- ದಿಲ್ಲಿಯಲ್ಲಿ ಪಂಜಾಬ್ ಪೊಲೀಸರಿಂದ ಬಂಧನ- ಹರಾರಯಣ ಪೊಲೀಸರ ತಡೆ- ಕೇಜ್ರಿಗೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ
ನವದೆಹಲಿ (ಮೇ.7): ಟ್ವೀಟ್ಗಳ ಮೂಲಕ ಸದಾ ಸುದ್ದಿಯಲ್ಲಿರುವ ದಿಲ್ಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಬಗ್ಗಾ (BJP Leader Tajinder Pal Bagga) ಅವರ ‘ಬಂಧನ’ದ ಹೈಡ್ರಾಮಾ ಶುಕ್ರವಾರ ನಡೆದಿದೆ. ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ ಕೇಜ್ರಿವಾಲ್ (delhi chief minister arvind kejriwal) ಅವರ ಪ್ರಾಣಕ್ಕೆ ಬೆದರಿಕೆ ಒಡ್ಡುವ ಹೇಳಿಕೆಗಳನ್ನು ನೀಡಿದ್ದರು ಎನ್ನಲಾದ ಬಗ್ಗಾ ಅವರನ್ನು ದಿಲ್ಲಿಯಲ್ಲಿ ಪಂಜಾಬ್ ಪೊಲೀಸರು (Punjab Police) ಬಂಧಿಸಿ ತಮ್ಮ ರಾಜ್ಯದತ್ತ ಕರೆದೊಯ್ಯುತ್ತಿದ್ದರು. ಆಗ ಮಾರ್ಗ ಮಧ್ಯೆ ಕುರುಕ್ಷೇತ್ರದಲ್ಲಿ ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರನ್ನು ತಡೆದಿದ್ದಾರೆ. ಬಳಿಕ ಕುರುಕ್ಷೇತ್ರಕ್ಕೆ ಆಗಮಿಸಿದ ದಿಲ್ಲಿ ಪೊಲೀಸರು, ಬಗ್ಗಾ ಅವರನ್ನು ವಾಪಸ್ ಕರೆದೊಯ್ದಿದ್ದಾರೆ.
ಇಡೀ ಘಟನೆ ಆಪ್-ಬಿಜೆಪಿ (Aap and BJP) ನಡುವೆ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ‘ಪಂಜಾಬ್ನಲ್ಲಿ ಕೋಮು ಪ್ರಚೋದನೆ ಮಾಡಿದ್ದಕ್ಕೆ ಬಗ್ಗಾ ಅವರನ್ನು ಬಂಧಿಸಲಾಗಿದೆ’ ಎಂದು ಆಪ್ ಸಮರ್ಥಿಸಿಕೊಂಡಿದೆ. ಆದರೆ, ‘ಕೇಜ್ರಿವಾಲ್ ಅವರ ಮುಖವಾಡ ಬಯಲು ಮಾಡುತ್ತಿದ್ದ ಕಾರಣಕ್ಕೆ ಬಗ್ಗಾ ಬಂಧಿಸಲಾಗಿದೆ. ಈ ಬಂಧನ ಅಕ್ರಮ. ಕೇಜ್ರಿವಾಲ್ ತಮ್ಮ ಸ್ವಾರ್ಥಕ್ಕೆ ಪಂಜಾಬ್ ಪೊಲೀಸರನ್ನು ಬಳಸಿಕೊಂಡಿರುವುದು ಖಂಡನಾರ್ಹ’ ಎಂದು ಬಿಜೆಪಿ ಕಿಡಿಕಾರಿದೆ.
5 ಬಾರಿ ವಿಚಾರಣೆಗೆ ಗೈರು: ಇತ್ತೀಚೆಗೆ ‘ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಕೇಜ್ರಿವಾಲ್ ಮಾಡಿದ ಟೀಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ, ಕೇಜ್ರಿ ಮನೆ ಮುಂದೆ ಏ.1ರಂದು ಧರಣಿ ನಡೆಸಿತ್ತು. ಈ ವೇಳೆ ಅಲ್ಲಿ ಕೇಜ್ರಿವಾಲ್ ವಿರುದ್ಧ ಬಗ್ಗಾ ಎಚ್ಚರಿಕೆ ಸಂದೇಶ ನೀಡಿದ್ದರು. ‘ಕೇಜ್ರಿವಾಲ್ರನ್ನು ಜೀವಂತ ಇರಲು ನಾನು ಬಿಡಲ್ಲ’ ಎಂದು ಬಗ್ಗಾ ಹೇಳಿದ್ದರು ಹಾಗೂ ಕೋಮುಪ್ರಚೋದಕ ಹೇಳಿಕೆ ನೀಡಿದ್ದರು ಎಂದು ಪಂಜಾಬ್ನ ಮೊಹಾಲಿಯ ಆಪ್ ನಾಯಕ ಸನ್ನಿ ಅಗರ್ವಾಲ್ ಅವರು ಮೊಹಾಲಿ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ 5 ಬಾರಿ ವಿಚಾರಣೆಗೆ ಸಮನ್ಸ್ ಹೋದರೂ ಬಗ್ಗಾ ಉತ್ತರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಬಗ್ಗಾ ಅವರ ದಿಲ್ಲಿ ನಿವಾಸಕ್ಕೆ ಬಂದ ಪಂಜಾಬ್ ಪೊಲೀಸರು, ಅವರನ್ನು ಬಂಧಿಸಿ ಪಂಜಾಬ್ನತ್ತ ಕರೆದೊಯ್ದರು. ‘ಆದರೆ ನನ್ನ ಮನೆಗೆ ಬಂದ 50-60 ಜನರು ಪುತ್ರ ತೇಜಿಂದರ್ನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಸಿಖ್ಖರ ರುಮಾಲು ಕೂಡ ಧರಿಸಲು ಪೊಲೀಸರು ಆತನಿಗೆ ಅವಕಾಶ ನೀಡಲಿಲ್ಲ. ಘಟನೆಯ ಶೂಟ್ ಮಾಡುತ್ತಿದ್ದ ನನ್ನ ಹಾಗೂ ಮಗನ ಮೊಬೈಲನ್ನು ಕಸಿದುಕೊಂಡರು. ನನ್ನ ಮೇಲೂ ಹಲ್ಲೆ ಮಾಡಿದರು’ ಎಂದು ಬಗ್ಗಾ ತಂದೆ ಪ್ರೀತ್ ಪಾಲ್ ಅವರು ದಿಲ್ಲಿಯ ಜನಕಪುರಿ ಪೊಲೀಸ್ ಠಾಣೆಗೆ ದೂರು ನೀಡಿದರು.
ಬಳಿಕ ಅಪಹರಣ ಹಾಗೂ ಹಲ್ಲೆ ಎಫ್ಐಆರ್ ದಾಖಲಿಸಿಕೊಂಡ ದಿಲ್ಲಿ ಪೊಲೀಸರು ಬಗ್ಗಾಗೆ ತಲಾಶೆ ಆರಂಭಿಸಿದಾಗ ಹರಾರಯಣದಲ್ಲಿ ಸಾಗುತ್ತಿರುವುದು ತಿಳಿಯಿತು. ಆಗ ಹರ್ಯಾಣ ಪೊಲೀಸರ ಸಹಕಾರವನ್ನು ದಿಲ್ಲಿ ಪೊಲೀಸರು ಕೋರಿದರು. ಹರ್ಯಾಣ ಪೊಲೀಸರು ತಕ್ಷಣವೇ ಫೀಲ್ಡಿಗಿಳಿದು ಕುರುಕ್ಷೇತ್ರದಲ್ಲಿ ಬಗ್ಗಾರನ್ನು ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸರಿಗೆ ತಡೆ ಹಾಕಿದರು. ಆಗ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕುರುಕ್ಷೇತ್ರಕ್ಕೆ ಆಗಮಿಸಿದ ದಿಲ್ಲಿ ಪೊಲೀಸರು ಬಗ್ಗಾರನ್ನು ವಾಪಸ್ ದಿಲ್ಲಿಗೆ ಕರೆತಂದಿದ್ದಾರೆ.
ಉದ್ಯೋಗಿಗಳಿಗೆ ಮಧ್ಯಾಹ್ನ ಅರ್ಧಗಂಟೆ ಮಲಗೋಕೆ ಟೈಮ್ ಕೊಡುತ್ತೆ ಈ ಕಂಪನಿ
ಪೊಲೀಸರ ವಾಕ್ಸಮರ: ನಿಯಮಾನುಸಾರ ನಮಗೆ ಮಾಹಿತಿ ನೀಡದೇ, ಪಂಜಾಬ್ ಪೊಲೀಸರು ಬಗ್ಗಾರನ್ನು ಬಂಧಿಸಿದ್ದರು. ಇದು ಅಕ್ರಮ ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ. ಆದರೆ ಇದನ್ನು ಪಂಜಾಬ್ ಪೊಲೀಸರು ತಳ್ಳಿಹಾಕಿದ್ದು, ‘ಜನಕಪುರಿ ಠಾಣೆಗೆ ಗುರುವಾರ ರಾತ್ರಿಯೇ ಭೇಟಿ ನೀಡಿದ್ದ ನಮ್ಮ ತಂಡ, ಬಗ್ಗಾ ಬಂಧನದ ಮಾಹಿತಿ ನೀಡಿತ್ತು’ ಎಂದಿದ್ದಾರೆ. ಈ ನಡುವೆ, ದಿಲ್ಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈದ್ ಪಾರ್ಟಿಯಲ್ಲಿ ಬಿರಿಯಾನಿ ಜೊತೆ ಆಭರಣ ನುಂಗಿದ ವ್ಯಕ್ತಿ
ಪಂಜಾಬ್ ಸರ್ಕಾರ ಹೈಕೋರ್ಟ್ ಗೆ: ಬಗ್ಗಾರನ್ನು ಪುನಃ ದಿಲ್ಲಿ ಪೊಲೀಸರು ದಿಲ್ಲಿಗೆ ಕರೆದೊಯ್ದಿದ್ದು ಅಕ್ರಮ ಎಂದು ಪಂಜಾಬ್ ಪೊಲೀಸರು ಪಂಜಾಬ್ ಹೈಕೋರ್ಚ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದನ್ನು ತಕ್ಷಣಕ್ಕೆ ವಿಚಾರಣೆ ನಡೆಸಲು ಒಪ್ಪದ ಹೈಕೋರ್ಚ್, ಶನಿವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.
