ಸಮುದ್ರಮಟ್ಟದಿಂದ 20 ಸಾವಿರ ಅಡಿ ಎತ್ತರದಲ್ಲಿರುವ ಆದಿಕೈಲಾಸದಲ್ಲಿ ಬಾರ್ಡರ್ ರೋಡ್‌ ಆರ್ಗನೈಜೇಷನ್‌ ಮಾಡಿರುವ ಈ ಸಾಹಸ ಮೈನವಿರೇಳಿಸುವಂಥದ್ದು. ಇನ್ನು ಮುಂದೆ ಆದಿಕೈಲಾಸಕ್ಕೆ ಏರಲು ಕಿಲೋಮೀಟರ್‌ಗಟ್ಟಲೆ ನಡೆಯುವುದು, ಪರ್ವತ ಏರಬೇಕಂತಿಲ್ಲ. ಆದಿಕೈಲಾಸದವರೆಗೆ ವಾಹನ ಸಾಗಬಹುದಾದ ರಸ್ತೆಯನ್ನು ಬಿಆರ್‌ಓ ನಿರ್ಮಾಣ ಮಾಡಿದೆ.

ನವದೆಹಲಿ (ಏ.7): ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮೇ 4 ರಿಂದ ಆದಿ ಕೈಲಾಸ ಮತ್ತು ಓಂ ಪರ್ವತ ಯಾತ್ರೆ ಆರಂಭವಾಗಲಿದೆ. ಭಕ್ತರು ತವಘಾಟ್‌ನಿಂದ ಆದಿ ಕೈಲಾಸ ಮತ್ತು ಓಂ ಪರ್ವತಕ್ಕೆ ಮೊದಲ ಬಾರಿಗೆ ವಾಹನಗಳ ಮೂಲಕ ಪ್ರಯಾಣಿಸಲು ಸಾಧ್ಯವಾಗಲಿದೆ ಸುಮಾರು 20,000 ಅಡಿ ಎತ್ತರದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಿರ್ಮಿಸಿದ 130 ಕಿಮೀ ಉದ್ದದ ರಸ್ತೆಯಿಂದಾಗಿ ಇದು ಸಾಧ್ಯವಾಗಿದೆ. ಇಲ್ಲಿಯವರೆಗೂ ಭಕ್ತರು ತವಾಘಾಟ್‌ ಪಾಯಿಂಟ್‌ನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಈ ಬಾರಿ ಕುಮಾನ್ ಮಂಡಲ ವಿಕಾಸ ನಿಗಮ (ಕೆಎಂವಿಎನ್) ಸಹ ಭಕ್ತರಿಗೆ ಪ್ಯಾಕೇಜ್ ಕೂಡ ನೀಡಿದೆ. ಪ್ಯಾಕೇಜ್‌ ಇಲ್ಲದೆ ಆದಿ ಕೈಲಾಸಕ್ಕೆ ಹೋಗಲು ಬಯಸಿದರೆ, ಅತನ ವೈಯಕ್ತಿಕ ಖರ್ಚು ವೆಚ್ಚಗಳಲ್ಲಿ ಹೋಗಬಹುದಾಗಿದೆ. ಇದಕ್ಕಾಗಿ ಧಾರ್ಚುಲಾದಲ್ಲಿರುವ ಎಸ್‌ಡಿಎಂ ಕಚೇರಿಯಿಂದ ಆನ್‌ಲೈನ್ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಆದಿ ಕೈಲಾಸವನ್ನು ಭಾರತದ ಕೈಲಾಸ ಮಾನಸ ಸರೋವರ ಎಂದೂ ಕರೆಯುತ್ತಾರೆ. ಚೀನಾ ಆಕ್ರಮಿತ ಟಿಬೆಟ್‌ನಲ್ಲಿರುವ ಮಾನಸ ಸರೋವರದಲ್ಲಿ ಕೈಲಾಸ ಪರ್ವತದ ನೆರಳು ಹೇಗೆ ಗೋಚರಿಸುತ್ತದೆಯೋ ಅದೇ ರೀತಿ ಪಾರ್ವತಿ ಕುಂಡದಲ್ಲಿಯೂ ಕೈಲಾಸ ಪರ್ವತದ ನೆರಳು ಬೀಳುತ್ತದೆ. ಉತ್ತರಾಖಂಡದ ಗಡಿಯಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣವನ್ನು ಪ್ರಸ್ತುತ ಮುಚ್ಚಲಾಗಿದೆ.

