ಕೇಸರಿ ಕಲರವಕ್ಕೆ ಕೆರಳಿದ ತೆಲಂಗಾಣ TRS, ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಜೈ ಕೆಸಿಆರ್ ಬಲೂನ್!
- ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕ್ರಮದಿಂದ ಕೆರಳಿದ ಟಿಆರ್ಎಸ್
- ಮೋದಿ ವಿರುದ್ಧ ತೊಡೆ ತಟ್ಟಿದ ಸಿಎಂ ಕೆಸಿಆರ್, ಹೆಜ್ಜೆ ಹೆಜ್ಜೆಗೂ ಟ್ರಬಲ್
- ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾರಿಬಿಟ್ಟ ಜೈ ಕೆಸಿಆರ್ ಬಲೂನ್
ಹೈದರಾಬಾದ್(ಜು.03): ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ, ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಮುಖ್ಯಮಂತ್ರಿ ಕೆ ಚಂದ್ರಶೇಕರ್ ರಾವ್ ಹಾಗೂ ಅವರ ಟಿಆರ್ಎಸ್ ಪಕ್ಷ ಕೆರಳಿ ಕೆಂಡವಾಗಿದೆ. ಪ್ರಧಾನಿ ಮೋದಿಯನ್ನು ಸ್ವಾಗತಿಸಲು ತೆರಳದೆ ಶಿಷ್ಟಚಾರ ಉಲ್ಲಂಘಿಸಿದ ಸಿಎಂ ಇದೀಗ ಮತ್ತೆ ಮೋದಿಗೆ ಮುಜುಗರ ತರಲು ಹಾಗೂ ತೆಲಂಗಾಣದಲ್ಲಿ ಜನ ಟಿಆರ್ಎಸ್ ಜೊತೆಗಿದ್ದಾರೆ ಎಂದು ತಿಳಿಸಲು ಜೈ ಕೆಸಿಆರ್ ಬಲೂನ್ ಹಾರಿಬಿಡಲಾಗಿದೆ.
ಜೈ ಕೆಸಿಆರ್ ಎಂದು ಬರೆದಿರುವ ಬಲೂನ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭಾ ಕಾರ್ಯಕ್ರಮದ ಹೊರಭಾಗದಲ್ಲಿ ಹಾರಿ ಬಿಡಲಾಗಿದೆ. ಸಿಕಂದರಾಬಾದ್ನ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಈ ಬಲೂನ್ಗಳನ್ನು ಹಾರಿಬಿಡಲಾಗಿದೆ.
ಹುಲಿ ಬರುತ್ತಿದ್ದಂತೆಯೇ ನರಿಗಳು ಓಡಿ ಹೋಗ್ತವೆ: ಮೋದಿ ಸ್ವಾಗತಿಸದ ಕೆಸಿಆರ್ಗೆ ಬಿಜೆಪಿ ಲೇವಡಿ!
ಪಿಂಕ್ ಕಲರ್ ಬಲೂನ್ ಮೇಲೆ ಜೈ ಜೈ ಕೆಸಿಆರ್ ಎಂದು ಬರೆಯಲಾಗಿದೆ. ದೊಡ್ಡ ಗಾತ್ರದ ಬಲೂನ್ನ್ನು ಆಗಸಕ್ಕೆ ಹಾರಿಬಿಡಲಾಗಿದೆ. ಇದು ಮೋದಿ ಕಾರ್ಯಕ್ರಮ ನಡೆಯುವ ಪರೇಡ್ ಗ್ರೌಂಡ್ ಸುತ್ತಲೂ ಈ ರೀತಿ ಹಾರಿಬಿಡಲಾಗಿದೆ. ಈ ಮೂಲಕ ಮೋದಿಗೆ ಇರಿಸು ಮುರಿಸು ತರುವ ರಾಜಕೀಯ ತಂತ್ರ ಉಪಯೋಗಿಸಿದ್ದಾರೆ.
ತೆಲಂಗಾಣದಲ್ಲಿ ಕೆಸಿಆರ್ಗೆ ಮಾತ್ರ ಬೆಂಬಲ ಇದೆ. ಪ್ರಧಾನಿ ಮೋದಿಗೆ ಬೆಂಬಲ ಇಲ್ಲ ಎಂದು ಸೂಚಿಸಲು ಟಿಆರ್ಎಸ್ ಈ ರೀತಿ ಮಾಡಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಇನ್ನು ಕೆ ಚಂದ್ರಶೇಕರ್ ರಾವ್ ಹಾಗೂ ಪ್ರಧಾನಿ ಮೋದಿ ನಡುವೆ ಕಳೆದ ಕೆಲ ದಿನಗಳಿಂದ ನೇರಾ ನೇರ ರಾಜಕೀಯ ಗುದ್ದಾಟಗಳು ನಡೆಯುತ್ತಿದೆ.
ಪ್ರಧಾನಿ ಮೋದಿ ಆಗಮನದಿಂದ ತೆಲಂಗಾಣ ಕೇಸರಿ ಮಯವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ನಾಯಕರ ಪೋಸ್ಟರ್ ರಾರಾಜಿಸುತ್ತಿದೆ. ಇದು ಸಿಎಂ ಚಂದ್ರಶೇಕರ್ ರಾವ್ ಹಾಗೂ ಟಿಆರ್ಎಸ್ ಪಕ್ಷವನ್ನು ಕೆರಳಿಸಿದೆ. ಇದಕ್ಕೆ ಪ್ರತಿಯಾಗಿ ಇದೀಗ ಮೋದಿ ಕಾರ್ಯಕ್ರಮದ ಹೊರಭಾಗ ಹಾಗೂ ಏರ್ಪೋರ್ಟ್ ತೆರಳುವ ಮಾರ್ಗ ಹಾಗೂ ನಗರದ ಪ್ರಮುಖ ಕಡೆಗಳಲ್ಲಿ ಜೈ ಜೈ ಕೆಸಿಆರ್ ಬಲೂನ್ಗಳನ್ನು ಹಾರಿಬಿಡಲಾಗಿದೆ.
ಕೆಸಿಆರ್ಗೆ ಮೋದಿ ಕಂಡ್ರೆ ಯಾಕಷ್ಟು ಕೋಪ? ಹೈದರಾಬಾದ್ಗೆ ಬಂದ ಪ್ರಧಾನಿ ಸ್ವಾಗತಿಸಲು ಗೈರು!
ತೆಲಂಗಾಣದ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದಾರೆ. ಆದರೆ ಕೆಲವು ಗಂಟೆಗಳ ನಂತರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ತೆರಳದೇ ಸಚಿವರೊಬ್ಬರನ್ನು ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಮಧ್ಯಾಹ್ನ ಇದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರನ್ನು ಕಳುಹಿಸಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿ ಪ್ರಧಾನಿ ಆಗಮನದ ವೇಳೆ ಕೆಸಿಆರ್ ಅವರು ಶಿಷ್ಟಾಚಾರ ಮುರಿದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ ಯಶವಂತ ಸಿನ್ಹಾ ಅವರ ಸ್ವಾಗತಕ್ಕೆ ಸ್ವತಃ ಹೋಗಿದ್ದು, ಮೋದಿ ಸ್ವಾಗತಕ್ಕೆ ಸಚಿವರೊಬ್ಬರನ್ನು ಕಳುಹಿಸಿದ್ದಕ್ಕೆ ಬಿಜೆಪಿ ಆಕ್ಷೇಪಿಸಿದೆ.