ತ್ರಿವಳಿ ತಲಾಖ್, 370ನೇ ವಿಧಿ ರದ್ದಿಗೆ 1 ವರ್ಷ: ಕಾರ್ಯಕ್ರಮ ಆಯೋಜಿಸಲು ಸೂಚನೆ!
ತ್ರಿವಳಿ ತಲಾಖ್, 370ನೇ ವಿಧಿ ರದ್ದಿಗೆ 1 ವರ್ಷ: ಕಾರ್ಯಕ್ರಮ| ರಾಜ್ಯ ಬಿಜೆಪಿ ಘಟಕಗಳಿಗೆ ಹೈಕಮಾಂಡ್ ಸೂಚನೆ| ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರಕ್ಕೂ ಸೂಚನೆ| ಬಿಜೆಪಿ ಸಾಧನೆಗಳ ಪಟ್ಟಿಯನ್ನು ತಜ್ಞರೊಂದಿಗೆ ಚರ್ಚಿಸಿ
ನವದೆಹಲಿ(ಜು.25): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಾಂವಿಧಾನಿಕ 370ನೇ ವಿಧಿ ರದ್ದು, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕಲ್ಪಿಸುವ ತ್ರಿವಳಿ ತಲಾಖ್ ತಿದ್ದುಪಡಿ ಕಾಯ್ದೆ ಜಾರಿಯಾಗಿ 1 ವರ್ಷ ಪೂರೈಸಲಿರುವ ಹಿನ್ನೆಲೆ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಸೂಚಿಸಿ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಗಳಿಗೆ ಕೇಂದ್ರ ಬಿಜೆಪಿ ನಾಯಕತ್ವ ಸೂಚಿಸಿದೆ.
ಅಲ್ಲದೆ, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಪ್ರಚುರಪಡಿಸುವಂಥ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಪತ್ರ ಮುಖೇನ ಸೂಚಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಕಾಶ್ಮೀರವನ್ನು 2 ಭಾಗಗಳಾಗಿ ವಿಭಜಿಸಿ ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿತ್ತು. ಅಲ್ಲದೆ, ತ್ರಿವಳಿ ತಲಾಖ್ ಮೂಲಕ ತಕ್ಷಣವೇ ವಿಚ್ಛೇದನ ನೀಡುವುದನ್ನು ಅಪರಾಧಿಕರಣಗೊಳಿಸುವ ತ್ರಿವಳಿ ತಲಾಖ್ ಮಸೂದೆಗೆ ಕಳೆದ ವರ್ಷದ ಆ.1ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದರು. ಕೇಂದ್ರದ ಈ ಐತಿಹಾಸಿಕ ಕಾರ್ಯಕ್ರಮಗಳು ವರ್ಷ ಪೂರೈಸಲಿರುವ ಹಿನ್ನೆಲೆ, ಜು.28ರಿಂದ ಆ.3ರವರೆಗೆ ಸ್ಥಳೀಯ ಭಾಷೆಗಳಲ್ಲಿ ರಾರಯಲಿಗಳನ್ನು ಏರ್ಪಡಿಸಬೇಕು. ತನ್ಮೂಲಕ ಸರ್ಕಾರದ ಸಾಧನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಬೇಕು ಎಂದು ಸೂಚಿಸಲಾಗಿದೆ.
ಇದರನ್ವಯ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಇತರ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವವರೊಂದಿಗೆ ಬಿಜೆಪಿಯ 1 ವರ್ಷದ ಸಾಧನೆಗಳ ಕುರಿತಾಗಿ ಚರ್ಚಿಸುವ ವಿಡಿಯೋ ಕಾನ್ಫರೆನ್ಸ್ಗಳನ್ನು ಹಮ್ಮಿಕೊಳ್ಳಬೇಕು. ದೊಡ್ಡ ರಾಜ್ಯಗಳಲ್ಲಿ 5 ಹಾಗೂ ಸಣ್ಣ ರಾಜ್ಯಗಳಲ್ಲಿ 2 ವಿಡಿಯೋ ಕಾನ್ಫರೆನ್ಸ್ಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಪ್ರತೀ ಜಿಲ್ಲೆಯಿಂದ ಓರ್ವ ಸಾಮಾಜಿಕ ಕಾರ್ಯಕರ್ತ ಹಾಗೂ 50 ಬುದ್ಧಿವಂತರನ್ನು ಆಯ್ಕೆ ಮಾಡಿಕೊಳ್ಳುವಂತೆ ಈ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈ ಕುರಿತಾಗಿ ರಾಷ್ಟ್ರ ಮಟ್ಟದಲ್ಲಿ ವರ್ಚುವಲ್ ರಾರಯಲಿಯೊಂದನ್ನು ಆಯೋಜಿಸಲಾಗುತ್ತದೆ. ಜೊತೆಗೆ, ಕೇಂದ್ರ ಬಿಜೆಪಿ ನಾಯಕರೊಬ್ಬರು ಜಮ್ಮು-ಕಾಶ್ಮೀರ ಹಾಗೂ ಲಡಾಖ್ನಲ್ಲಿ ಆ.5ರಂದು ನಡೆಯಲಿರುವ ವಿಶೇಷ ಸ್ಥಾನಮಾನ ರದ್ದತಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.