ಉತ್ತರಾಖಂಡದ ಪ್ರಮುಖ ಹಿಂದೂ ತೀರ್ಥಕ್ಷೇತ್ರವಾದ ಕೇದಾರನಾಥ ಧಾಮದ ಬಾಗಿಲುಗಳು ಏಪ್ರಿಲ್ 25 ರಂದು ತೆರೆಯಲಿದೆ. ಈ ಬಾರಿಯ ಉತ್ತರಾಖಂಡದ ಚಾರ್ ಧಾಮ್ ಯಾತ್ರೆಯು ಏಪ್ರಿಲ್ 22 ರಿಂದ ಪ್ರಾರಂಭವಾಗುತ್ತಿದೆ. ಯಮುನೋತ್ರಿ ಮತ್ತು ಗಂಗೋತ್ರಿಯ ಬಾಗಿಲುಗಳು ಏಪ್ರಿಲ್ 22 ರಂದು ಮತ್ತು ಬದರಿನಾಥ್ ಏಪ್ರಿಲ್ 27 ರಂದು ತೆರೆಯಲ್ಪಡುತ್ತವೆ. ಮೊದಲ ಬಾರಿಗೆ, ಉತ್ತರಾಖಂಡ ಸರ್ಕಾರವು ಯಾತ್ರೆಗೆ ಬುಕ್ಕಿಂಗ್‌ ಅನ್ನು ಆರಂಭ ಮಾಡಿದೆ. ಈವರೆಗೆ ಒಟ್ಟು 9 ಲಕ್ಷದ 68 ಸಾವಿರದ 951 ಮಂದಿ ಯಾತ್ರೆಗೆ ಹೆಸರು ನೋಂದಾಯಿಸಿದ್ದಾರೆ. ಫೆಬ್ರವರಿ 16 ರಿಂದ, ಜಿಎಂವಿಎನ್ ಅತಿಥಿ ಗೃಹಕ್ಕೆ 7 ಕೋಟಿ ರೂ.ಗೂ ಹೆಚ್ಚು ಮುಂಗಡ ಬುಕ್ಕಿಂಗ್ ಮಾಡಲಾಗಿದೆ.

ಟ್ರೆಕ್ಕಿಂಗ್ ಜೊತೆಗೆ ಯಾತ್ರಾರ್ಥಿಗಳು ಹೆಲಿಕಾಪ್ಟರ್ ಮೂಲಕ ದೇವಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಇದಕ್ಕಾಗಿ ಉತ್ತರಾಖಂಡ ಸರ್ಕಾರವು ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Add Asianetnews Kannada as a Preferred SourcegooglePreferred

Mahashivratri 2023: ಭಕ್ತರಷ್ಟೇ ಅಲ್ಲ, ವಿಜ್ಞಾನಿಗಳಿಗೂ ತಲುಪಲಾಗದ ನಿಗೂಢ ಶಕ್ತಿ ಹೊಂದಿದೆ ಕೈಲಾಸ ಪರ್ವತ!

ಯಾತ್ರೆ ಮಾರ್ಗದಲ್ಲಿ ಹೆಲ್ತ್‌ ಎಟಿಎಂ: ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಚಾರ್‌ಧಾಮ್‌ ಯಾತ್ರೆಯ ಸಮಯದಲ್ಲಿ ಆರೋಗ್ಯ ತಪಾಸಣೆಗಾಗಿ ಯಾತ್ರೆಯ ಮಾರ್ಗದಲ್ಲಿ ಹೆಲ್ತ್‌ ಎಟಿಎಂಗಳನ್ನು ಸ್ಥಾಪಿಸಲಾಗುವುದು ಎಂದು ಇತ್ತೀಚೆಗೆ ಹೇಳಿದ್ದರು. ಇದರಿಂದ ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.

Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!

ಏಪ್ರಿಲ್ 3 ರಂದು, ರಾಜ್ಯ ಆರೋಗ್ಯ ಸಚಿವ ಡಾ.ಧನ್ ಸಿಂಗ್ ರಾವತ್ ಪರಿಶೀಲನಾ ಸಭೆಯಲ್ಲಿ, ಅಗತ್ಯವಿದ್ದರೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಲಸಿಕೆ ಶಿಬಿರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದರು.