'ಅಶೋಕ್‌ ಮತ್ತು ವೈಭವ್‌ ಗೆಹ್ಲೋಟ್‌ ದೇಶಾದ್ಯಂತ ಇರುವ ಹಲವು ಉದ್ಯಮಿಗಳೊಂದಿಗೆ ನಂಟು ಹೊಂದಿದ್ದು, ಅವರು ಅಪ್ಪ-ಮಗನ ಅಕ್ರಮ ಹಣ ವರ್ಗಾವಣೆಗೆ ನೆರವಾಗುತ್ತಿದ್ದಾರೆ' ಎಂದು ಬಿಜೆಪಿ ಸಂಸದ ಇ.ಡಿ.ಗೆ ದೂರು ನೀಡಿದ್ದಾರೆ.

ಜೈಪುರ (ಜೂನ್ 10, 2023): ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಅವರ ಪುತ್ರ ವೈಭವ್‌ ಗೆಹ್ಲೋಟ್‌ ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ವಿಸ್ತೃತ ತನಿಖೆ ನಡೆಸಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯಕ್ಕೆ ಶುಕ್ರವಾರ ದೂರು ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಲಾಲ್‌ ಮೀನಾ ಈ ದೂರು ಸಲ್ಲಿಸಿದ್ದಾರೆ.

'ಅಶೋಕ್‌ ಮತ್ತು ವೈಭವ್‌ ಗೆಹ್ಲೋಟ್‌ ದೇಶಾದ್ಯಂತ ಇರುವ ಹಲವು ಉದ್ಯಮಿಗಳೊಂದಿಗೆ ನಂಟು ಹೊಂದಿದ್ದು, ಅವರು ಅಪ್ಪ-ಮಗನ ಅಕ್ರಮ ಹಣ ವರ್ಗಾವಣೆಗೆ ನೆರವಾಗುತ್ತಿದ್ದಾರೆ. ಅಶೋಕ್‌ ಮತ್ತು ವೈಭವ್‌ ಮಾರಿಷಸ್‌ನಲ್ಲಿರುವ ಶೆಲ್‌ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸುತ್ತಿದ್ದಾರೆ'. 

ಇದನ್ನು ಓದಿ: From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

'ಒಂದು ವೇಳೆ ತನಿಖೆ ನಡೆಸಿದರೆ ಅಶೋಕ್‌ ಗೆಹ್ಲೋಟ್‌ ದೇಶದ ಅತ್ಯಂತ ಶ್ರೀಮಂತ ರಾಜಕಾರಣಿ ಎಂದು ಸಾಬೀತಾಗಲಿದೆ. ಹೀಗಾಗಿ ನಮ್ಮ ಆರೋಪಗಳ ಕುರಿತು ವಿಸ್ತೃತ ತನಿಖೆ ನಡೆಸಬೇಕು' ಎಂದು ಮೀನಾ ತಮ್ಮ 10 ಪುಟಗಳ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನಲ್ಲಿ ವೈಭವ್‌ರ ಪತ್ನಿ, ಇಬ್ಬರು ಉದ್ಯಮಿಗಳ ಹೆಸರನ್ನೂ ಪ್ರಸ್ತಾಪಿಸಲಾಗಿದೆ.

ಸಂಸದರು ಬೆಂಬಲಿಗರ ಗುಂಪಿನೊಂದಿಗೆ ರಾಜಸ್ಥಾನ ರಾಜಧಾನಿ ಕೇಂದ್ರ ಸಂಸ್ಥೆಯ ಕಚೇರಿಗೆ ಆಗಮಿಸಿ 10 ಪುಟಗಳ ದೂರನ್ನು ಇಡಿ ಜಂಟಿ ನಿರ್ದೇಶಕರಿಗೆ ಹಸ್ತಾಂತರಿಸಿದರು. ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವೈಭವ್ ಗೆಹ್ಲೋಟ್ ಅವರು ಅಶೋಕ್ ಗೆಹ್ಲೋಟ್‌ನಿಂದ ಬಂದಿರುವ ಅಕ್ರಮ ಹಣವನ್ನು ಬಳಸಿಕೊಂಡು ದೇಶಾದ್ಯಂತ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!

ಕಿರೋಡಿ ಲಾಲ್‌ ಮೀನಾ ಅವರು ಆಪಾದಿತ ಮನಿ ಲಾಂಡರಿಂಗ್ ಹಗರಣದ ಭಾಗವಾಗಿದೆ ಎಂದು ಆರೋಪಿಸಿ ಎರಡು ಹೋಟೆಲ್ ವ್ಯವಹಾರಗಳನ್ನು ಹೆಸರಿಸಿದ್ದಾರೆ. ದೂರಿನಲ್ಲಿ ಪ್ರಸ್ತುತಪಡಿಸಲಾದ "ವಾಸ್ತವಗಳು" ಇಡಿಯಿಂದ ವಿವರವಾದ, ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಬಿಜೆಪಿ ನಾಯಕ ಹೇಳಿದರು.

ವೈಭವ್ ಗೆಹ್ಲೋಟ್ ಮತ್ತು ಇತರರು ತೆರಿಗೆ ವಂಚನೆ ಮತ್ತು ಬೇನಾಮಿ ವಹಿವಾಟು ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಒಂದು ದಿನ ಮುಂಚಿತವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಿರೋಡಿ ಲಾಲ್‌ ಮೀನಾ, ತನಿಖೆಯಿಂದ ರಾಜಸ್ಥಾನ ಸಿಎಂ ದೇಶದ ಅತ್ಯಂತ ಶ್ರೀಮಂತ ರಾಜಕಾರಣಿ ಎಂದು ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಸಿಎಂಗೆ ಮುಖಭಂಗ: ಸಚಿನ್‌ ಪೈಲಟ್‌ ಪರ ಬ್ಯಾಟ್‌ ಬೀಸಿದ ಗೆಹ್ಲೋಟ್‌ ಸರ್ಕಾರದ ಸಚಿವ..!