಡೋ ಮಾಡಿರುವ ಈ ಆರೋಪ ಬಹಳ ಗಂಭೀರವಾಗಿದೆ. ನಾವು ಒಟ್ಟಾವ ಒಪ್ಪಂದದಂತೆ (Ottawa Agreement) ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕು ಎಂದು ಬಯಸುತ್ತೇವೆ. ಅಲ್ಲದೇ ಇದಕ್ಕೆ ಸಹಕರಿಸಲು ಭಾರತವನ್ನು ಪ್ರೋತ್ಸಾಹಿಸುತ್ತೇವೆ. ನಾವು ಇದನ್ನು ರಾಜತಾಂತ್ರಿಕವಾಗಿಯೇ ನೋಡುತ್ತೇವೆ. ಈ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆ ನಡೆಸಲು ಕೆನಡಾ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ತಂದೆಯೂ ಭಾರತ ವಿರೋಧಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್‌, ಇದಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನು ಜಾರಿಯಲ್ಲಿದೆ. ನಾವು ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಇದನ್ನು ಮುಂದುವರೆಸುತ್ತೇವೆ. ಆಸ್ಟ್ರೇಲಿಯಾದಲ್ಲಿ ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಲು ಅವಕಾಶ ನೀಡಿದ್ದೇವೆ. ಭಾರತವೂ ಸಹ ಪ್ರಜಾಪ್ರಭುತ್ವವಾಗಿರುವುದರಿಂದ ಇದನ್ನೇ ನಾವು ಎದುರು ನೋಡುತ್ತೇವೆ ಎಂದು ಹೇಳಿದ್ದಾರೆ.

ಭಾರತ ವಿರುದ್ಧ ಆರೋಪಕ್ಕೆ ಜಸ್ಟಿನ್‌ ಸಾಕ್ಷಿ ನೀಡಲಿ: ಕೆನಡಾ ವಿಪಕ್ಷ ನಾಯಕ

ಟೊರಂಟೋ: ಖಲಿಸ್ತಾನಿ ನಾಯಕ ನಿಜ್ಜರ್‌ನನ್ನು ಭಾರತ ಸರ್ಕಾರದ ಸಂಸ್ಥೆ ಕೊಲ್ಲಿಸಿದೆ ಎಂದು ಆರೋಪಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ, ಇದಕ್ಕೆ ಸರಿಯಾದ ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದು ಇಲ್ಲಿನ ಸಂಸತ್ತಿನ ವಿಪಕ್ಷ ನಾಯಕ ಪಿಯರ್‌ ಪೊಲಿಯೊವರ್‌ಗೆ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪ್ರಧಾನಿ ಟ್ರೂಡೋ ಭಾರತದ ಮೇಲಿನ ಆರೋಪಕ್ಕೆ ಸ್ವಷ್ಟವಾಗಿ ಎಲ್ಲ ರೀತಿಯ ಸಾಕ್ಷಿ ಒದಗಿಸಬೇಕು. ಆಗ ನಾವು ಕೆನಡಾ ನಾಗರಿಕರು ವಿಷಯದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ

2021ರ ರೈತರ ಹೋರಾಟಕ್ಕೂ ಪಾಕ್‌, ಖಲಿಸ್ತಾನ್ ಕುಮ್ಮಕ್ಕು

ನವದೆಹಲಿ: ಕೆನಡಾದಲ್ಲಿನ ಖಲಿಸ್ತಾನಿ ಉಗ್ರರಿಗೆ ಮಾತ್ರವಲ್ಲ, ಅಲ್ಲಿನ ರಾಜಕೀಯ ಪಕ್ಷಗಳ ಖಲಿಸ್ತಾನಿ ಬೆಂಬಲಿತ ಗುಂಪುಗಳಿಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಆರ್ಥಿಕ ಸಹಾಯ ಮಾಡುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಹೇಳಿದೆ. ಕೆನಡಾದ ಲಿಬರಲ್‌ ಪಾರ್ಟಿ (Liberal Party) ಮತ್ತು ನ್ಯೂ ಡೆಮಾಕ್ರಟಿಕ್‌ ಪಾರ್ಟಿಗಳಲ್ಲಿರುವ ಖಲಿಸ್ತಾನಿ ಗುಂಪುಗಳು ಪಾಕಿಸ್ತಾನದ ಗುಪ್ತಚರ ದಳ (ಐಎಸ್‌ಐ)ನಿಂದ ನಿಯಮಿತವಾಗಿ ಹಣ ಪಡೆದುಕೊಳ್ಳುತ್ತಿವೆ. ಹೀಗಾಗಿ ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಖಲಿಸ್ತಾನಿಗಳು (Khalistan) ಭಾರತದ ವಿರುದ್ಧ ಸಮರ ಸಾರುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇನ್ನು ಕೆನಡಾದಲ್ಲಿನ ಖಲಿಸ್ತಾನಿ ಗುಂಪುಗಳು ಅಲ್ಲಿನ ಸರ್ಕಾರದ ನಿಯಂತ್ರಣವನ್ನೇ ಮೀರಿದ್ದು, ಇತ್ತೀಚೆಗಷ್ಟೆ ಜಿ20 ಶೃಂಗಕ್ಕಾಗಿ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋಗೆ ಖಲಿಸ್ತಾನಿಗಳಿಂದ ಕೊಲೆ ಬೆದರಿಕೆ ಬಂದಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ವಲಸೆ ಹೆಸರಿನಲ್ಲಿ ಖಲಿಸ್ತಾನಿಗಳು ವಿದ್ಯಾರ್ಥಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಅದನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಭಾರತಕ್ಕೆ ಬಾರಲು ಇಷ್ಟವಿಲ್ಲದ ವಿದ್ಯಾರ್ಥಿಗಳನ್ನು ಖಲಿಸ್ತಾನಿ ಗುಂಪುಗಳು, ಭಾರತ ಮತ್ತು ಭಾರತದ ರಾಯಭಾರ ಕಚೇರಿ ವಿರುದ್ಧ ಪ್ರತಿಭಟನೆ ನಡೆಸಲು ಬಳಸಿಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios