ಬಂಗಾಳದಲ್ಲಿ ಬಿಜೆಪಿ 100 ಸ್ಥಾನಗಳನ್ನು ಅಕ್ರಮವಾಗಿ ಲೂಟಿ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇತ್ತ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ 99 ಸೋಲು ಕಂಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇದರ ನಡುವೆ ರಾಹುಲ್, ತಮಿಳುನಾಡಿನಲ್ಲಿ ಗೆದ್ದ ವಿಜಯ್ಗೆ ಅಭಿನಂದನೆ ಸಲ್ಲಿಸಿ, ಸೋತ ನಾಯಕರೊಂದಿಗೆ ಚರ್ಚಿಸಿದ್ದಾರೆ.
ಭವಾನಿಪುರ (ಬಂಗಾಳ): ಬಿಜೆಪಿಯಿಂದ ರಾಜ್ಯದಲ್ಲಿ 100 ಸ್ಥಾನ ಲೂಟಿ, ಇದು ಅಕ್ರಮ. ಇದರ ವಿರುದ್ಧ ನಾವು ಪುಟಿದೇಳುತ್ತೇವೆ ಎಂದು ಬಂಗಾಳ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸೋಮವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಚುನಾವಣಾ ಆಯೋಗವು ಬಿಜೆಪಿಯ ಆಯೋಗ. ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ, ಆದರೆ ಅವರು ಏನನ್ನೂ ಮಾಡುತ್ತಿಲ್ಲ. ಇದು ಗೆಲುವು ಎಂದು ನೀವು ಭಾವಿಸುತ್ತೀರಾ? ಇದು ಅನೈತಿಕ ಗೆಲುವು, ನೈತಿಕ ವಿಜಯವಲ್ಲ. ಚುನಾವಣಾ ಆಯೋಗವು ಕೇಂದ್ರ ಪಡೆಗಳು ಮತ್ತು ಪ್ರಧಾನಿ ಮತ್ತು ಗೃಹ ಸಚಿವರೊಂದಿಗೆ ಏನು ಮಾಡಿದೆಯೋ ಅದು ಸಂಪೂರ್ಣವಾಗಿ ಕಾನೂನುಬಾಹಿರ. ಇದು ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ’ ಎಂದರು.
ರಾಹುಲ್ ನಾಯಕತ್ವದಲ್ಲಿ 99 ಸೋಲು: ಬಿಜೆಪಿ ವ್ಯಂಗ್ಯ
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 99 ಸೋಲು ಅನುಭವಿಸಿದೆ. ಶತಕಕ್ಕೆ 1 ಮಾತ್ರ ಬಾಕಿ ಇದೆ. ಚುನಾವಣೆ ಕ್ರೀಡೆ ಆಗಿದ್ದರೆ, ಅವರು ಶತಕ ಬಾರಿಸಿದ ಸಾಧನೆ ಮಾಡುವುದು ದೂರವಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಹುಲ್ ಅಡಿ ಸೋತ 99 ಚುನಾವಣೆ ಇವು ಎಂದು ನಕ್ಷೆ ಟ್ವೀಟ್ ಮಾಡಿರುವ ಬಿಜೆಪಿ, ‘99 ಸೋಲು ಅಂಕಿ ಅಂಶವಲ್ಲ. ಅದು ಪ್ರಾಯೋಗಿಕ ಸರಣಿ. ಏನೇ ಪ್ರಚಾರ ಮಾಡಿದರೂ ಬ್ರಾಂಡಿಂಗ್ ಮಾಡಿದರೂ ಫಲಿತಾಂಶ ಬದಲಾಗಲ್ಲ. ಫಲಿತಾಂಶ? ಯಾವಾಗಲೂ ಒಂದೇ ಆಗಿರುತ್ತದೆ. ಶತಕದ ಸಮೀಪ ಬರುತ್ತಿದ್ದೀರಿ. ವೆಲ್ ಡನ್ ರಾಗಾ’ ಎಂದು ಕುಟುಕಿದೆ.
ವಿಜಯ್ ಜತೆ ರಾಗಾ ಮಾತು: ಗೆಲುವಿಗೆ ಪ್ರಶಂಸೆ
ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ವಿಜಯ್ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೋನ್ನಲ್ಲಿ ಮಾತನಾಡಿ ಅಭಿನಂದಿಸಿದ್ದಾರೆ. ಟಿವಿಕೆಗೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜತೆ ಮೈತ್ರಿ ಚರ್ಚೆ ನಡೆದಿದೆ ಎಂಬ ಗುಸುಗುಸು ಬೆನ್ನಲ್ಲೇ ನಡೆದಿರುವ ಈ ಮಾತುಕತೆ ಕುತೂಹಲ ಕೆರಳಿಸಿದೆ,
ಮಾತುಕತೆ ಬಳಿಕ ಹೇಳಿಕೆ ನೀಡಿರುವ ರಾಹುಲ್ ‘ಈ ಜನಾದೇಶವು ಯುವಕರ ಬೆಳೆಯುತ್ತಿರುವ ಧ್ವನಿಯನ್ನು ಪ್ರತಿಬಿಂಬಿಸುತ್ತದೆ, ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಟಿವಿಕೆಯ ಅದ್ಭುತ ಫಲಿತಾಂಶಕ್ಕಾಗಿ ವಿಜಯ್ರನ್ನು ಅಭಿನಂದಿಸಿದ್ದೇನೆ’ ಎಂದರು.
ಇದೇ ವೇಳೆ, ತಮಿಳುನಾಡು ಮತ್ತು ಪುದುಚೇರಿಯ ಕಾಂಗ್ರೆಸ್ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಬೆಂಬಲಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಕಾಂಗ್ರೆಸ್ ಪಕ್ಷವು ತಮಿಳುನಾಡು ಮತ್ತು ಪುದುಚೇರಿಯ ಜನರನ್ನು ರಕ್ಷಿಸುವುದನ್ನು ಮತ್ತು ಸೇವೆ ಮಾಡುವುದನ್ನು ಮುಂದುವರಿಸುತ್ತದೆ’ಎಂದು ಸ್ಪಷ್ಟಪಡಿಸಿದರು.
ಅತ್ತ ಸೋತ ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಜತೆಗೂ ರಾಹುಲ್ ಮಾತನಾಡಿ, ಸೋಲಿನ ಪರಾಮರ್ಶೆ ನಡೆಸಿದರು.


