ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗುವ ಕೆಲವೇ ನಿಮಿಷಗಳ ಮೊದಲು, ಭೂಮಿ ಚೌಹಾಣ್ ಎಂಬ ಮಹಿಳೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರಿಂದ ಕೇವಲ 10 ನಿಮಿಷಗಳ ಅಂತರದಲ್ಲಿ ವಿಮಾನವನ್ನು ತಪ್ಪಿಸಿಕೊಂಡರು.
ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾದ ಕೆಲವೇ ನಿಮಿಷಗಳ ಮೊದಲು, ಭೂಮಿ ಚೌಹಾಣ್ ಎಂಬ ಮಹಿಳೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರಿಂದ ಕೇವಲ 10 ನಿಮಿಷಗಳ ಅಂತರದಲ್ಲಿ ವಿಮಾನವನ್ನು ತಪ್ಪಿಸಿಕೊಂಡರು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಕೇವಲ ಹತ್ತು ನಿಮಿಷಗಳ ಅಂತರದಲ್ಲಿ ವಿಮಾನ ದುರಂತದಿಂದ ಪಾರಾಗಿರುವ ಈ ಮಹಿಳೆ ಭೂಮಿ ಮೇಲಿನ ಅದೃಷ್ಟವಂತ ಮಹಿಳೆಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ, ಘಟನೆಯಿಂದ ನಾನು ಇನ್ನೂ ನಡುಗುತ್ತಿದ್ದೇನೆ ಎಂದು ತಮ್ಮ ಆಘಾತದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.
ವಿಮಾನ ದುರಂತದಲ್ಲಿ ನೂರಾರು ಪ್ರಯಾಣಿಕರು ದುರ್ಮರಣಕ್ಕೀಡಾದ ಸುದ್ದಿ ಕೇಳಿದಾಗ ನಾನು ಸಂಪೂರ್ಣವಾಗಿ ಆಘಾತಗೊಂಡೆ. ನನ್ನ ದೇಹ ಅಕ್ಷರಶಃ ನಡುಗುತ್ತಿದೆ. ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಘಟನೆಯ ಬಗ್ಗೆ ಯೋಚಿಸಿದಾಗ ನನ್ನ ಮನಸ್ಸು ಖಾಲಿಯಾಗಿದೆ ಎಂದಿದ್ದಾರೆ.
ಮಧ್ಯಾಹ್ನ 1:30 ರ ಸುಮಾರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೊರಟಿದ್ದ ಚೌಹಾಣ್, ಸಂಚಾರ ದಟ್ಟಣೆಯಿಂದಾಗಿ ಕೇವಲ 8 ನಿಮಿಷಗಳ ಅಂತರದಲ್ಲಿ ವಿಮಾನ ತಪ್ಪಿಸಿಕೊಂಡರು. ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:38ಕ್ಕೆ ವಿಮಾನ ನಿಲ್ದಾಣದ ಆಸುಪಾಸಿನ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ನನ್ನ ಮನಸ್ಸು ಸಂಪೂರ್ಣವಾಗಿ ಖಾಲಿಯಾಗಿದೆ. ನಾನು ದೇವರಿಗೆ ಕೃತಜ್ಞಳಾಗಿದ್ದೇನೆ. ಗಣಪತಿ ಬಪ್ಪಾ ನನ್ನನ್ನು ಕಾಪಾಡಿದರು ಎಂದು ಅವರು ಭಾವುಕರಾಗಿ ಹೇಳಿದರು.
ಲಂಡನ್ನಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿರುವ ಭೂಮಿ ಚೌಹಾಣ್, ಎರಡು ವರ್ಷಗಳ ನಂತರ ರಜೆಗಾಗಿ ಭಾರತಕ್ಕೆ ಆಗಮಿಸಿದ್ದರು. ಆದರೆ ಮತ್ತೆ ಮರಳಿ ಪ್ರಯಾಣಿಸುವಾಗ ಆ ಹತ್ತು ನಿಮಿಷಗಳ ತಡವಾದ ಕಾರಣದಿಂದಾಗಿ ನಾನ ವಿಮಾನವನ್ನು ತಪ್ಪಿಸಿಕೊಂಡರು. ಈ ಘಟನೆ ಬಗ್ಗೆ ಹೇಗೆ ವಿವರಿಸಬೇಕು ಎಂಬುದೇ ತೋಚುತ್ತಿಲ್ಲ. ಮಾತು ಬರುತ್ತಿಲ್ಲ. ಅಕ್ಷರಶಃ ನಾನೀಗ ಖಾಲಿಯಾಗಿದ್ದೇನೆ' ಎಂದು ಅವರು ತಮ್ಮ ಅದೃಷ್ಟಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು.
