ಬಿಜೆಪಿ ಗೆದ್ದ 3 ರಾಜ್ಯಗಳಲ್ಲಿ ಸಿಎಂ ಸ್ಥಾನಕ್ಕೆ ಹಗ್ಗಜಗ್ಗಾಟ: ಮುಖ್ಯಮಂತ್ರಿ ಆಯ್ಕೆಗೆ ಇಂದು ವೀಕ್ಷಕರ ನೇಮಕ
ಮೂರು ರಾಜ್ಯಗಳಲ್ಲೂ ಕೇಂದ್ರ ಸಚಿವರು, ಸಂಸದರು, ಹೊಸಬರು ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿವೆ. ಹೀಗಾಗಿ ಬಿಜೆಪಿ ಈ ರಾಜ್ಯಗಳಿಗೆ ವೀಕ್ಷಕರನ್ನು ನೇಮಕ ಮಾಡಲಿದೆ. ಇವರು ರಾಜ್ಯದ ಶಾಸಕರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಯಾರಾಗಬೇಕೆಂಬ ವರದಿಯನ್ನು ವರಿಷ್ಠರಿಗೆ ಸಲ್ಲಿಸಲಿದ್ದಾರೆ.
![bjp observers for madhya pradesh rajasthan and chhattisgarh likely on friday ash bjp observers for madhya pradesh rajasthan and chhattisgarh likely on friday ash](https://static-ai.asianetnews.com/images/01hh082q2bcmc21bk73p39yyjd/modi-shah-bjp_363x203xt.jpg)
ನವದೆಹಲಿ (ಡಿಸೆಂಬರ್ 8, 2023): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ ಜಯಗಳಿಸಿದ್ದರೂ ಸಹ ಇನ್ನೂ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಆಯ್ಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಕ್ಕಾಗಿ ಈ 3 ರಾಜ್ಯಗಳಿಗೆ ವೀಕ್ಷಕರನ್ನು ಶುಕ್ರವಾರ ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಬಿಜೆಪಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಜಯಗಳಿಸಿತ್ತು. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಮುಂದುವರೆದಿದೆ.
ಮೂರು ರಾಜ್ಯಗಳಲ್ಲೂ ಕೇಂದ್ರ ಸಚಿವರು, ಸಂಸದರು, ಹೊಸಬರು ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿವೆ. ಹೀಗಾಗಿ ಬಿಜೆಪಿ ಈ ರಾಜ್ಯಗಳಿಗೆ ವೀಕ್ಷಕರನ್ನು ನೇಮಕ ಮಾಡಲಿದೆ. ಇವರು ರಾಜ್ಯದ ಶಾಸಕರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಯಾರಾಗಬೇಕೆಂಬ ವರದಿಯನ್ನು ವರಿಷ್ಠರಿಗೆ ಸಲ್ಲಿಸಲಿದ್ದಾರೆ.
ಇದನ್ನು ಓದಿ: ಸಂಸತ್ತಿನಲ್ಲಿ ನಮೋಗೆ ಚಪ್ಪಾಳೆಯ ಸ್ವಾಗತ; ಸಂಸದರಿಂದ 3ನೇ ಬಾರಿ ಮೋದಿ ಸರ್ಕಾರ ಘೋಷಣೆ
ಈ ನಡುವೆ ರಾಜಸ್ಥಾನ ಸಿಎಂ ಆಕಾಂಕ್ಷಿ ವಸುಂಧರಾ ರಾಜೇ ಅವರು ಗುರುವಾರ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ದಿಲ್ಲಿಯಲ್ಲಿ ಭೇಟಿಯಾದರು. ಇನ್ನೊಬ್ಬ ಆಕಾಂಕ್ಷಿ ಬಾಬಾ ಬಾಲಕನಾಥ್ ಅವರು ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದರು. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ - ಅಮಿತ್ ಶಾ ಅವರೂ ಗುರುವಾರ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಗೆದ್ದಿದ್ದಕ್ಕೆ ಮಧ್ಯಪ್ರದೇಶದ ಇಬ್ಬರು ಕಾಂಗ್ರೆಸ್ಸಿಗರಿಂದ ಮುಖಕ್ಕೆ ಮಸಿ
ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಜಯಗಳಿಸಿದ್ದರಿಂದ ಇಬ್ಬರು ಕಾಂಗ್ರೆಸ್ ನಾಯಕರು ತಮ್ಮ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ. ‘ರಾಜ್ಯದಲ್ಲಿ ಬಿಜೆಪಿ 50 ಸೀಟು ಗೆದ್ದರೆ ಮಸಿ ಬಳೆದುಕೊಳ್ಳುತ್ತೇನೆ’ ಎಂದಿದ್ದ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಫೂಲ್ ಸಿಂಗ್ ಬರೈಯಾ ಹೇಳಿದ್ದರು. ಈ ಮಾತಿನಂತೆ ಅವರು ಗುರುವಾರ ರಾಜಭವನ ಎದುರು ತಮ್ಮ ಮುಖಕ್ಕೆ ಮಸಿ ಬಳಿದುಕೊಂಡರು. ಇದಕ್ಕೂ ಮುನ್ನ ಮತ್ತೊಬ್ಬ ಕಾಂಗ್ರೆಸ್ ನಾಯಕ, ಕಿಸಾನ್ ಮೋರ್ಚಾದ ಮಹಾಮಂತ್ರಿ ಯೋಗೇಶ್ ದಂಡೌತಿಯಾ ಸಹ ತಮ್ಮ ಮುಖಕ್ಕೆ ಮಸಿ ಬಳಿದುಕೊಂಡರು.
ಇದನ್ನು ಓದಿ: ಮೋದಿ ದೂರವಿಟ್ಟು ತಮ್ಮ ಕ್ಷೇತ್ರದಲ್ಲೇ ಸೋತ ಮಿಜೋರಾಂ ಸಿಎಂ, ಡೆಪ್ಯುಟಿ ಸಿಎಂ: ZPM ಗೆ ಅಧಿಕಾರ ನೀಡಿದ ಮತದಾರ ಪ್ರಭು!